ಮ್ಯಾನ್ಮಾರ್: ರೊಹಿಂಗ್ಯ ಮುಸ್ಲಿಮರ ‘ಸಂತತಿ ನಾಶ’ದಲ್ಲಿ ತೊಡಗಿರುವ ಸರಕಾರ
ವಿಶ್ವಸಂಸ್ಥೆ ಆರೋಪ

ಟೆಕ್ನಾಫ್ (ಬಾಂಗ್ಲಾದೇಶ), ನ. 25: ಮ್ಯಾನ್ಮಾರ್ ರೊಹಿಂಗ್ಯ ಮುಸ್ಲಿಮರ ‘ಜನಾಂಗೀಯ ನಾಶ’ದಲ್ಲಿ ತೊಡಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ತಮ್ಮ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಹತ್ಯೆಗಳ ಭಯಾನಕ ಕತೆಗಳನ್ನು ಮ್ಯಾನ್ಮಾರ್ನಿಂದ ಬಾಂಗ್ಲಾದೇಶಕ್ಕೆ ಪಲಾಯನಗೈದ ಸಾವಿರಾರು ರೊಹಿಂಗ್ಯ ಮುಸ್ಲಿಮರು ಹೇಳುತ್ತಿದ್ದಾರೆ.
ಹಿಂಸಾಚಾರಕ್ಕೆ ಹೆದರಿ ಸುಮಾರು 30,000 ರೊಹಿಂಗ್ಯರು ಮ್ಯಾನ್ಮಾರ್ನಲ್ಲಿನ ತಮ್ಮ ಮನೆಗಳನ್ನು ತೊರೆದು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ರೊಹಿಂಗ್ಯ ಮುಸ್ಲಿಮರು ವಾಸಿಸುತ್ತಿದ್ದ ಕಿರಿದಾದ ಪ್ರದೇಶಕ್ಕೆ ಈ ತಿಂಗಳ ಆರಂಭದಲ್ಲಿ ಸೈನಿಕರು ಭಾರೀ ಪ್ರಮಾಣದಲ್ಲಿ ಕಾಲಿಟ್ಟ ಬಳಿಕ ಅವರು ಪಲಾಯನ ಮಾಡಿದ್ದಾರೆ.
‘‘ಮ್ಯಾನ್ಮಾರ್ ಸೈನಿಕರು ಪುರುಷರನ್ನು ಕೊಲ್ಲುತ್ತಿದ್ದಾರೆ, ಅವರ ಮೇಲೆ ಗುಂಡು ಹಾರಿಸುತ್ತಿದ್ದಾರೆ, ಮಕ್ಕಳನ್ನು ಹತ್ಯೆಗೈಯುತ್ತಿದ್ದಾರೆ, ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ, ಮನೆಗಳನ್ನು ಲೂಟಿ ಮಾಡಿ ಬೆಂಕಿ ಕೊಡುತ್ತಿದ್ದಾರೆ ಹಾಗೂ ಜನರು ನದಿ ದಾಟಿ ಬಾಂಗ್ಲಾದೇಶಕ್ಕೆ ಹೋಗುವಂತೆ ಬಲವಂತಪಡಿಸುತ್ತಿದ್ದಾರೆ’’ ಎಂದು ಬಾಂಗ್ಲಾದೇಶದ ಗಡಿ ಪಟ್ಟಣ ಕಾಕ್ಸ್ಬಜಾರ್ನಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ (ಯುಎನ್ಎಚ್ಸಿಆರ್)ಯ ಮುಖ್ಯಸ್ಥ ಜಾನ್ ಮೆಕಿಸಿಕ್ ಬಿಬಿಸಿಗೆ ಹೇಳಿದ್ದಾರೆ.
ಮಾನವೀಯ ಬಿಕ್ಕಟ್ಟನ್ನು ತಡೆಯಲು ಬಾಂಗ್ಲಾದೇಶ ತನ್ನ ಗಡಿಯನ್ನು ತೆರೆಯಬೇಕು ಎಂಬ ಅಂತಾರಾಷ್ಟ್ರೀಯ ಸಮುದಾಯದ ತುರ್ತು ಮನವಿಗೆ ಢಾಕಾ ಸ್ಪಂದಿಸಿಲ್ಲ. ಬದಲಿಗೆ ದೇಶವಿಲ್ಲದ ರೊಹಿಂಗ್ಯ ಸಮುದಾಯದ ಜನರು ಬಾಂಗ್ಲಾದೇಶ ಪ್ರವೇಶಿಸುವುದನ್ನು ತಡೆಯಲು ಮ್ಯಾನ್ಮಾರ್ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಅದು ಹೇಳಿತ್ತು.
‘‘ತನ್ನ ಗಡಿಯನ್ನು ತೆರೆಯುವುದು ಬಾಂಗ್ಲಾದೇಶಕ್ಕೆ ಸುಲಭವಿಲ್ಲ. ಯಾಕೆಂದರೆ, ಹೀಗೆ ಮಾಡಿದರೆ, ರೊಹಿಂಗ್ಯರ ಮೇಲಿನ ದೌರ್ಜನ್ಯವನ್ನು ಮುಂದುವರಿಸಿ ಅವರನ್ನು ಬಾಂಗ್ಲಾದೇಶಕ್ಕೆ ತಳ್ಳಲು ಮ್ಯಾನ್ಮಾರ್ಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಮ್ಯಾನ್ಮಾರ್ನಲ್ಲಿ ಮುಸ್ಲಿಮ್ ಅಲ್ಪಸಂಖ್ಯಾತರ ‘ಜನಾಂಗೀಯ ಶುದ್ಧೀಕರಣ’ದ ತನ್ನ ಅಂತಿಮ ಗುರಿಯನ್ನು ಸಾಧಿಸಲು ಮ್ಯಾನ್ಮಾರ್ಗೆ ಸುಲಭವಾಗುತ್ತದೆ’’ ಎಂದು ಮೆಕಿಸಿಕ್ ಹೇಳಿದರು.
ಈ ಹೇಳಿಕೆಗಳನ್ನು ಮ್ಯಾನ್ಮಾರ್ ಅಧ್ಯಕ್ಷ ಹಟಿನ್ ಕ್ಯಾವ್ ಖಂಡಿಸಿದ್ದಾರೆ.
‘‘ವಾಸ್ತವ ಸಂಗತಿಗಳನ್ನು ಆಧರಿಸಿ ವಿಶ್ವಸಂಸ್ಥೆ ಸಿಬ್ಬಂದಿ ಮಾತನಾಡಬೇಕು. ಅವರು ಆರೋಪಗಳನ್ನು ಮಾಡಬಾರದು. ಅವರ ವೃತ್ತಿಪರತೆ ಮತ್ತು ನೈತಿಕತೆಯನ್ನು ನಾನು ಪ್ರಶ್ನಿಸುತ್ತೇನೆ’’ ಎಂದು ಅವರು ಎಎಫ್ಪಿ ಸುದ್ದಿ ಸಂಸ್ಥೆಗೆ ಹೇಳಿದರು.
‘ಒಬ್ಬರ ಬಳಿಕ ಒಬ್ಬರಂತೆ ಅತ್ಯಾಚಾರ ಮಾಡಿದರು’
ಮ್ಯಾನ್ಮಾರ್ ಸೈನಿಕರ ಕ್ರೌರ್ಯವನ್ನು ರೊಹಿಂಗ್ಯ ಮುಸ್ಲಿಮ್ ಸಮುದಾಯದ ಹಬೀಬಾ ಮತ್ತು ಅವರ ಸಹೋದರಿ ತೆರೆದಿಟ್ಟಿದ್ದಾರೆ.
‘‘ಅವರು ನಮ್ಮಿಬ್ಬರನ್ನೂ ಮಂಚಕ್ಕೆ ಕಟ್ಟಿಹಾಕಿ ಸರದಿಯಲ್ಲಿ ಬಂದು ಅತ್ಯಾಚಾರ ನಡೆಸಿದರು’’ ಎಂದು 20 ವರ್ಷದ ಹಬೀಬಾ ಹೇಳಿದರು. ಅವರೀಗ ಬಾಂಗ್ಲಾದೇಶ-ಮ್ಯಾನ್ಮಾರ್ ಗಡಿಯಿಂದ ಕೆಲವು ಕಿಲೋಮೀಟರ್ ಒಳಗೆ ಆಶ್ರಯ ಪಡೆದಿದ್ದಾರೆ.
‘‘ನಾವಿಲ್ಲಿ ಹಸಿವಿನಿಂದ ಬಳಲುತ್ತಿದ್ದೇವೆ. ಆದರೆ, ಯಾರೂ ನಮ್ಮನ್ನು ಕೊಲ್ಲಲು ಅಥವಾ ಹಿಂಸಿಸಲು ಬಂದಿಲ್ಲ’’ ಎಂದು ಹಬೀಬಾರ ಅಣ್ಣ ಹಾಶಿಮ್ ಉಲ್ಲಾ ಹೇಳಿದರು. ಅವರು ತನ್ನ ಸೋದರಿಯರೊಂದಿಗೆ ತಪ್ಪಿಸಿಕೊಂಡು ಬಾಂಗ್ಲಾದೇಶ ಪ್ರವೇಶಿಸಿದ್ದಾರೆ.
ಉಡಾಂಗ್ನಲ್ಲಿರುವ ತಮ್ಮ ಮನೆಯಲ್ಲಿ ತಮ್ಮ ಮೇಲೆ ಅತ್ಯಾಚಾರ ನಡೆಸಿದ ಬಳಿಕ ಅವರು ತಮ್ಮ ಮನೆಗೆ ಬೆಂಕಿ ಕೊಟ್ಟರು ಎಂದು ಹಬೀಬಾ ಮತ್ತು ಅವರ ತಂಗಿ 18 ವರ್ಷದ ಸಮೀರಾ ಹೇಳಿದರು.
‘‘ಅವರು ಹೆಚ್ಚಿನ ಮನೆಗಳನ್ನು ಸುಟ್ಟರು. ನಮ್ಮ ತಂದೆ ಸೇರಿದಂತೆ ಹಲವಾರು ಮಂದಿಯನ್ನು ಕೊಂದರು ಹಾಗೂ ಹಲವಾರು ಎಳೆಯ ಹುಡುಗಿಯರ ಮೇಲೆ ಅತ್ಯಾಚಾರ ಮಾಡಿದರು’’ ಎಂದು ಹಬೀಬಾ ಹೇಳಿದರು.
‘‘ ‘ನಾವು ಇನ್ನೊಮ್ಮೆ ಇಲ್ಲಿಗೆ ಬಂದಾಗ ನೀವಿಲ್ಲಿ ಇದ್ದರೆ ನಿಮ್ಮನ್ನು ಕೊಲ್ಲುತ್ತೇವೆ’ ಎಂದು ಒಬ್ಬ ಸೈನಿಕ ನಮ್ಮ ಮನೆಯಿಂದ ಹೋಗುವ ಮುನ್ನ ಹೇಳಿದನು. ಬಳಿಕ ಅವರು ಮನೆಗೆ ಬೆಂಕಿ ಕೊಟ್ಟರು’’ ಎಂದರು.







