ಪೌರಾಯುಕ್ತೆಯ ವಿರುದ್ಧ ಅವಿಶ್ವಾಸ: ತುರ್ತುಸಭೆಗೆ ಜಿಲ್ಲಾಧಿಕಾರಿಗೆ ಮನವಿ
ಉಳ್ಳಾಲ, ನ.24: ಕಳೆದ ಒಂದು ತಿಂಗಳ ಹಿಂದಷ್ಟೇ ಉಳ್ಳಾಲ ನಗರಸಭೆಯ ಪೌರಾಯುಕ್ತೆಯಾಗಿ ಅಧಿಕಾರ ವಹಿಸಿರುವ ವಾಣಿ ಆಳ್ವರನ್ನು ವರ್ಗಾಯಿಸುವಂತೆ ನಗರಸಭೆ ಆಡಳಿತಾರೂಢ ಕಾಂಗ್ರೆಸ್ ಸದಸ್ಯರಲ್ಲದೆ ವಿರೋಧ ಪಕ್ಷದ ಸದಸ್ಯರೂ ಸೇರಿ ತಿಂಗಳ ಹಿಂದೆ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಆದರೆ ಮನವಿ ಫಲಕಾರಿಯಾಗದ ಹಿನ್ನೆಲೆಯಲ್ಲಿ ನಗರಾಧ್ಯಕ್ಷ ಹುಸೈನ್ ಕುಂಞಿಮೋನು ಖುದ್ದು ಜಿಲ್ಲಾಧಿಕಾರಿ ಬಳಿ ತೆರಳಿ ಪೌರಾಯುಕ್ತೆಯ ವಿರುದ್ಧ ಅವಿಶ್ವಾಸ ಮಂಡನೆಗೆ ತುರ್ತು ಸಭೆ ಕರೆಯುವಂತೆ ಲಿಖಿತವಾಗಿ ಮನವಿ ಮಾಡಿದ್ದಾರೆ.
ನ.29ರಂದು ಉಳ್ಳಾಲ ನಗರ ಸಾಮಾನ್ಯ ಸಭೆ ನಡೆಯಲಿದ್ದು, ಅದಕ್ಕಿಂತ ಮೊದಲು ಪೌರಾಯುಕ್ತೆ ವಾಣಿ ಆಳ್ವರ ವಿರುದ್ಧ ಅವಿಶ್ವಾಸ ಮಂಡನೆಗೆ ತುರ್ತು ಸಭೆ ಕರೆಸುವಂತೆ ಆಡಳಿತಾರೂಢ ಕಾಂಗ್ರೆಸ್ನ 10 ಸದಸ್ಯರು ನಗರಾಧ್ಯಕ್ಷರಿಗೆ ಮನವರಿಕೆ ಮಾಡಿದ್ದರು. ಈ ನಿಟ್ಟಿನಲ್ಲಿ ಅಧ್ಯಕ್ಷ ಹುಸೈನ್ ಕುಂಞಿಮೋನು ಪೌರಾಯುಕ್ತೆ ವಾಣಿಯವರಲ್ಲಿ ಸಾಮಾನ್ಯ ಸಭೆಗೂ ಮುನ್ನ ನಿಮ್ಮ ವಿರುದ್ಧದ ಅವಿಶ್ವಾಸ ನಿರ್ಣಯ ಸಭೆಗೆ ಅವಕಾಶ ಕಲ್ಪಿಸುವಂತೆ ಹೇಳಿದ್ದಾರೆನ್ನಲಾಗಿದೆ. ಆದರೆ ವಾಣಿ ಇದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.