ಫೈಝಲ್ ಹತ್ಯೆ: 8 ಮಂದಿಯ ಬಂಧನ

ತಿರುರಂಙಾಡಿ, ನ. 28: ಇಸ್ಲಾಮ್ ಸ್ವೀಕರಿಸಿದ್ದಕ್ಕೆ ಕೊಡಿಂಞಿ ಪುಲ್ಲಾಣಿ ಫೈಝಲ್ರನ್ನು(30) ಕಡಿದು ಕೊಲೆಗೈದ ಪ್ರಕರಣದಲ್ಲಿ ಸಹೋದರಿ ಪತಿ ಮತ್ತು ಬಿಜೆಪಿ -ಆರೆಸ್ಸೆಸ್ ಕಾರ್ಯಕರ್ತರ ಸಹಿತ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆಂದು ವರದಿಯಾಗಿದೆ. ಕೊಲೆಪಾತಕಕ್ಕೆ ಸಂಚು ಹೆಣೆದವರು ಮತ್ತು ಕೊಲೆಕೃತ್ಯಕ್ಕೆ ಸಹಾಯ ಮಾಡಿದವರನ್ನು ಮಲಪ್ಪುರಂ ಡಿವೈಎಸ್ಪಿ ಪಿ.ಎಂ. ಪ್ರದೀಪ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ನೇರವಾಗಿ ಕೃತ್ಯದಲ್ಲಿ ಪಾಲ್ಗೊಂಡವರನ್ನು ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಈಗಾಗಲೇ ಪೊಲೀಸರ ಬಲೆಗೆಬಿದ್ದಿದ್ದಾರೆಂದು ಸೂಚನೆ ಕೂಡಾ ಇದೆ.
ನನ್ನಬ್ರ ಕೊಡಿಂಞಿ, ಚುಳ್ಳಿಕುನ್ನ್ ನಿವಾಸಿಯೂ ಫೈಝಲ್ನ ಸಹೋದರಿಯ ಪತಿಯೂ ಆದ ಪುಲ್ಲಾಣಿ ವಿನೋದ್(39),ಫೈಝಲ್ನ ತಾಯಿ ತಮ್ಮನ ಪುತ್ರ ಪುಲ್ಲಾಣಿ ಸಜೀಷ್(32), ಕೊಲೆಕೃತ್ಯದ ಮುಖ್ಯ ಸೂತ್ರಧಾರ ಪುಳ್ಳಿಕಲ್ ಹರಿದಾಸನ್(30), ಈತನ ಅಣ್ಣ ಶಾಜಿ(39), ಚಾನತ್ ಸುನಿಲ್(39), ಕಳತ್ತಿಲ್ ಪ್ರದೀಪ್(32), ಕೊಡಿಂಞಿಯ ಡ್ರೈವಿಂಗ್ ಸ್ಕೂಲ್ ನಿರ್ವಾಹಕ ಪಾಲತ್ತಿಂಙಲ್ ಪಳ್ಳಿಪ್ಪಡಿ ಲಿಜು ಎಂಬ ಲಿಜಿಶ್(27), ಪರಪ್ಪನಂಙಾಡಿಯ ವಿಮುಕ್ತ್, ಕೋಟ್ಟಯಿಲ್ ಜಯಪ್ರಕಾಶ್(50) ಇವರನ್ನು ಬಂಧಿಸಲಾಗಿದೆ. ಬಂಧನಕ್ಕೊಳಗಾದವರು ಕೇಸರಿ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ.
ಕಳೆದ 19ಕ್ಕೆ ಬೆಳಗ್ಗೆ ಪತ್ನಿಯ ತಂದೆಯನ್ನು ಮತ್ತು ತಾಯಿಯನ್ನು ತಾನೂರ್ ರೈಲ್ವೆ ಸ್ಟೇಷನ್ನಿಂದ ಕರೆದುಕೊಂಡು ಬರಲು ಆಟೊದಲ್ಲಿ ಹೋಗುವಾಗ ಕೊಡಿಂಞಿ ಫಾರೂಕ್ ನಗರದಲ್ಲಿ ಬೈಕ್ನಲ್ಲಿ ಬಂದ ತಂಡವೊಂದು ಫೈಝಲ್ರನನ್ನು ಕಡಿದು ಕೊಲೆಗೈದಿತ್ತು. ಫೈಝಲ್ ಇಸ್ಲಾಮ್ ಸ್ವೀಕರಿಸಿದ್ದು ಕೊಲೆಪಾತಕಕ್ಕೆ ಕಾರಣವಾಗಿತ್ತು. ಕಳೆದ ಜುಲೈಯಲ್ಲಿ ಫೈಝಲ್ ಊರಿಗೆ ಬಂದಿದ್ದಾಗ ಪತ್ನಿ ಮತ್ತು ಮೂವರು ಮಕ್ಕಳು ಇಸ್ಲಾಮ್ ಸ್ವೀಕರಿಸಿದ್ದರು.
ಸಹೋದರಿಯನ್ನುಮತ್ತುಮಕ್ಕಳನ್ನು ಕೂಡಾ ಇಸ್ಲಾಮ್ ಸ್ವೀಕರಿಸಬಹುದೆಂದು ಹೆದರಿ ಸಹೋದರಿ ಗಂಡನಾದ ವಿನೋದ್ ಕೇಸರಿ ಸಂಘಟನೆಯ ನಾಯಕರಾದ ಹರಿದಾಸನ್, ಶಾಜಿ,ಸುನೀಲ್, ಸಜೀಷ್ರನ್ನು ಭೇಟಿಯಾಗಿದ್ದ. ಇವರು ಸಂಘಟನೆಯ ಪರಪ್ಪನಂಙಾಡಿಯ ನಾಯಕರಿಗೆ ವಿಷಯ ತಿಳಿಸಿದ್ದರು. ಸಂಘಟನೆಯ ಅಲ್ಲಿನ ನಾಯಕ ಜಯಪ್ರಕಾಶ್ ಮುಂತಾದವರು ಮೇಲಾಪ್ಪುರಂ ಎಂಬಲ್ಲಿ ಒಟ್ಟುಗೂಡಿ ಸಂಚು ಹೆಣೆದಿದ್ದರು. ವಿಷಯವನ್ನು ತಿರೂರಿನ ಪ್ರಮುಖ ಕೇಸರಿ ಸಂಘಟನೆಯ ನಾಯಕನಿಗೆ ತಿಳಿಸಿದ್ದಾರೆ. ತಿರೂರಿನ ನಾಯಕನ ನಿರ್ದೇಶನ ಪ್ರಕಾರ ಮೂವರು ಬೆಳಗ್ಗೆ ಕೊಡಿಂಞಿಗೆ ಬಂದು ಕೃತ್ಯ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಫೈಝಲ್ ತಾನೂರಿಗೆ ಹೋಗುತ್ತಿರುವ ವಿಷಯವನ್ನು ಲಿಜೇಷ್ ಎಂಬಾತ ಕೊಲೆಗಡುಕರಿಗೆ ತಿಳಿಸಿದ್ದನೆಂದು ವರದಿ ತಿಳಿಸಿದೆ.







