ಡಿ.2-4: ಡಿಕೆಎಸ್ಸಿ 20ನೆ ವಾರ್ಷಿಕೋತ್ಸವ ಸಂಭ್ರಮ

ಕಾಪು, ನ.29: ಮೂಳೂರಿನಲ್ಲಿ ಕಳೆದ ಎರಡು ದಶಕಗಳಿಂದ ಕಾರ್ಯಾ ಚರಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್ಸಿ) ಸಂಸ್ಥೆಯ 20ನೆ ವಾರ್ಷಿಕೋತ್ಸವದ ಅಂಗವಾಗಿ ಸಮುದಾಯದ ಅಭಿವೃದ್ಧಿಗೆ ಪೂರಕವಾದ 20 ಅಂಶಗಳ ವಿವಿಧ ರೀತಿಯ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾಗಿದ್ದು, ಇದರ ಸಮಾರೋಪ ಸಮಾರಂಭವನ್ನು ಡಿ.2, 3 ಮತ್ತು 4ರಂದು ಮೂಳೂರು ಅಲ್ಇಹ್ಸಾನ್ ಸ್ಕೂಲ್ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದೆ.
ಕಾಪು ಪ್ರೆಸ್ಕ್ಲಬ್ನಲ್ಲಿ ಇಂದು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಅಲ್ಹಾಜ್ ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಈ ಬಗ್ಗೆ ವಿವರ ನೀಡಿದರು. ಈ ಕಾರ್ಯಕ್ರಮದಲ್ಲಿ ಮುಸ್ಲಿಂ ಬಡಕುಟುಂಬದ 20 ಜೋಡಿಗಳಿಗೆ ಸಾಮೂಹಿಕ ವಿವಾಹ ಮತ್ತು ಬಡ ಕುಟುಂಬದ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಲಾಗುವುದು ಎಂದು ಅವರು ತಿಳಿಸಿದರು.
ಸಂಸ್ಥೆಯ ಅಧೀನದಲ್ಲಿರುವ ಅನಾಥಾಲಯ, ವಸತಿ ಶಾಲೆ, ಶರೀಅತ್ ಕಾಲೇಜು, ಹಿಫ್ಲುಳ್ ಕುರ್ಆನ್ ಕಾಲೇಜು, ನಿರ್ಗತಿಕ ಮಂದಿರ, ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಮಹಿಳಾ ಕಾಲೇಜುಗಳಲ್ಲಿ ಸುಮಾರು ಒಂದೂವರೆ ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಡಿ.2ರಂದು ಶುಕ್ರವಾರ ಜುಮಾ ನಮಾಝಿನ ಬಳಿಕ ಮೂಳೂರಿನ ಸೈಯದ್ ಅರಬಿ ವಲಿಯುಲ್ಲಾಹಿ ದರ್ಗಾ ಝಿಯಾರತ್ನೊಂದಿಗೆ ಸಂಸ್ಥೆಯ ಅಧ್ಯಕ್ಷ ಕುಂಬೋಳ್ ತಂಙಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವರು. ಅಪರಾಹ್ನ 3 ಗಂಟೆಗೆ ಸ್ವಾಗತ ಸಮಿತಿಯ ಅಧ್ಯಕ್ಷ ಅಲ್ಹಾಜ್ ಬಿ.ಎಂ.ಮಮ್ತಾಝ್ ಅಲಿ ಧ್ವಜಾರೋಹಣ ನೆರವೇರಿಸಲಿರುವರು. ಸಂಜೆ 4:30ಕ್ಕೆ ಸಮಾರಂಭವನ್ನು ಅಸ್ಸೈಯದ್ ಮುನವ್ವರ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಸಮಸ್ತ ಕೇರಳ ಮುಶಾವರದ ಪ್ರಧಾನ ಕಾರ್ಯದರ್ಶಿ ಹಾಗೂ ಕಾಸರಗೋಡು ಖಾಝಿ ಶೈಖುನಾ ಆಲಿಕುಟ್ಟಿ ಮುಸ್ಲಿಯಾರ್ ವಹಿಸಲಿದ್ದಾರೆ.
ಡಿ.3ರಂದು ಬೆಳಗ್ಗೆ 10ಗಂಟೆಗೆ ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಅಬ್ದುಲ್ಲಾ ತೌಫೀಕ್ ನಾವುಂದ ಅಧ್ಯಕ್ಷತೆಯಲ್ಲಿ ಜಮಾಅತ್ ಸಂಗಮ ನಡೆಯಲಿದೆ. ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿರುವರು. ಡಾ.ಫಾರೂಕ್ ನಈಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡಲಿರುವರು. ಮಗ್ರೀಬ್ ನಮಾಝಿನ ಬಳಿಕ ಅಸ್ಸೈಯದ್ ಜಅಫರ್ ಸ್ವಾದಿಕ್ ತಂಙಳ್ ನೇತೃತ್ವದಲ್ಲಿ ಜಲಾಲಿಯ್ಯ ದ್ಸಿಕ್ರ್ ಮಜ್ಲಿಸ್ ನಡೆಯಲಿದೆ. ಶೈಖುನಾ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣ ಮಾಡಲಿದ್ದಾರೆ.
ಡಿ.4ರಂದು ಬೆಳಗ್ಗೆ 10 ಗಂಟೆಗೆ ಸಾಮೂಹಿಕ ವಿವಾಹ ಸಮಾರಂಭ ಮತ್ತು ಹೊಲಿಗೆ ಯಂತ್ರ ವಿತರಣೆ ನಡೆಯಲಿದ್ದು, ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರ, ಅಲ್ಹಾಜ್ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್, ಡಾ.ವೌಲಾನ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್ಕಟ್ಟೆ ನಿಖಾಹ್ ನೇತೃತ್ವ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ ನಂದಾವರ, ಅಝೀಝ್ ದಾರಿಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಂಜೆ 4:30ಕ್ಕೆ ನಡೆಯುವ ಸಮಾರೋಪ ಮತ್ತು ಸನದುದಾನ ಸಮ್ಮೇಳನ ದ ಅಧ್ಯಕ್ಷತೆಯನ್ನು ಆಟಕೋಯ ತಂಙಳ್ ವಹಿಸಲಿರುವರು. ಅಲ್ಹಾಜ್ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿರುವರು. ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಶೈಖುನಾ ಆಲಿಕುಂಞಿ ಉಸ್ತಾದ್ ಶಿರಿಯಾ, ಅಲ್ ಇಹ್ಸಾನ್ ಶರೀಅತ್ ಕಾಲೇಜು ವಿದ್ಯಾರ್ಥಿಗಳಿಗೆ ಸನದುದಾನ ನೀಡಲಿರುವರು.
ಅಲ್ ಇಹ್ಸಾನ್ ಮಹಿಳಾ ಪದವಿ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿರುವರು. ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ಪ್ರಮೋದ್ ಮಧ್ವರಾಜ್, ಬಿ.ರಮಾನಾಥ ರೈ, ತನ್ವೀರ್ ಸೇಠ್, ಯು.ಟಿ. ಖಾದರ್, ಸಂಸಜೆ ಕೆ.ರಹ್ಮಾನ್ ಖಾನ್, ಶಾಸಕರಾದ ವಿನಯ ಕುಮಾರ್ ಸೊರಕೆ, ಮೊಯ್ದಿನ್ ಬಾವಾ, ಸಿ.ಎಂ.ಇಬ್ರಾಹೀಂ, ಲಾಲಾಜಿ ಆರ್.ಮೆಂಡನ್ ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಮರ್ಕಝ್ ಆಡಳಿತ ಸಮಿತಿಯ ಉಪಾಧ್ಯಕ್ಷ ಎಂ. ಎಚ್.ಬಿ.ಮುಹಮ್ಮದ್, ಮರ್ಕಝ್ ತಅ್ಲೀಮಿಲ್ ಇಹ್ಸಾನ್ನ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ, ಸ್ವಾಗತ ಸಮಿತಿಯ ಸಂಚಾಲಕ ಕೆ.ಎ.ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಪ್ರಚಾರ ಸಮಿತಿಯ ಸಂಚಾಲಕ ಹಾಜಿ ಮೊಯ್ದಿನ್ ಗುಡ್ವೀಲ್ ಉಪಸ್ಥಿತರಿದ್ದರು.







