2025ಕ್ಕೆ 1.20 ಕೋಟಿ ಕೆಜಿ ಹಾಲು ಸಂಗ್ರಹದ ಗುರಿ: ಡಾ.ಸುರೇಶ್ ಬಾಬು
ಕ್ಷೀರ ಪಿತಾಮಹ ಡಾ.ವರ್ಗೀಸ್ ಕುರಿಯನ್ ಜನ್ಮ ದಿನಾಚರಣೆ
![2025ಕ್ಕೆ 1.20 ಕೋಟಿ ಕೆಜಿ ಹಾಲು ಸಂಗ್ರಹದ ಗುರಿ: ಡಾ.ಸುರೇಶ್ ಬಾಬು 2025ಕ್ಕೆ 1.20 ಕೋಟಿ ಕೆಜಿ ಹಾಲು ಸಂಗ್ರಹದ ಗುರಿ: ಡಾ.ಸುರೇಶ್ ಬಾಬು](https://www.varthabharati.in/sites/default/files/images/articles/2016/11/27/DSC_3332.jpg)
ಮಂಗಳೂರು, ನ.26: ರಾಜ್ಯದಲ್ಲಿ ಪ್ರತಿವರ್ಷ 72 ಲಕ್ಷ ಕೆಜಿ ಹಾಲು ಸಂಗ್ರಹಣೆಯಾಗುತ್ತಿದ್ದು, 2025ರ ವೇಳೆಗೆ ಇದನ್ನು 1 ಕೋಟಿ 20 ಲಕ್ಷ ಕೆಜಿಗೆ ಏರಿಸುವ ಗುರಿ ಹೊಂದಲಾಗಿದೆ ಎಂದು ಕರ್ನಾಟಕ ಹಾಲು ಮಹಾ ಮಂಡಳಿಯ ನಿರ್ದೇಶಕ ಡಾ. ಸುರೇಶ್ ಬಾಬು ವಿಶ್ವಾಸ ವ್ಯಕ್ತಪಡಿಸಿದ್ದಾರೆ ಭಾರತದ ಕ್ಷೀರ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಗರದ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಎಸ್ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ‘ಕರ್ನಾಟಕ ದನ ಮತ್ತು ಎಮ್ಮೆ ತಳಿಗಳ ಅಭಿವೃದ್ಧಿ ನೀತಿ-2015 ಹಾಗೂ ಕೃತಕ ಗರ್ಭಧಾರಣೆ ಕೌಶಲ್ಯ ಅಭಿವೃದ್ಧಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ತಳಿ ಸಂವರ್ಧನೆಗೆ ನಮ್ಮದೇ ಆದ ಬ್ರೀಡಿಂಗ್ ಪಾಲಿಸಿ ಇಲ್ಲ. ಕಳೆದೊಂದು ವರ್ಷದಿಂದ ಇದಕ್ಕಾಗಿ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಬಯೋ ಸೆಕ್ಯೂರಿಟಿ ಪ್ರಸ್ತಾವನೆ ಈಗಾಗಲೇ ಸರಕಾರದ ಮುಂದಿದ್ದು, ಅನುಮೋದನೆ ಬಳಿಕ ತಳಿ ಸಂವರ್ಧನೆಗೆ ಹಾದಿ ಸುಗಮವಾಗಲಿದೆ ಎಂದವರು ಅಭಿಪ್ರಾಯಪಟ್ಟರು.
ದ.ಕ. ಹಾಲು ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಎನ್ಡಿಆರ್ಐನ ಡಾ.ಕೆ.ಪಿ.ರಮೇಶ್, ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿ ಡಾ.ಹಿರೇಮಠ್ ಮುಖ್ಯ ಅತಿಥಿಗಳಾಗಿದ್ದರು.
ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಸಹಾಯಕ ವ್ಯವಸ್ಥಾಪಕ ಡಾ. ದಿನೇಶ್ ಸರಳಾಯ, ನಿರ್ದೇಶಕ ಸುಚರಿತ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ ಸ್ವಾಗತಿಸಿದರು. ಉಪ ವ್ಯವಸ್ಥಾಪಕ ಡಾಯ ರವಿರಾಜ ಉಡುಪ ವಂದಿಸಿದರು. ವಿಸ್ತರಣಾಧಿಕಾರಿ ಸುಧಾಕರ್ ನಿರೂಪಿಸಿದರು.