ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಮೇಲೆ ಪ್ರಧಾನಿ ದಬ್ಬಾಳಿಕೆ : ಪೂಜಾರಿ ಆರೋಪ
![ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಮೇಲೆ ಪ್ರಧಾನಿ ದಬ್ಬಾಳಿಕೆ : ಪೂಜಾರಿ ಆರೋಪ ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಮೇಲೆ ಪ್ರಧಾನಿ ದಬ್ಬಾಳಿಕೆ : ಪೂಜಾರಿ ಆರೋಪ](https://www.varthabharati.in/sites/default/files/images/articles/2016/12/3/Janardhana-Poojary.jpg)
ಮಂಗಳೂರು, ಡಿ.3: ಬಿಜೆಪಿ ಆಡಳಿತವಿಲ್ಲದ ರಾಜ್ಯಗಳ ಮೇಲೆ ಪ್ರಧಾನಿ ನರೇಂದ್ರ ಮೋದಿ ದಬ್ಬಾಳಿಕೆ ಮಾಡತೊಡಗಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವ ಒಕ್ಕೂಟ ಮಾದರಿ ವ್ಯವಸ್ಥೆಗೆ ಧಕ್ಕೆಯಾಗಲಿದೆ. ತಕ್ಷಣ ನ್ಯಾಯಾಂಗ ಮಧ್ಯಪ್ರವೇಶಿಸುವ ಮೂಲಕ ಕೇಂದ್ರ-ರಾಜ್ಯ ಸರಕಾರಗಳ ನಡುವಿನ ಘರ್ಷಣೆಯನ್ನು ತಪ್ಪಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.
ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಒಕ್ಕೂಟ ವ್ಯವಸ್ಥೆಯನ್ನು ಕಾಪಾಡುವುದು ಪ್ರಧಾನಿಯವರ ಹೊಣೆಗಾರಿಕೆ. ಆದರೆ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರ ವಿರುದ್ಧ ಮಾತನಾಡುವುದನ್ನು ಸಹಿಸದೆ ಸೈನ್ಯವನ್ನು ಹೇರುವ ಮೂಲಕ ಪಶ್ಚಿಮ ಬಂಗಾಳದ ಸರಕಾರವನ್ನು ನಿಶ್ಯಕ್ತಗೊಳಿಸಲು ಮೋದಿ ಮುಂದಾಗಿದ್ದಾರೆ. ಇದನ್ನು ಖಂಡಿಸಿ ಮಮತಾ ಬ್ಯಾನರ್ಜಿ ಪ್ರತಿಭಟಿಸುತ್ತಿದ್ದಾರೆ. ಹಾಗಾಗಿ ನ್ಯಾಯಾಂಗ ಮಧ್ಯಪ್ರವೇಶಿಸಿ ದೇಶದ ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್ನಲ್ಲಿ ಕಪ್ಪು ಹಣವಿಲ್ಲವೇ ಎಂದು ಪ್ರಶ್ನಿಸಿದ ಪೂಜಾರಿ, ಪಶ್ಚಿಮ ಬಂಗಾಳದಲ್ಲಿ ಮಾತ್ರ ಕಪ್ಪು ಹಣ ಇದೆ ಎಂದು ಬೊಟ್ಟು ಮಾಡುತ್ತಿದ್ದಾರೆ. ಇದೇ ರೀತಿ ನಾಳೆ ಕರ್ನಾಟಕ ಸರಕಾರದ ಮೇಲೂ ಬ್ರಹ್ಮಾಸ ಪ್ರಯೋಗಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.