ರಾಷ್ಟ್ರಗೀತೆ ಹಾಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ನಲ್ಲಿ ಗೆದ್ದ ಕುಟುಂಬ!
ದೇವರಲ್ಲಿ ಬಿಟ್ಟು ಬೇರಾರಲ್ಲೂ ಪ್ರಾರ್ಥಿಸುವುದಿಲ್ಲ ಎಂಬ ಕಾರಣ

ತಿರುವನಂತಪುರಂ ಡಿ.4: ಥಿಯೇಟರ್ಗಳಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯ ಮಾಡಿರುವ ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿರುವಾಗ ಕೇರಳದ ವಿ.ಜೆ. ಇಮ್ಯಾನುವೆಲ್ ಈ ಬಗ್ಗೆ ಮಾತನಾಡಿದ್ದಾರೆ. ಇಮ್ಯಾನುವೆಲ್ ಬೇರಾರೂ ಅಲ್ಲ. ತಾವು ಹಾಗೂ ತಮ್ಮ ಕುಟುಂಬದ ಸದಸ್ಯರು ಯಾವುದೇ ಕಾರಣಕ್ಕೂ ರಾಷ್ಟ್ರಗೀತೆ ಹಾಡುವುದಿಲ್ಲ ಎಂದು ಘಂಟಾಘೋಷವಾಗಿ ಸಾರಿ ಅದಕ್ಕಾಗಿ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಅಲ್ಲಿ ಗೆದ್ದವರು ಈ ಇಮ್ಯಾನುವೆಲ್.
ಥಿಯೇಟರ್ಗಳಲ್ಲಿ ರಾಷ್ಟ್ರಗೀತೆ ಕಡ್ಡಾಯದ ಕುರಿತು ಮಾತನಾಡಿರುವ ಇಮ್ಯಾನುವೆಲ್, ಇದರಿಂದ ನಮಗೆ ಯಾವುದೇ ತೊಂದರೆಯಿಲ್ಲ. ರಾಷ್ಟ್ರಗೀತೆಗೆ ಗೌರವ ನೀಡಿ ಎದ್ದು ನಿಲ್ಲುವುದಕ್ಕೂ ನಮಗೆ ಸಮಸ್ಯೆಯಿಲ್ಲ. ಅಷ್ಟಕ್ಕೂ ಸಿನೆಮಾ ಥಿಯೇಟರ್ಗೆ ಹೋದರೆ ಮಾತ್ರ ಹೀಗೆ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಇಮ್ಯಾನುವೆಲ್ ನಿವೃತ್ತ ಪ್ರಾಧ್ಯಾಪಕರಾಗಿದ್ದಾರೆ. ಅವರಿಗೆ ಏಳು ಮಕ್ಕಳು. ಆ ಪೈಕಿ ಮೂವರು 1985ರಲ್ಲಿ ಕೊಟ್ಟಾಯಂ ಜಿಲ್ಲೆಯ ಎನ್.ಎಸ್.ಎಸ್. ಹೈಸ್ಕೂಲ್ನಲ್ಲಿ ಕಲಿಯುತ್ತಿದ್ದರು. ಈ ಶಾಲೆಯನ್ನು ಒಂದು ಹಿಂದೂ ಸಂಘಟನೆ ನಡೆಸುತ್ತಿತ್ತು. ಮೂವರು ಮಕ್ಕಳ ಹೆಸರು ಬಿಜು, ಬಿನು ಹಾಗೂ ಬಿಂದೂ. ಆಗ ಇವರಿಗೆ ಕ್ರಮವಾಗಿ 15, 14 ಹಾಗೂ 10 ವರ್ಷ ವಯಸ್ಸು.
ಈ ಮೂವರು ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದಕ್ಕೆ ಇವರನ್ನು ಶಾಲೆಯಿಂದ ಅಮಾನತು ಮಾಡಲಾಗಿತ್ತು. ವಿಷಯವೇನೆಂದರೆ ಇಮ್ಯಾನುವೆಲ್ ಕುಟುಂಬ ಕ್ರೈಸ್ತರಲ್ಲಿ ‘ಜೆಹೋವಾನ ಸಾಕ್ಷಿಗಳು’ ಎಂಬ ಪಂಗಡಕ್ಕೆ ಸೇರಿದೆ. ಅವರ ಪ್ರಕಾರ ದೇವರನ್ನು ಬಿಟ್ಟು ಬೇರಾರೂ ಬಳಿಯೂ ಪ್ರಾರ್ಥಿಸುವಂತಿಲ್ಲ. ಇಮ್ಯಾನುವೆಲ್ರ ಮೂವರ ಮಕ್ಕಳಲ್ಲದೆ ಅದೇ ಶಾಲೆಯಲ್ಲಿ ಒಂಬತ್ತು ಇತರ ಕ್ರೈಸ್ತ ಮಕ್ಕಳಿದ್ದರು. ಈ ಮಕ್ಕಳು ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲುತ್ತಿದ್ದರು. ಆದರೆ ತಾವು ಹಾಡುತ್ತಿರಲಿಲ್ಲ. ಈ ಬಗ್ಗೆ ಶಾಲೆಯಲ್ಲಿ ವಿವಾದ ಸೃಷ್ಟಿಯಾಯಿತು. ವಿಷಯ ಗಂಭೀರವಾಗಿ ಜುಲೈ 25, 1985ರಂದು ಇಮ್ಯಾನುವೆಲ್ರ ಮೂವರು ಮಕ್ಕಳು ಹಾಗೂ ಇತರ ಒಂಬತ್ತು ಕ್ರೈಸ್ತ ಮಕ್ಕಳನ್ನು ಶಾಲೆಯಿಂದ ತೆಗೆದುಹಾಕಲಾಯಿತು. ವಿವಾದ ಭುಗಿಲೆದ್ದು ಅಂದಿನ ಕಾಂಗ್ರೆಸ್ ಶಾಸಕ ವಿ.ಸಿ.ಕಬೀರ್ ವಿಷಯವನ್ನು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರು. ಈ ಬಗ್ಗೆ ಆಗಿನ ಶಿಕ್ಷಣ ಸಚಿವ ಟಿ.ಎಂ.ಜೇಕಬ್ ಕೂಡಾ ಆಕ್ಷೇಪ ವ್ಯಕ್ತಪಡಿಸಿದರು. ಆಗ ಇದ್ದ ಯುಡಿಎಫ್ ಸರಕಾರ ಈಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಏಕಸದಸ್ಯ ಆಯೋಗ ರಚಿಸಿತು. ತನಿಖೆಯ ಬಳಿಕ ಈ ಮಕ್ಕಳು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ತನಿಖಾ ಆಯೋಗ ಸಾಬೀತುಪಡಿಸಲಿಲ್ಲ. ಆದರೆ ಮಕ್ಕಳು ರಾಷ್ಟ್ರಗೀತೆ ನಾವು ಹಾಡುತ್ತೇವೆ ಎಂದು ಲಿಖಿತವಾಗಿ ನೀಡಬೇಕು ಎಂದು ಆಯೋಗ ಶಿಫಾರಸು ಮಾಡಿತು.
ಇದನ್ನು ಇಮ್ಯಾನುವೆಲ್ ತಿರಸ್ಕರಿಸಿದರು. ಇದರ ವಿರುದ್ಧ ಅವರು ಹೈಕೋರ್ಟ್ಗೆ ಹೋದರು. ಆದರೆ ಹೈಕೋರ್ಟ್ನಲ್ಲಿ ಎರಡು ಬಾರಿ ಅವರ ಅರ್ಜಿ ವಜಾ ಆಯಿತು. ಮಣಿಯದ ಇಮ್ಯಾನುವೆಲ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರು. 1986ರಲ್ಲಿ ಸುಪ್ರೀಂ ಕೋರ್ಟ್ ಇಮ್ಯಾನುವೆಲ್ ಪರವಾಗಿ ತೀರ್ಪು ನೀಡಿತು. ‘ರಾಷ್ಟ್ರಗೀತೆ ನುಡಿಸುವಾಗ ಅದನ್ನು ಹಾಡಲೇಬೇಕು ಎಂದು ಎಲ್ಲಿಯೂ ಬರೆದಿಲ್ಲ ಎಂದು ಈ ಹೊತ್ತಿನಲ್ಲಿ ನಾವು ಹೇಳಬಲ್ಲೆವು. ರಾ.ಗೀತೆಯ ಗೌರವದಲ್ಲಿ ಒಬ್ಬ ಎದ್ದು ನಿಂತರೆ ಅದೇ ಸಾಕು’ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತು. ಈ ತೀರ್ಪು ‘ಬಿಜೋಯ್ ಇಮ್ಯಾನುವೆಲ್ ವರ್ಸಸ್ ಸ್ಟೇಟ್ ಆಫ್ ಕೇರಳ’ ಎಂದೇ ಕಾನೂನು ವಲಯದಲ್ಲಿ ಹೆಸರು ಪಡೆದಿದೆ.
ಸುಪ್ರೀಂ ಕೋರ್ಟ್ನಲ್ಲಿ ಜಯ ಸಾಧಿಸಿ ಇಮ್ಯಾನುವೆಲ್ರ ಮಕ್ಕಳು ಮತ್ತೆ ಅದೇ ಶಾಲೆಗೆ ಹೋದರು. ಆದರೆ ಒಂದೇ ದಿನ ಶಾಲೆಗೆ ಹೋದ ಮಕ್ಕಳು ಬಳಿಕ ಶಾಲೆಗೆ ಹೋಗಲು ಮನಸ್ಸಿಲ್ಲ ಎಂದು ಬಿಟ್ಟುಬಿಟ್ಟರು. ತಂದೆ ಇಮ್ಯಾನುವೆಲ್ ಕೂಡಾ ಈ ಬಗ್ಗೆ ಮಕ್ಕಳಿಗೆ ಒತ್ತಡ ಹೇರಲಿಲ್ಲ. ಮಕ್ಕಳಿಗೆ ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗಳ ಜೊತೆಗೆ ಸ್ವಲ್ಪ ಸಾಮಾನ್ಯ ಜ್ಞಾನ ಇದ್ದರೆ ಸಾಕು ಎಂಬುದು ಅವರ ನಿಲುವಾಗಿತ್ತು.
ಈಗ ಇಮ್ಯಾನುವೆಲ್ ಅಜ್ಜ ಆಗಿದ್ದಾರೆ. ಅವರಿಗೆ ಎಂಟು ಮಂದಿ ಮೊಮ್ಮಕ್ಕಳಿದ್ದಾರೆ. ಅವರೆಲ್ಲರೂ ಬೇರೆಬೇರೆ ಶಾಲೆಗಳಿಗೆ ಹೋಗುತ್ತಾರೆ. ಆದರೆ ಅವರ್ಯಾರೂ ರಾಷ್ಟ್ರಗೀತೆ ಹಾಡುವುದಿಲ್ಲ. ಇವರೆಲ್ಲರನ್ನೂ ಶಾಲೆಗೆ ಸೇರಿಸುವ ಸಂದರ್ಭದಲ್ಲೇ ಈ ಹಿಂದಿನ ಎಲ್ಲ ವಿಷಯಗಳನ್ನು ತಿಳಿಸಿ ಸುಪ್ರೀಂ ಕೋರ್ಟ್ನ ಆದೇಶದ ಪ್ರತಿಯನ್ನು ತೋರಿಸಲಾಗಿದೆ. ಹಾಗಾಗಿ ಈವರೆಗೂ ಎಲ್ಲಿಯೂ ತೊಂದರೆಯಾಗಿಲ್ಲ ಎಂದು ಇಮ್ಯಾನುವೆಲ್ ಹೇಳುತ್ತಾರೆ.







