ಕಡಬ: ಕಾಂಗ್ರೆಸ್ನಿಂದ ‘ಆಕ್ರೋಶ್ ದಿವಸ್’
![ಕಡಬ: ಕಾಂಗ್ರೆಸ್ನಿಂದ ‘ಆಕ್ರೋಶ್ ದಿವಸ್’ ಕಡಬ: ಕಾಂಗ್ರೆಸ್ನಿಂದ ‘ಆಕ್ರೋಶ್ ದಿವಸ್’](https://www.varthabharati.in/sites/default/files/images/articles/2016/11/28/28.11.jpg)
ಕಡಬ, ನ.28: 1000, 500 ರೂ.ಗಳ ನೋಟು ಅಮಾನ್ಯಗೊಳಿಸಿರುವ ಕೇಂದ್ರ ಸರಕಾರದ ವಿರುದ್ಧ ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಗೆ ಎಸ್ಡಿಪಿಐ ಕಾರ್ಯಕರ್ತರು ಕೂಡ ಬೆಂಬಲ ನೀಡಿದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ರೈ ಹಾಗೂ ಕಡಬ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್ರ ನೇತೃತ್ವದಲ್ಲಿ ಕಡಬ ಪೇಟೆಯಾದ್ಯಂತ ಮೆರವಣಿಗೆ ನಡೆದು, ಪೇಟೆಯ ಹೃದಯಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ರೈ, 500, 1000 ರೂ ನೋಟುಗಳನ್ನು ಏಕಾಏಕಿ ರಾತ್ರಿ ಬೆಳಗಾಗುವುದರೊಳಗೆ ಬದಲಾಯಿಸುವ ಮೂಲಕ ಜನಸಾಮಾನ್ಯರಿಗೆ ತೊಂದರೆ ನೀಡಿದ ಪ್ರಧಾನಿ ನರೇಂದ್ರ ಮೋದಿಯವರ ಸರ್ವಾಧಿಕಾರಿ ಧೋರಣೆಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದರು.
ಕಡಬ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಿಜೆಪಿಗವರಲ್ಲಿರುವ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳಲು ಒಳಗಿಂದೊಳಗೆ ಮಾಹಿತಿ ನೀಡಿ, ರಾತ್ರಿ ಬೆಳಗಾಗುವುದರೊಳಗೆ 500, 1000ರೂ.ಗಳ ನೋಟು ರದ್ದತಿ ಬಗ್ಗೆ ಘೋಷಿಸಿ ರೈತರನ್ನು, ಕೃಷಿಕೂಲಿ ಕಾರ್ಮಿಕರನ್ನು, ಜನಸಾಮಾನ್ಯರನ್ನು ಬೀದಿಗೆ ತಳ್ಳುವ ಕೆಲಸ ಮಾಡಿದ್ದಾರೆ. ಈಗ ಜನಸಾವಾನ್ಯರು ತಮ್ಮ ದಿನನಿತ್ಯದ ಕೆಲಸ ಬಿಟ್ಟು ಸೊಸೈಟಿಗಳಲ್ಲಿ ಪಡಿತರಕ್ಕಾಗಿ ಕ್ಯೂ ನಿಲ್ಲುವಂತೆ ಬ್ಯಾಂಕ್ಗಳ ಮುಂದೆ ಕ್ಯೂ ನಿಂತು ದಿನದ ಖರ್ಚಿಗೆ ಹಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಹೊಟ್ಟೆ ಒಳಗೆ ಉರಿ ಇದ್ದರೂ ಹೊರಗೆ ತೋರ್ಪಡಿಕೆಗಾಗಿ ಬಿಜೆಪಿಯವರು ಇಂದು ಸಂಭ್ರಮಿಸುತ್ತಿದ್ದಾರೆ ಎಂದು ಆರೋಪಿಸಿದರು.
ಕಡಬ ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಕುಟ್ರುಪ್ಪಾಡಿ ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಕಡಬ ಗ್ರಾ.ಪಂ.ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಹನೀಫ್ ಕೆ.ಎಂ, ಕೃಷ್ಣಪ್ಪನಾಯ್ಕ, ಶೆರೀಪ್ ಎ.ಎಸ್., ನೀಲಾವತಿ ಶಿವರಾಂ, ಸುಶೀಲ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಅಬ್ದುಲ್ ಖಾದರ್, ಕುಟ್ರುಪ್ಪಾಡಿ ಗ್ರಾ.ಪಂ.ಸದಸ್ಯರಾದ ಮಹಮ್ಮದಾಲಿ, ಲಿಂಗಪ್ಪ ಗೌಡ, ಸೂಸಮ್ಮ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಕುಶಾಲಪ್ಪ ಗೌಡ, ಪುತ್ತೂರು ಎಪಿಎಂಸಿ ಸದಸ್ಯೆ ಶಾಲಿನಿ ಸತೀಶ್ ನಾಯ್ಕೆ, ಕಡಬ ವರ್ತಕ ಸಂಘದ ಪ್ರಧಾನ ಕಾರ್ಯದರ್ಶಿ ಸುಜಿತ್ ಪಿ.ಕೆ., ಡಿಸಿಸಿ ಸದಸ್ಯ ರಾಯ್ ಅಬ್ರಹಾಂ, ಎಸ್ಡಿಪಿಐ ಕಡಬ ವಲಯ ಅಧ್ಯಕ್ಷ ಅಬ್ದುಲ್ಲತೀಫ್, ಪ್ರಧಾನ ಕಾರ್ಯದರ್ಶಿ ಹಾರಿಸ್ ಕಳಾರ, ಕೋಶಾಧಿಕಾರಿ ನವಾಝ್, ಸದಸ್ಯ ಬಶೀರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
ಕಡಬ ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಯುವ ಮುಂದಾಳು ಫೈಝಲ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಪ್ರಧಾನ ಕಾರ್ಯದರ್ಶಿ ಡೇನಿಸ್ ಫೆರ್ನಾಂಡೀಸ್ ಸ್ವಾಗತಿಸಿ, ವಂದಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ. ವೇದಮೂರ್ತಿ ಸಿ.ಬಿ., ಸಂಪ್ಯ ಠಾಣಾ ಸಬ್ ಇನ್ಸ್ಪೆಕ್ಟರ್ ಅಬ್ದುಲ್ ಖಾದರ್, ಪುತ್ತೂರು ನಗರ ಠಾಣಾ ಸಬ್ಇನ್ಸ್ಪೆಕ್ಟರ್ ಓಮನ ಹಾಗೂ ಕಡಬ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.