ಜಮಾ ಆಗಿರುವ ಕಪ್ಪು ಹಣದ ಲೆಕ್ಕ ನೀಡಿ!
ಕೇಂದ್ರಕ್ಕೆ ವಿ ಪ. ಮುಖ್ಯ ಸಚೇತಕ ಐವನ್ ಡಿಸೋಜಾ ಸವಾಲು

ಮಂಗಳೂರು, ನ.28: ಕೇಂದ್ರ ಸರಕಾರವು ನವೆಂಬರ್ 8ರಂದು ದಿಢೀರನೆ ಹಳೆಯ 500 ರೂ. ಹಾಗೂ 1000 ರೂ.ಗಳ ನೋಟನ್ನು ನಿರ್ಬಂಧಗೊಳಿಸಿದ ಬಳಿಕ ದೇಶದಲ್ಲಿ ಅದೆಷ್ಟು ಕಪ್ಪು ಹಣ ಜಮಾ ಮಾಡಿದೆ ಎಂಬುದರ ಲೆಕ್ಕವನ್ನು ನೀಡಬೇಕು ಎಂದು ಕರ್ನಾಟಕ ರಾಜ್ಯದ ವಿಧಾನ ಪರಿಷತ್ ನ ಮುಖ್ಯ ಸಚೇತಕ ಐವನ್ ಡಿಸೋಜಾ ಸವಾಲು ಹಾಕಿದ್ದಾರೆ.
ನಗರದ ಪುರಭವನದ ಎದುರಿನ ಗಾಂಧಿ ಪಾರ್ಕ್ ನಲ್ಲಿ ಇಂದು, ನೋಟು ರದ್ಧತಿಯ ಕೇಂದ್ರ ಸರಕಾರದ ನಡೆಯನ್ನು ವಿರೋಧಿಸಿ ವಿರೋಧ ಪಕ್ಷಗಳ ಆಕ್ರೋಶ ದಿನಾಚರಣೆ ಅಂಗವಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ನೋಟು ರದ್ಧತಿ ಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ ಅದಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನೇ ಮಾಡದೆ ಸಾಮಾನ್ಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮದ ಬಗ್ಗೆ ಆಕ್ರೋಶವಿದೆ. ನೋಟು ರದ್ಧತಿಯಿಂದ ಸಮಸ್ಯೆಗೆ ಒಳಗಾಗಿದ್ದು ಕಪ್ಪು ಹಣ ಹೊಂದಿದವರು ಅಲ್ಲ. ಕೂಲಿ ಕಾರ್ಮಿಕರು, ರಿಕ್ಷಾ ಚಾಲಕರು, ಕಾರು ಚಾಲಕರು, ಹಾಗೂ ತಮ್ಮ ಮಕ್ಕಳ ಮದುವೆ, ಮನೆ ಕಟ್ಟಲೆಂದು ಬಡಪಾಯಿಗಳು ತಾವು ದುಡಿದ ಹಣದಲ್ಲಿ ಸಂಗ್ರಹಿಸಿಟ್ಟ ಹಣದಿಂದ ವ್ಯವಹರಿಸಲಾಗದೆ ಸಂಕಷ್ಟಕ್ಕೀಡಾಗಿದ್ದಾರೆ. ತಮ್ಮ ಹೊಟ್ಟೆಪಾಡಿನ ನಿತ್ಯದ ಕೆಲಸಗಳನ್ನು ಬಿಟ್ಟು ಅವರೆಲ್ಲಾ ಬ್ಯಾಂಕ್ಗಳಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ತರಲಾಗಿದೆ. ಕೈಯ್ಯಲ್ಲಿ ದುಡ್ಡಿದ್ದರೂ ಅದರಲ್ಲಿ ವ್ಯವಹರಿಸಲಾಗದ ಪರಿಸ್ಥಿತಿ ಎಂದವರು ವಿಷಾದಿಸಿದರು.
ಕಪ್ಪು ಹಣ ಹೊಂದಿದ್ದವರು ಅದನ್ನು ಅದಾಗಲೇ ಚಿನ್ನ, ಭೂಮಿಗೆ ಪರಿವರ್ತಿಸಿರುವಾಗ, ಅವರಿಗೆಲ್ಲಾ ನೋಟು ರದ್ಧತಿಯಿಂದ ಯಾವುದೇ ತೊಂದರೆ ಆಗಿಲ್ಲ. ಕೇಂದ್ರ ಸರಕಾರ ಈ ಬಗ್ಗೆ ಯಾವುದೇ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳದೆ ಬಡಜನರ ಮೇಲೆ ಪ್ರಹಾರ ನಡೆಸುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ಧೋರಣೆಯನ್ನು ತಳೆದಿದೆ ಎಂದು ಐವನ್ ಡಿಸೋಜಾ ಹೇಳಿದರು.-
ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ಮಾತನಾಡಿ, ನೋಟು ರದ್ಧತಿಯಿಂದ ಕಷ್ಟ ಅನುಭವಿಸಿದ್ದ ಬಡವನೇ ಹೊರತು ಧನಿಕಲ್ಲ. ಈ ಬಗ್ಗೆ ಕೇಂದ್ರ ಸರಕಾರ ಎಚ್ಚೆತ್ತುಕ್ಕೊಳ್ಳಬೇಕು ಎಂದರು.
ಪ್ರತಿಭಟನೆಯನ್ನುದ್ದೇಶಿಸಿ ಮನಪಾ ಮೇಯರ್ ಹರಿನಾಥ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಕಾರ್ಯರ್ತೆ ಮರಿಯಾ ದೀಪ್ತಿ ಹಾಗೂ ಇತರರು ಮಾತನಾಡಿದರು.
ಮುಖಂಡರಾದ ಕವಿತಾ ಸನಿಲ್, ಎಚ್.ಎಂ.ಅಶ್ರಫ್, ಬಿಲಾಲ್ ಮೊಯ್ದೀನ್, ಫಾರೂಕ್, ನಾಗೇಂದ್ರ ಕುಮಾರ್, ಅಶಿತ್ ಪಿರೇರಾ, ಸ್ಟೀವನ್, ಸದಾಶಿವ ಉಳ್ಳಾಲ್, ಮನುರಾಜ್, ವಿನಯ್ ರಾಜ್, ಪ್ರವೀಣ್ ಚಂದ್ರ ಆಳ್ವ, ನಝೀರ್ ಬಜಾಲ್, ಟಿ.ಕೆ. ಸುರ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರತಿಭಟನೆಯ ಬಳಿಕ, ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ನೋಟು ರದ್ಧತಿಯಿಂದ ಜಿಲ್ಲೆಯ ಜನಸಾಮಾನ್ಯರಿಗೆ ಆಗಿರುವ ತೊಂದರೆಗಳ ಕುರಿತಂತೆ ಜಿಲ್ಲಾಕಾರಿ ಮೂಲಕ ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ರೈತರ ಎಲ್ಲಾ ಸಾಲಗಳನ್ನು ಕೇಂದ್ರ ಮನ್ನಾ ಮಾಡಲಿ
ಜನಸಾಮಾನ್ಯರ ಸಂಕಷ್ಟದಲ್ಲಿರುವಾಗ, ನೋಟು ರದ್ಧತಿಯಿಂದ ಹಲವರು ಪ್ರಾಣ ಕಳೆದುಕೊಂಡಿರುವಾಗ ಬಿಜೆಪಿ, ಸಂಘ ಪರಿವಾರದ ಸಂಭ್ರಮಾಚರಣೆ ಎಂತದ್ದು ಎಂದು ಅರ್ಥ ಮಾಡಿಕೊಳ್ಳಬೇಕಾಗಿದೆ. ನೋಟು ರದ್ಧತಿಯ ಕುರಿತಂತೆ ಬಿಜೆಪಿಗೆ ಮೊದಲೇ ಅರಿವಿತ್ತು ಎಂದು ಆರೋಪಿದ ಐವನ್ ಡಿಸೋಜಾ, ಈ ಬಗ್ಗೆ ತನಿಖೆ ಆಗಬೇಕು. ರಾಜ್ಯದ ಎಲ್ಲಾ ರೈತರ ಸಾಲವನ್ನು ತಕ್ಷಣ ಕೇಂದ್ರ ಸರಕಾರ ಮನ್ನಾ ಮಾಡಬೇಕು. ಕೂಲಿ ಕಾರ್ಮಿಕರು, ಬಡವರು ಬ್ಯಾಂಕ್ ನಿಂದ ಪಡೆದಿರುವ ಸಾಲವನ್ನು ಕಟ್ಟಲಾಗದೆ ಅನುಭವಿಸಿದ ನಷ್ಟವನ್ನು ಕೇಂದ್ರ ಸರಕಾರ ಭರಿಸಬೇಕು ಎಂದು ಅವರು ಆಗ್ರಹಿಸಿದರು.







