ನಿಟ್ಟೆ ಕಾಲೇಜಿನ ವಾರ್ಷಿಕೋತ್ಸವ : ಪ್ರಶಸ್ತಿ ವಿತರಣೆ

ಕೊಣಾಜೆ , ಡಿ.3 : ವಿದ್ಯಾರ್ಥಿಗಳು ಕಠಿಣ ಶ್ರಮ ವಹಿಸಿದರೆ ಯಶಸ್ಸು ನಮ್ಮ ಹಿಂದೆಯೇ ಬರುತ್ತದೆ. ಮಕ್ಕಳನ್ನು ಕಾಲೇಜಿಗೆ ಕಳುಹಿಸುವಾಗ ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನೇ ನಿರೀಕ್ಷಿಸುತ್ತಿದ್ದು ಪೋಷಕರ ನಿರೀಕ್ಷೆ ಈಡೇರುವಂತೆ ಮಾಡುವ ಗುರಿ ನಮ್ಮದಾಗಬೇಕು. ಶೈಕ್ಷಣಿಕ ಹಂತದಲ್ಲಿ ನಮ್ಮಲ್ಲಿ ಇರುವ ವಿವಿಧ ಪ್ರತಿಭೆಗಳನ್ನು ನಾವು ಇನ್ನಷ್ಟು ಪೋಷಿಸುತ್ತಾ ಮುಂದುವರಿಯುತ್ತಾ ಹೋದಾಗ ಆ ಕ್ಷೇತ್ರದಲ್ಲಿ ನಾವು ಉನ್ನತ ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ ಎಂದು ನಿಟ್ಟೆ ವಿವಿ ಸಹ ಕುಲಾಧಿಪತಿ ನಿಟ್ಟೆ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ಆಡಿಟೋರಿಯಂನಲ್ಲಿ ಶನಿವಾರ ನಡೆದ ಮಂಗಳೂರಿನ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜಿನ 17ನೇ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಂಗಳೂರು ಹಾಗೂ ಬೆಂಗಳೂರು ಸೇರಿದಂತೆ ಮೂರು ಪ್ರಮುಖ ಶೈಕ್ಷಣಿಕ ಕೇಂದ್ರಗಳನ್ನು ಕೆಂದ್ರೀಕೃತವಾಗಿ ನಿಟ್ಟೆ ವಿವಿ ಕಾರ್ಯಾಚರಿಸುತ್ತಿದ್ದು , ನಿಟ್ಟೆ ವಿವಿ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿದ್ದು ಅದಕ್ಕಾಗಿ ಸದಾ ಶ್ರಮಿಸುತ್ತಿರುವ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದು ತಪ್ಪಲ್ಲ. ಆದರೆ ಅದು ಯಾವುದೇ ಕಾರಣಕ್ಕೂ ನಮ್ಮ ಶೈಕ್ಷಣಿಕ ಸಾಧನೆಗೆ ಅಡ್ಡಿಯಾಗಬಾರದು. ಶಿಕ್ಷಣಕ್ಕೆ ಸಹಾಯವಾಗುವ ರೀತಿಯಲ್ಲಿ ಬಳಕೆ ಮಾಡುವ ಜ್ಞಾನ ನಮಲ್ಲಿರಬೇಕು. ಹಾಗೆಯೇ ಎರಡನೆಯ ವರ್ಷದ ಪಿಯುಸಿ ಫಲಿತಾಂಶ ನಮ್ಮ ಬದುಕಿನಲ್ಲಿ ಬಹಳ ಪ್ರಮುಖವಾಗಿದ್ದು ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಇರಲಿ ಎಂದು ಎಚ್ಚರಿಸಿದರು.
ನಿಟ್ಟೆ ವಿವಿಯ ಪಠ್ಯಕ್ರಮಗಳ ಅಧ್ಯಯನ ನಿರ್ದೇಶಕ ಪ್ರೊ. ರಾಜಶೇಖರ್ ಎಂ. ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿ ಶಿಕ್ಷಣದ ಮಹತ್ವ ವಿವರಿಸಿದರು.
ವಾರ್ಷಿಕೋತ್ಸವ ಸಂಘಟನಾ ಚೇರ್ಮೆನ್ ಐತಪ್ಪ ಆಳ್ವ, ಕಾಲೇಜಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಘದ ಪದಾಕಾರಿಗಳಾದ ಪುನೀತ್ ದೀಪಕ್ ಉಪಸ್ಥಿತರಿದ್ದರು.
ಮಂಗಳೂರಿನ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಟಿ.ಎಸ್.ಎನ್. ಭಟ್ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಆಂಗ್ಲ ಭಾಷಾ ಪ್ರಾಧ್ಯಾಪಕ ಕರುಣಾಕರ್ ಬಿ.ಕೆ. ಸ್ವಾಗತಿಸಿದರು. ಉಪ ಪ್ರಾಂಶುಪಾಲೆ ಅನ್ನಪೂರ್ಣ ನಾಯ್ಕಾ ವಾರ್ಷಿಕ ವರದಿ ಮಂಡಿಸಿದರು. ಅಶ್ವಿನಿ ಹೆಗ್ಡೆ ಪ್ರಶಸ್ತಿ ವಿಜೇತರ ಹೆಸರು ವಾಚಿಸಿದರು.
ಶ್ವೇತಾ ರಾವ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಗಗನ್ದೀಪ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿ ಐಶ್ವರ್ಯ ವಂದಿಸಿದರು.







