ಸೂರಲ್ಪಾಡಿ ಮದ್ರಸ ಮಕ್ಕಳ ಹೊರಹಾಕಿದ ಪ್ರಕರಣ: 6 ವಾರದೊಳಗೆ ವರದಿ ಸಲ್ಲಿಸಲು ಮಾನವ ಹಕ್ಕು ಆಯೋಗ ಆದೇಶ
ಮಂಗಳೂರು, ಡಿ.1: ಸೂರಲ್ಪಾಡಿಯ ನೂರುಲ್ ಉಲೂಂ ಮದ್ರಸದ ಇಬ್ಬರು ಮಕ್ಕಳನ್ನು ಹೊರಹಾಕಿ, ಕುಟುಂಬಕ್ಕೆ ಬಹಿಷ್ಕಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹವಾಲು ಆಲಿಸಿದ ಮಾನವ ಹಕ್ಕು ಆಯೋಗವು ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಯಿಂದ ವರದಿ ಪಡೆದು 6 ವಾರದೊಳಗೆ ಸಲ್ಲಿಸಲು ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಿಗೆ ಆದೇಶಿಸಿದೆ.
ಸೂರಲ್ಪಾಡಿಯ ಬೈತುಲ್ ಫಲಾಹ್ ನಿವಾಸಿ ಬಾವಾ ಪದರಂಗಿ ಮಾನವ ಹಕ್ಕು ಅಯೋಗಕ್ಕೆ ನೀಡಿದ ದೂರಿನಲ್ಲಿ, ‘ನೂರುಲ್ ಉಲೂಂ ಮದ್ರಸದ ಅಧ್ಯಾಪಕರು ತನ್ನ ಇಬ್ಬರು ಮಕ್ಕಳನ್ನು ಮಳೆ ಸಂದರ್ಭ ಹೊರಗೆ ನಿಲ್ಲಿಸಿ ಮಕ್ಕಳ ಹಕ್ಕು ಉಲ್ಲಂಘಿಸಿದ್ದಾರೆ. ಅಲ್ಲದೆ ಮದ್ರಸದ ಅಧ್ಯಾಪಕರು ಬೆದರಿಕೆ ಹಾಕಿದ್ದಾರೆ.ಜಮಾಅತ್ ಕಮಿಟಿ ಮೂಲಕ ಕುಟುಂಬಕ್ಕೆ ಬಹಿಷ್ಕಾರ ಹಾಕಿಸಿದ್ದಾರೆ’ ಎಂದು ತಿಳಿಸಿದ್ದರು.
ಅದರಂತೆ ಅಹವಾಲು ಆಲಿಸಿದ ಆಯೋಗವು ದೂರುದಾರ ಕುಟುಂಬಕ್ಕೆ ಹಾಕಲಾದ ಸಾಮಾಜಿಕ ಬಹಿಷ್ಕಾರ ತೆರವುಗೊಳಿಸಿ, ಸದ್ರಿ ಮದ್ರಸದಲ್ಲಿ ಇಬ್ಬರು ಮಕ್ಕಳು ಶಿಕ್ಷಣ ಮುಂದುವರಿಸಲು ಕ್ರಮ ಜರಗಿಸಿ 6 ವಾರದೊಳಗೆ ವರದಿ ನೀಡಲು ಆದೇಶಿಸಿದೆ.