ಮೂಡುಬಿದಿರೆಯಲ್ಲಿ ಯುವಸಿರಿ ಇಂಟರ್ಯಾಕ್ಟ್ ಸಮ್ಮೇಳನ
ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆ ಪ್ರಥಮ, ತೋಕೂರು ತಪೋವನ ಶಾಲೆ ದ್ವಿತೀಯ
![ಮೂಡುಬಿದಿರೆಯಲ್ಲಿ ಯುವಸಿರಿ ಇಂಟರ್ಯಾಕ್ಟ್ ಸಮ್ಮೇಳನ ಮೂಡುಬಿದಿರೆಯಲ್ಲಿ ಯುವಸಿರಿ ಇಂಟರ್ಯಾಕ್ಟ್ ಸಮ್ಮೇಳನ](https://www.varthabharati.in/sites/default/files/images/articles/2016/11/28/mbd_nov27_3kadeshivalaya.jpg)
ಮೂಡುಬಿದಿರೆ, ನ.27: ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ ಹಾಗೂ ಜೈನ ಪಿಯು ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ ಆಶ್ರಯದಲ್ಲಿ ಎರಡು ದಿನಗಳ ಕಾಲ ವಿದ್ಯಾಗಿರಿಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಯುವಸಿರಿ-2016 ಅಂತರ್ ಇಂಟರ್ಯಾಕ್ಟ್ ಕ್ಲಬ್ ಸಮ್ಮೇಳನ ಹಾಗೂ ಸ್ಪರ್ಧೆಯಲ್ಲಿ ಕಡೇಶ್ವಾಲ್ಯದ ಸರಕಾರಿ ಪ್ರೌಢಶಾಲೆ ಪ್ರಥಮ ಹಾಗೂ ತೋಕೂರು ತಪೋವನ ಎಂ.ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ದ್ವಿತೀಯ ಸ್ಥಾನ ಗಳಿಸಿವೆ.
ತಲಪಾಡಿ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತೃತೀಯ ಬಹುಮಾನಕ್ಕೆ ಪಾತ್ರವಾದರೆ, ತೋಕೂರು ತಪೋವನ ಎಂ.ರಾಮಣ್ಣ ಶೆಟ್ಟಿ ಆಂಗ್ಲ ಮಾಧ್ಯಮ ಶಾಲೆಯ ವೈಷ್ಣವಿ ಕೆ. ಉತ್ತಮ ನಿರೂಪಕಿ ಪ್ರಶಸ್ತಿ ಪಡೆದರು. ರವಿವಾರ ನಡೆದ ಯುವಸಿರಿ ಸಮಾರೋಪ ಸಮಾರಂಭದಲ್ಲಿ ರೋಟರಿ ಜಿಲ್ಲೆ 3181ರ ನಿಯೋಜಿತ ಗವರ್ನರ್ ರೋಹಿನಾಥ್ ಪಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ ಅಧ್ಯಕ್ಷ ಧೀರಜ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಚ್ಪಿಸಿಎಲ್ನ ಪ್ರಾದೇಶಿಕ ವಿಭಾಗದ ಮುಖ್ಯ ಪ್ರಬಂಧಕ ವಸಂತ್ ರಾವ್, ರೋಟರಿ ವಲಯ 1ರ ಸಹಾಯಕ ಗವರ್ನರ್ ಜಿನರಾಜ್ ಸಿ. ಸಾಲ್ಯಾನ್, ಜೈನ ಪಿಯು ಕಾಲೇಜಿನ ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷ ಅದ್ವಿತ್ ಎಂ. ಜೈನ್, ರೋಟರಿ ಕ್ಲಬ್ ಮೂಡುಬಿದಿರೆ ಮಿಡ್ಟೌನ್ನ ಕಾರ್ಯದರ್ಶಿ ಜಯಸೂರ್ಯ ಉಪಸ್ಥಿತರಿದ್ದರು.
ಇದೇ ಸಂದರ್ಭ ಜಿಲ್ಲಾ ಪ್ರತಿನಿಧಿಯಾಗಿ ಭೂಮಿಕಾ ಪ್ರಿಯದರ್ಶಿನಿಯವರನ್ನು ಜಿಲ್ಲಾ ಇಂಟರ್ಯಾಕ್ಟ್ ಸಮಿತಿಯ ಅಧ್ಯಕ್ಷ ರಾಜ ಪತ್ರಾವೋ ಘೋಷಿಸಿದರು. ಜಿಲ್ಲಾ ಪ್ರತಿನಿಧಿ ಆಯ್ಕೆಯಲ್ಲಿದ್ದ ಪ್ರಸನ್ನರನ್ನು ಪುರಸ್ಕರಿಸಲಾಯಿತು. ಕಳೆದ ಬಾರಿ ಇಂಟರ್ಯಾಕ್ಟ್ ಜಿಲ್ಲೆಯನ್ನು ಮುನ್ನಡೆಸಿದ ಎಚ್.ಎಂ.ಹರೀಶ್ರನ್ನು ಸನ್ಮಾನಿಸಲಾಯಿತು. ಯುವಸಿರಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಿದ ಆಳ್ವಾಸ್ನ ಕೀರ್ತನ್, ಕಿರಣ್ ಭಟ್ರನ್ನು ಪುರಸ್ಕರಿಸಲಾಯಿತು. ಯುವಸಿರಿ ಸಮ್ಮೇಳನ ಆಯೋಜನೆಯ ಅಧ್ಯಕ್ಷ ಪ್ರತಾಪ್ ಕುಮಾರ್ ಸ್ವಾಗತಿಸಿದರು. ಐಶ್ವರ್ಯಾ ಜೈನ್ಅತಿಥಿಗಳನ್ನು ಪರಿಚಯಿಸಿದರು. ಪ್ರವೀಣ್ ಕುಮಾರ್ ಜೈನ್, ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.