ವಿವಿಧ ಬೇಡಿಕೆಗೆ ಆಗ್ರಹಿಸಿ ಎಕ್ಸ್ಪ್ರೆಸ್ ರೈಲು ತಡೆದು ಪ್ರತಿಭಟನೆ
![ವಿವಿಧ ಬೇಡಿಕೆಗೆ ಆಗ್ರಹಿಸಿ ಎಕ್ಸ್ಪ್ರೆಸ್ ರೈಲು ತಡೆದು ಪ್ರತಿಭಟನೆ ವಿವಿಧ ಬೇಡಿಕೆಗೆ ಆಗ್ರಹಿಸಿ ಎಕ್ಸ್ಪ್ರೆಸ್ ರೈಲು ತಡೆದು ಪ್ರತಿಭಟನೆ](https://www.varthabharati.in/sites/default/files/images/articles/2016/12/2/2.jpg)
ಕಡಬ, ಡಿ.2. ವಿವಿಧ ಬೇಡಿಕೆಯನ್ನು ಮುಂದಿಟ್ಟುಕೊಂಡು ಕೋಡಿಂಬಾಳ ರೈಲ್ವೇ ಅಭಿವೃದ್ದಿ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಪಕ್ಷ, ಸಂಘಟನೆ, ಸಾರ್ವಜನಿಕರ ಸಹಯೋಗದೊಂದಿಗೆ ಕಡಬ ಸಮೀಪದ ಕೋಡಿಂಬಾಳ ರೈಲ್ವೇ ನಿಲ್ದಾಣದಲ್ಲಿ ಯಶವಂತಪುರ - ಕಾರವಾರ ರೈಲನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಹಗಲು ಮತ್ತು ರಾತ್ರಿ ಓಡಾಡುವ ಬೆಂಗಳೂರು - ಕಾರವಾರ, ಕಣ್ಣೂರು ರೈಲು ನಿಲುಗಡೆಯಾಗಬೇಕು. ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸಬೇಕು ಹಾಗೂ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಬೇಕು ಮತ್ತು ವಿದ್ಯುತ್ ಸಂಪರ್ಕ ನೀಡಬೇಕೆನ್ನುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈಲು ತಡೆದು ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯನ್ನು ಉದ್ದೇಶಿಸಿ ಕೋಡಿಂಬಾಳ ರ್ವೆಲ್ವೇ ಅಭಿವೃದ್ದಿ ಹೋರಾಟ ಸಮಿತಿ ಅಧ್ಯಕ್ಷ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ಕೋಡಿಂಬಾಳ ರೈಲ್ವೇ ನಿಲ್ದಾಣ 1982ರಲ್ಲಿ ಪ್ರಾರಂಭವಾಗಿದೆ. ಈ ಹಿಂದೆ ಬೆಂಗಳೂರು -ಮಂಗಳೂರು ರೈಲು ಕೋಡಿಂಬಾಳದಲ್ಲಿ ನಿಲುಗಡೆಯಾಗುತ್ತಿತ್ತು. ಹಳಿ ಪರಿವರ್ತನೆಯಾದ (ಬ್ರಾಡ್ ಗೇಜ್) ಬಳಿಕ ಲೋಕಲ್ ರೈಲುಗಳ ಮಾತ್ರ ನಿಲುಗಡೆಯಾಗುತ್ತಿದೆ. ಕೋಡಿಂಬಾಳ ರೈಲ್ವೇ ನಿಲ್ದಾಣ ಕಡಬಕ್ಕೆ ಸುಮಾರು ಎರಡು ಕಿಮೀ ಅಂತರವಿದ್ದು, ಈ ಭಾಗದ ಸುಮಾರು 27ಕ್ಕೂ ಗ್ರಾಮಗಳ ಸುಮಾರು 75 ಸಾವಿರ ಪ್ರಯಾಣ ಮಾಡುವ ಸಾರ್ವಜನಿಕರಿಗೆ ಅನುಕೂಲವಿಲ್ಲದೆ ರೈಲು ಇದ್ದೂ ಇಲ್ಲದಂತಾಗಿದೆ. ಅಲ್ಲದೆ ಮೂಲಭೂತ ಸೌಕರ್ಯಗಳಿಗೂ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಪಿ. ವರ್ಗಿಸ್, ತಾಲೂಕು ಪಂಚಾಯಿತಿ ಸದಸ್ಯ ಪಿ.ವೈ. ಕುಸುಮಾ, ರೈಲ್ವೇ ಅಭಿವೃದ್ದಿ ಹೋರಾಟ ಸಮಿತಿ, ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ, ಕಡಬ ವರ್ತಕರ ಸಂಘದ ಅಧ್ಯಕ್ಷ ಶಿವರಾಮ್, ಜೇಸಿಐ ಕಡಬ ಕದಂಬ ಅಧ್ಯಕ್ಷ ಜಯರಾಮ ಆರ್ತಿಲ, ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ಕುಮಾರ್ ರೈ, ಕಡಬ ಸಿ ಎ ಬ್ಯಾಂಕ್ ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಎಪಿಎಂಸಿ ಸದಸ್ಯೆ ಶಾಲಿನಿ ಸತೀಶ್ ನಾಕ್, ಕಡಬ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ ಡಿ. ಕೋಲ್ಪೆ, ಪ್ರಮುಖರಾದ ಎಲ್ಸಿ ತೋಮಸ್, ಶ್ಯಾಮ್ ತೋಮಸ್, ಸುಧೀರ್ ಕುಮಾರ್ ಶೆಟ್ಟಿ, ಚೆನ್ನಪ್ಪ ಗೌಡ, ಸತೀಶ್ ನಾಕ್, ಬಾಲಕೃಷ್ಣ ಬಳ್ಳೇರಿ ಮೊದಲಾದವರು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ಕೈಕುರೆ, ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಬು ಮುಗೇರ, ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಪೂಜಾರಿ, ನೂಜಿಬಾಳ್ತಿಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಸದಾನಂದ ಸಾಂತ್ಯಡ್ಕ, ರೈಲ್ವೇ ನಿಲ್ದಾಣ ಹೋರಾಟ ಸಮಿತಿಯ ಕಾರ್ಯದರ್ಶಿ ಕೆ.ವಿ ಶಿವರಾಮ ಗೌಡ ಕಲ್ಕಳ, ಮುಖಂಡರಾದ ಮಂಜುನಾಥ ಶೆಟ್ಟಿ ನವಸುಮ, ಪಿ.ಟಿ. ಸೈಮನ್ ಬೊಟ್ಟ ಮಜಲು ಮೊದಲಾದವರು ಉಪಸ್ಥಿತರಿದ್ದರು.
ಸಾವಿರಾರು ಸಾರ್ವಜನಿಕರು 2.30 ಸುಮಾರಿಗೆ ರೈಲ್ವೆ ನಿಲ್ದಾಣದಲ್ಲಿ ಜಮಾಯಿಸಿ ಘೋಷಣೆಗಳನ್ನು ಕೂಗಿದರು. ಎಂದಿಗಿಂತ ಒಂದು ತಾಸು ತಡವಾಗಿ ಆಗಮಿಸಿದ ರೈಲು ಸುಮಾರು 4 ಗಂಟೆಗೆ ಆಗಮಿಸಿದ ಯಶವಂತಪುರ - ಕಾರವಾರ ರೈಲುನ್ನು ಐದು ನಿಮಿಷಗಳ ಕಾಲ ತಡೆಹಿಡಿದು ಪ್ರತಿಭಟಿಸಲಾಯಿತು. ಈ ಸಂದರ್ಭ ಮೈಸೂರು ವಿಭಾಗದ ಡಿವಿಜನಲ್ ಚೀಫ್ ಎಕ್ಸಿಕ್ಯೂಟಿವ್ ಪ್ರ್ರಕಾಶ್ ಕಾಂಡ್ರಿ ಅವರಿಗೆ ಮನವಿ ನೀಡಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಲಾಯಿತು. ಮನವಿ ಸ್ವಿಕರಿಸಿ ಮಾತನಾಡಿದ ಪ್ರಕಾಶ್ ಕಾಂಡ್ರಿ, 15 ದಿವಸದೊಳಗೆ ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು. ಒಂದು ತಿಂಗಳಲ್ಲಿ ಮಂಗಳೂರು - ಪುತ್ತೂರು ರೈಲನ್ನು ನೆಟ್ಟಣ ವರೆಗೆ ವಿಸ್ತರಿಸಲಾಗುವುದಲ್ಲದೆ ಕೋಡಿಂಬಾಳದಲ್ಲಿ ನಿಲುಗಡೆಗೊಳಿಸಲಾಗುವುದು. ಮೂರು ತಿಂಗಳೊಳಗೆ ರೈಲ್ವೇ ಪ್ಲಾಟ್ ಫಾರ್ಮ್ ಮೇಲ್ದಜೆಗೇರಿಸುವುದು ಮತ್ತು ಬೆಂಗಳೂರು-ಕಾರವಾರ ಹಗಲು ಮತ್ತು ರಾತ್ರಿ ಎಕ್ರೆಪ್ರೆಸ್ ರೈಲು ನಿಲುಗಡೆಗೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು. ಈ ಸಂದರ್ಭ ಕಬಕ-ಪುತ್ತೂರು-ಹಾಸನ ರೈಲ್ವೇ ವಿಭಾಗದ ಸಹಾಯಕ ಇಂಜಿನಿಯರ್ ಗೋಪಾ ಕುಮಾರ್ ಮೊದಲಾದವರು ಸ್ಥಳದಲ್ಲಿದ್ದರು. ರೈಲ್ವೇ ಪೊಲೀಸರು ಹಾಗೂ ಪುತ್ತೂರು ನಗರ ಠಾಣಾಧಿಕಾರಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತು ಒದಗಿಸಿದ್ದರು.