ಪ್ರಧಾನಿ ಮೋದಿಯಿಂದ ಕಾಳಧನ ನಿರ್ಮೂಲನೆ ಅಸಾಧ್ಯ: ಅಭಯಚಂದ್ರ ಜೈನ್

ಮುಲ್ಕಿ, ನ.28: ಕಾಳಧನದಿಂದಲೇ ಅಧಿಕಾರ ಹಿಡಿದಿರುವ ಪ್ರಧಾನಿ ಮೋದಿಯಿಂದ ಕಾಳಧನ ನಿರ್ಮೂಲನೆ ಅಸಾಧ್ಯ ಎಂದು ಮುಲ್ಕಿ ಮೂಡುಬಿದಿರೆ ಶಾಸಕ ಅಭಯಚಂದ್ರ ಜೈನ್ ಕಿಡಿಕಾರಿದ್ದಾರೆ. ಇಂದು ಮುಲ್ಕಿ- ಮೂಡಬಿದಿರೆ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೊಜಿಸಲಾಗಿದ್ದ ಆಕ್ರೋಶ ದಿವಸ್ ಪ್ರತಿಭಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡುತ್ತಿದ್ದರು.
ಮೋದಿಯ ಉದ್ದಟತನದ ನಿರ್ಧಾರದಿಂದ ಈಗಾಗಲೇ ಜನ ಸಾಮಾನ್ಯರು ತತ್ತರಿಸಿದ್ದಾರೆ. ಮತ್ತಷ್ಟು ಸಂಕಷ್ಟ ನೀಡಬಾರದು ಎನ್ನುವ ನಿಟ್ಟಿನಲ್ಲಿ ಭಾರತ್ ಬಂದ್ ನಡೆಸುವ ಬದಲು ಆಕ್ರೋಶ್ ದಿವಸ್ ಮೂಲಕ ಕೇಂದ್ರದ ವಿರುದ್ಧ ಜನಸಾಮಾನ್ಯರ ಸಂಕಷ್ಟಗಳು ಹಾಗೂ ಅವರ ದಯನೀಯ ಸ್ಥಿತಿಯನ್ನು ತಿಳಿಸುವ ಸಲುವಾಗಿ ಪ್ರತಿಭಟನೆಯನ್ನು ನಡೆಸಲಾಗಿದೆ ಎಂದರು.
ಕಾಳಧನದಿಂದಲೇ ಪ್ರಧಾನಿಯಾಗಿರುವ ಮೋದಿ, ವಿದೇಶದಿಂದ ಕಾಳಧನ ತರುವುದಾಗಿ ಹೇಳಿ, ತಾನು ಕೋಟಿಗಟ್ಟಲೆ ಬೆಲೆಬಾಳುವ ವಸ್ತ್ರ ಧರಿಸಿಕೊಂಡು ಕಪ್ಪುಹಣ ತರುತ್ತೇನೆ ಎಂದು ನಾಟಕ ಆಡುತ್ತಿದ್ದಾರೆ ಎಂದು ಟೀಕಿಸಿದರು.
ಬಳಿಕ ಮಾತನಾಡಿದ ಯುವಕಾಂಗ್ರೆಸ್ ಮುಖಂಡ ಮಿಥುನ್ ರೈ, ಮೋದಿ ತನ್ನ ಪ್ರಚಾರಕ್ಕಾಗಿ ವಸಾಹತು ಶಾಹಿಗಳಿಗೆ 360 ಕೋಟಿ ರೂ. ನೀಡಿದ್ದರು. ರಾಜಕೀಯ ಲಾಭಕ್ಕಾಗಿ ತನ್ನ ತಾಯಿಯನ್ನೂ ಬಿಡದ ಅವರು, ಬಿಸಿಲಿನಲ್ಲಿ ಬ್ಯಾಂಕ್ನ ಮುಂದೆ ನಿಲ್ಲಿಸಿದರು. ಅಂದು ಪಡೆದ 2 ಸಾವಿರ ರೂ. ಅವರಿಗೆ ಸಾಕಾಗುವುದೇ ಎಂದು ಪ್ರಶ್ನಿಸಿದರು. ಅಲ್ಲದೆ, ಬಳಿಕದ ದಿನಗಳಲ್ಲಿ ಆ ತಾಯಿ ತನ್ನ ಖರ್ಚುಗಳಿಗೆ ಏನು ಮಾಡಿದ್ದಾರೆ ಎಂಬ ಬಗ್ಗೆ ಬಗ್ಗೆ ಮೋದಿ ಉತ್ತರಿಸಬೇಕು. ಹೆಣ್ಣುಮಕ್ಕಳ ಉದ್ಧಾರ ಎಂದು ಬೊಬ್ಬೆ ಇಡುತ್ತಿದ್ದ ಮೋದಿಯ ಆತುರದ ನಿರ್ಧಾರಕ್ಕೆ ಎಷ್ಟೋ ಹೆಣ್ಣುಮಕ್ಕಳ ಮದುವೆ ನಿಲ್ಲುವಂತಾಗಿದೆ. ರಾಜಕೀಯ ಲಾಭಕ್ಕಾಗಿ ಮದುವೆಯೇ ಆಗಿಲ್ಲ ಎಂದಿದ್ದ ಮೋದಿ, ಬಳಿಕ ತನ್ನ ಹೆಂಡತಿಯನ್ನೇ ಬೀದಿ ಪಾಲು ಮಾಡಿದ್ದರು. ಮೋದಿಗೆ ಹಣದ ಸಂಕಷ್ಟದಿಂದ ಕುಟುಂಬಕ್ಕೆ ಆಗಬಹುದಾದ ಸಮಸ್ಯೆಗಳ ಪರಿವೇ ಇಲ್ಲ. ಯಾಕೆಂದರೆ ಅವರು, ಸಂಸಾರದ ಗಂಧಗಾಳಿ ತಿಳಿಯದ ವ್ಯಕ್ತಿ ಎಂದು ಲೇವಡಿ ಮಾಡಿದರು.
ಕಾರ್ನಾಡು ಮಾರ್ಕೆಟ್ನಿಂದ ಹೊರಟ ಪ್ರತಿಭಟನಾ ರ್ಯಾಲಿ ಮುಲ್ಕಿಯಾಗಿ ತಹಶೀಲ್ದಾರ್ರ ಕಚೇರಿ ತಲುಪಿತು. ಬಳಿಕ ಪ್ರತಿಭಟನಾ ಸಭೆ ನಡೆದು ತಹಶೀಲ್ದಾರ್ ಮುಖೇನ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಧನಂಜಯ ಮಟ್ಟು, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಆದ್ಯಕ್ಷೆ ಶಾಲೆಟ್ ಪಿಂಟೋ, ಮೂಡುಬಿದಿರೆ ಬ್ಲಾಕ್ ಅಧ್ಯಕ್ಷ ವಲೇರಿಯನ್ ಡಿಸೋಜ, ಮುಡಾ ಸದಸ್ಯ ವಸಂತ್ ಬೆರ್ನಾರ್ಡ್, ಬಜ್ಪೆವಲಯ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಮುಖಂಡರಾದ ಚಂದ್ರಹಾಸ ಸನಿಲ್, ಸರೋಜನಿ ಸುವರ್ಣ, ದಾವೂದ್ ಹಕೀಂ, ಆಸೀಫ್ ಕೊಲ್ನಾಡು ಮತ್ತಿತರರಿದ್ದರು.







