ನೋಟು ಬದಲಾವಣೆ ಕುರಿತ ಮೋದಿ ಚಿಂತನೆ ವಿನಾಶಕಾಲೇ ವಿಪರೀತ ಬುದ್ಧಿ : ಕಾಂಗ್ರೆಸ್ ಟೀಕೆ
ಪುತ್ತೂರು,ಡಿ.2: ನೋಟು ಬದಲಾವಣೆ ವಿಚಾರದಲ್ಲಿ ಪ್ರದಾನಿ ಮೋದಿಯವರು ಬಡ ಮತ್ತು ಸಾಮಾನ್ಯ ಜನರನ್ನು ಗೊಂದಲಕ್ಕೀಡು ಮಾಡಿದ್ದಲ್ಲದೆ ಸಂಕಷ್ಟಕ್ಕೆ ಈಡು ಮಾಡಿದ್ದಾರೆ. ಮೋದಿ ಅವರದ್ದು ವಿನಾಶಕಾಲೇ ವಿಪರೀತ ಬುದ್ಧಿಃ ಎಂಬಂತ್ತಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಟೀಕಿಸಿದ್ದಾರೆ.
ಅವರು ಶುಕ್ರವಾರ ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇದೀಗ ಮೋದಿ ನಿಲುವಿನ ಬಗ್ಗೆ ದೇಶದ ಜನತೆ ಪ್ರಸ್ನಿಸುತ್ತಿದ್ದಾರೆ. ಇಷ್ಟೊಂದು ತುರ್ತಾಗಿ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳದೆ ನೋಡು ಬದಲಾವಣೆ ಮಾಡುವ ಆವಶ್ಯಕತೆ ಏನಿತ್ತು. 50 ದಿನಗಳ ಬಳಿಕ ಎಲ್ಲಾ ಸಮಸ್ಯೆಗಳು ಪರಿಹಾರವಾಗಲಿದೆ ಎಂದು ದೇಶದ ಜನತೆಗೆ ಸಂದೇಶ ನೀಡುತ್ತಿರುವ ಮೋದಿ ಅವರು ಈ 50 ದಿನಗಳಲ್ಲಿ ಸಾಯುವಂತೆ ಮಾಡಿ ಬಳಿಕ ಬದುಕು ನೀಡುತ್ತೇನೆ ಎಂಬ ಭರವಸೆ ನೀಡುತ್ತಿದ್ದಾರೆ. ನೋಟು ರದ್ದತಿಗೊಂಡು 22 ದಿನಗಳಾಗಿದ್ದರೂ ಈ ತನಕ ಯಾವುದೇ ಬದಲಾವಣೆಗಳಾಗಿಲ್ಲ. ಸಮಸ್ಯೆಗಳು ಮತ್ತಷ್ಟು ಬಿಗಡಾಯಿಸಿದೆ. ಕೂಲಿ ಕಾರ್ಮಿಕರು ಹಾಗೂ ರೈತರು ಪಾಡು ಪಡುವಂತಾಗಿದೆ. ಹಣದ ಸಮಸ್ಯೆಗಳೊಂದಿಗೆ ಭಯದ ವಾತಾವರಣವನ್ನು ಮೋದಿ ನಿರ್ಮಿಸುತ್ತಿದ್ದಾರೆ. ತನ್ನನ್ನು ಪ್ರಶ್ನಿಸುವವರೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಈಗಾಗಲೇ ಕೇಂದ್ರ ಸರ್ಕಾರ ಮುದ್ರಿಸಿದ ರೂ. 16 ಲಕ್ಷ ಕೋಟಿ ಹೊಸ ನೋಟುಗಳಲ್ಲಿ ಸುಮಾರು ರೂ. 6ಲಕ್ಷ ಕೋಟಿ ಕಾಳಧನಿಕರ ಕೈಗೆ ಈಗಾಗಲೇ ರವಾನೆಯಾಗಿದೆ. ಇದರಿಂದಾಗಿ ನೋಟು ಬದಲಾವಣೆಯ ಕ್ರಾಂತಿಯಿಂದ ದೇಶದ ಸಾಮಾನ್ಯ ಮತ್ತು ಬಡ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು.
ಸ್ವೀಸ್ ಬ್ಯಾಂಕ್ನಿಂದ ಕಪ್ಪು ಹಣವನ್ನು ವಾಪಾಸು ತರುತ್ತೇವೆ ಎಂದು ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರ ಇದೀಗ ತನ್ನ ಮಾತನ್ನು ಮರೆ ಮಾಚುವುದಕ್ಕಾಗಿ ನೋಟು ಬದಲಾವಣೆಯ ತಂತ್ರವನ್ನು ಅನುಸರಿಸಿದೆ. ಈ ಮೂಲಕ ಬಡ ಜನರ ಮೇಲೆ ಗಧಾಪ್ರಹಾರ ನಡೆಸಿ ಅವರನ್ನು ಪಾತಾಳಕ್ಕೆ ತಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ಅವರು ದೇಶವಾಸಿಗಳಲ್ಲಿ ಎಷ್ಟು ಚಿನ್ನ ಇರಬೇಕು ಎಂಬುದನ್ನು ನಿಗದಿಪಡಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ. ಆ ಕೆಲಸವನ್ನು ಇದೀಗ ಮೋದಿ ಸರ್ಕಾರ ಮಾಡುತ್ತಿದೆ. ಇದರೊಂದಿಗೆ ಸಹಕಾರಿ ಸಂಘದಲ್ಲಿ ವ್ಯವಹಾರ ನಡೆಸುತ್ತಿದ್ದ ರೈತರನ್ನು ಮೋದಿ ಸರ್ಕಾರದ ನೂತನ ಕಾಯಿದೆ ಕೊಲ್ಲುವ ಕೆಲಸ ಮಾಡುತ್ತಿದೆ. ಇದಕ್ಕೆ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಮೋದಿಗೆ ಧೈರ್ಯವಿದ್ದರೆ ತಕ್ಷಣವೇ ಸರ್ಕಾರವನ್ನು ಬರ್ಕಾಸ್ತುಗೊಳಿಸಿ ಚುನಾವಣೆಯನ್ನು ಎದುರಿಸಲಿ ಎಂದು ಅವರು ಸವಾಲು ಹಾಕಿದರು.
ಶಾಸಕಿ ಅಭ್ಯರ್ಥಿ ಆಯ್ಕೆ ಅಧಿಕಾರ ಹೈಕಮಾಂಡ್ಗೆ ಮಾತ್ರ:
ಪುತ್ತೂರಿನ ಶಾಸಕಿ ಶಕುಂತಳಾ ಶೆಟ್ಟಿ ಅವರೇ ಮುಂದಿನ ಶಾಸಕಿ ಅಭ್ಯರ್ಥಿ ಎಂಬ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝ್ಲುಲ್ ರಹೀಂ ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಪ್ರವೀಣ್ ಚಂದ್ರ ಆಳ್ವ ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಹೇಮನಾಥ ಶೆಟ್ಟಿ ಅವರು ಬ್ಲಾಕ್ ಅಧ್ಯಕ್ಷರಿಗೆ ಈ ಅಧಿಕಾರವಿಲ್ಲ. ಪಕ್ಷದ ಹೈಕಮಾಂಡ್ ಇದೆ. ಅದಕ್ಕೊಂದು ನೀತಿ ನಿಯಮ ಎಂಬುದಿದೆ. ಬ್ಲಾಕ್ ಅಧ್ಯಕ್ಷರುಗಳು ಪಕ್ಷದ ನಿಯಮವನ್ನು ಮೀರಿ ಘೋಷಣೆ ಮಾಡಿದ್ದಾರೆ. ಅದು ಅವರ ವೈಯಕ್ತಿಕ ಹೇಳಿಕೆಯಾಗಿದ್ದು ಪಕ್ಷದ ತೀರ್ಮಾನವಲ್ಲ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಅಭಿಪ್ರಾಯ ಪಡೆದು ಮುಂದಿನ ಅವಧಿಗೆ ಶಾಸಕ ಅಭ್ಯರ್ಥಿಯ ಆಯ್ಕೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಅಧ್ಯಕ್ಷೆ ಜಯಂತಿ ಬಲ್ನಾಡು, ಸದಸ್ಯ ಮಹಮ್ಮದ್ ಆಲಿ, ಸದಸ್ಯ ಅನ್ವರ್ ಖಾಸಿಂ, ಪಕ್ಷದ ಮುಖಂಡ ನಾಗೇಶ್ ಆಚಾರ್ಯ ಉಪಸ್ಥಿತರಿದ್ದರು.