ಕಪ್ಪುಹಣ ಘೋಷಿಸಿದರೆ ಶೇ.50 ತೆರಿಗೆ,ಸಿಕ್ಕಿಬಿದ್ದರೆ ಶೇ.85 ಖೋತ!!
ಆದಾಯ ತೆರಿಗೆ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ

ಹೊಸದಿಲ್ಲಿ,ನ.28: ಆದಾಯ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಸೂದೆಯೊಂದನ್ನು ಇಂದು ಲೋಕಸಭೆಯಲ್ಲಿ ಮಂಡಿಸುವ ಮೂಲಕ ಸರಕಾರವು ಕಪ್ಪುಹಣ ಖದೀಮರಿಗೆ ತಮ್ಮ ಕಾಳಧನವನ್ನು ಬಿಳಿಯಾಗಿಸಿಕೊಳ್ಳಲು ಬಹುಶಃ ಕೊನೆಯ ಅವಕಾಶವೊಂದನ್ನು ಒದಗಿಸಿದೆ.
ನೋಟು ನಿಷೇಧದ ಬಳಿಕ ಬ್ಯಾಂಕ್ ಖಾತೆಯಲ್ಲಿ ಹಳೆಯ ನೋಟುಗಳ ಮೂಲಕ ಜಮಾ ಮಾಡಿರುವ ಲೆಕ್ಕವಿಲ್ಲದ ಹಣವನ್ನು ಘೋಷಿಸಿದರೆ ಒಟ್ಟು ಶೇ.50 ರಷ್ಟು ತೆರಿಗೆ,ದಂಡ ಮತ್ತು ಮೇಲ್ತೆರಿಗೆಯನ್ನು ಪಾವತಿಸಿ ಪಾರಾಗಬಹುದು. ಆದರೆ ನಿಮ್ಮ ಆದಾಯಕ್ಕೆ ತಾಳೆಯಾಗದ ಬ್ಯಾಂಕ ಠೇವಣಿಯನ್ನು ಆದಾಯ ತೆರಿಗೆ ಅಧಿಕಾರಿಗಳೇ ಪತ್ತೆ ಹಚ್ಚಿದರೆ ಒಟ್ಟು ತೆರಿಗೆ,ದಂಡ ಇತ್ಯಾದಿ ಸೇರಿಶೇ.85ರಷ್ಟು ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ.
ವಿತ್ತಸಚಿವ ಅರುಣ್ ಜೇಟ್ಲಿಯವರು ಮಂಡಿಸಿರುವ ಮಸೂದೆಯು ಪ್ರಸ್ತಾಪಿಸಿರುವಂತೆ ಘೋಷಿತ ಹಣದ ಶೇ.25ನ್ನು ನಾಲ್ಕು ವರ್ಷಗಳ ಲಾಕ್ಇನ್ ಅವಧಿಯಲ್ಲಿ ಹಿಂಪಡೆಯುವಂತಿಲ್ಲ ಮತ್ತು ಈ ಹಣಕ್ಕೆ ಬಡ್ಡಿಯೂ ದೊರೆಯುವುದಿಲ್ಲ.
ನಿಷೇಧಿತ 500 ಮತ್ತು 1,000 ರೂ.ನೋಟುಗಳ ರೂಪದಲ್ಲಿ ತಮ್ಮ ಬಳಿಯಿರುವ ಕಪ್ಪುಹಣವನ್ನು ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ(ಪಿಎಂಜಿಕೆ) ಯೋಜನೆ,2016ರಡಿ ಘೋಷಿಸುವುದನ್ನು ಆಯ್ಕೆ ಮಾಡಿಕೊಂಡವರು ಅಘೋಷಿತ ಆದಾಯದ ಶೇ.30 ರಷ್ಟು ತೆರಿಗೆಯ ಜೊತೆಗೆ ಶೇ.10ರಷ್ಟು ದಂಡ ಮತ್ತು ತೆರಿಗೆ ಹಣದ ಶೇ.33ರಷ್ಟು ಪಿಎಂಜಿಕೆ ಸೆಸ್ ಅನ್ನು ಪಾವತಿಸಬೇಕಾಗುತ್ತದೆ.







