ಚೆಂಡು ತಾಗಿ ರಣಜಿ ಆಟಗಾರ ಆಸ್ಪತ್ರೆಗೆ ದಾಖಲು

ಅಹ್ಮದಾಬಾದ್, ನ.23: ರಣಜಿ ಟ್ರೋಫಿ ಪಂದ್ಯದ ವೇಳೆ ಫೀಲ್ಡಿಂಗ್ ನಿರತರಾಗಿದ್ದ ಹೈದರಾಬಾದ್ ತಂಡದ ಆಟಗಾರ ತನ್ಮಯ್ ಅಗರವಾಲ್ ತಲೆಗೆ ಕ್ರಿಕೆಟ್ ಚೆಂಡು ಅಪ್ಪಳಿಸಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.
ಛತ್ತೀಸ್ಗಡ ವಿರುದ್ಧ ಬುಧವಾರ ಇಲ್ಲಿ ನಡೆದ ರಣಜಿ ಟ್ರೊಫಿ ಸಿ ಗುಂಪಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ.
21ರ ಹರೆಯದ ತನ್ಮಯ್ ಫಾರ್ವರ್ಡ್ ಶಾರ್ಟ್-ಲೆಗ್ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದರು. ಛತ್ತೀಸ್ಗಡದ ಬ್ಯಾಟ್ಸ್ಮನ್ ಮನೋಜ್ ಸಿಂಗ್ ಎಡಗೈ ಸ್ಪಿನ್ನರ್ ಮೆಹ್ದಿ ಹಸನ್ ಎಸೆತವನ್ನು ತಳ್ಳಿದಾಗ ಚೆಂಡು ತನ್ಮಯ್ ಹೆಲ್ಮೆಟ್ಗೆ ತಾಗಿತು. ಚೆಂಡು ಹೆಲ್ಮೆಟ್ಗೆ ಅಪ್ಪಳಿಸಿದ ಹೊರತಾಗಿಯೂ ತನ್ಮಯ್ ಕ್ಯಾಚ್ ಪಡೆದು ಮನೋಜ್ರನ್ನು ಔಟ್ ಮಾಡಿದರು. ಆದರೆ, ಅವರು ತಕ್ಷಣವೇ ಮೈದಾನದಲ್ಲಿ ಕುಸಿದು ಬಿದ್ದರು.
ಅಂಪೈರ್ಗಳು ಸ್ಟ್ರಚರ್ನ್ನು ತರಿಸಿ ತನ್ಮಯ್ರನ್ನು ಮೈದಾನದಿಂದ ಹೊರ ಕೊಂಡೊಯ್ದರು. ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ತನ್ಮಯ್ರನ್ನು ಆಸ್ಪತ್ರೆಗೆ ಸೇರಿಸಲು ಸಲಹೆ ನೀಡಿದ್ದಾರೆ.
Next Story





