ಮನುಷ್ಯ ಸ್ಪರ್ಶ
ಮನೆಗೆ ಯಾರೋ ಬರುತ್ತಿದ್ದಾರೆಂದರೆ ಈಗಿನ ಬಹಳಷ್ಟು ಮಕ್ಕಳಿಗೂ ಮತ್ತು ದೊಡ್ಡವರಿಗೂ ಅಷ್ಟೇನೂ ಸಂಭ್ರಮ ಮತ್ತು ಸಡಗರಗಳಿರುವುದಿಲ್ಲ. ಕಾಯುವಿಕೆ, ಸಿದ್ಧವಾಗುವಿಕೆ, ಎದುರುಗೊಳ್ಳುವಿಕೆಗಳೇನೂ ಇಲ್ಲ. ಬಹಳಷ್ಟುದೊಡ್ಡವರೂ ಕೂಡ ಇತ್ತೀಚೆಗೆ ಬಂದವರೊಡನೆ ಏನು ಎತ್ತ ಅಂತ ಮಾತಾಡಿಸುವುದು ಓಡುತ್ತಿರುವ ಟಿವಿಯ ಸಮಕ್ಷಮದಲ್ಲೇ.
ಯಾಂತ್ರಿಕರು
ಇತ್ತೀಚೆಗಂತೂ ಬಹಳಷ್ಟುಮನೆಗಳಿಗೆ ಹೋದಾಗ ಮಕ್ಕಳು ಒಂದೋ ಮೊಬೈಲ್ನಲ್ಲಿ ಆಟಗಳನ್ನು ಆಡುತ್ತಿರುತ್ತಾರೆ. ಇಲ್ಲವೇ ಟಿವಿ ನೋಡುತ್ತಿರುತ್ತಾರೆ. ಮನೆಗೆ ಅತಿಥಿಗಳು ಅಥವಾ ಸ್ನೇಹಿತರು ಬಂದರು ಎಂದು ಮನೆಯ ಹಿರಿಯರು ಎದ್ದು ಸ್ವಾಗತಿಸಿ ಮಕ್ಕಳಿಗೆ ಬಂದವರಿಗೆ ಮಾತಾಡಿಸಲು ಅಥವಾ ಸೌಜನ್ಯಪೂರ್ವಕವಾದ ಸ್ವಾಗತದ ವಂದನೆಗಳನ್ನು ಸಲ್ಲಿಸಲು ಸೂಚಿಸುತ್ತಾರೆ. ಹಾಯ್ ಹೇಳು ಎಂತಲೋ, ನಮಸ್ಕಾರ ಹೇಳು ಎಂತಲೋ, ನೋಡು, ಅವರು ನಿನಗೆ ಮಾತಾಡಿಸುತ್ತಿದ್ದಾರೆ ಎಂತಲೋ ಏನಾದರೂ ಹೇಳಿದರೆ ಮಕ್ಕಳು ‘ಇದೊಂದು ಉಪದ್ರವ’ ಎನ್ನುವಂಥ ಭಾವದಿಂದ ಬಂದವರನ್ನು ನೋಡಿ, ಯಾಂತ್ರಿಕವಾಗಿ ಒಂದು ಪೇಲವ ನಗೆಯನ್ನು ಬಿಸಾಡಿ, ಮತ್ತೆ ತಮ್ಮ ಟಿವಿಯ ಕಡೆಗೋ, ಮೊಬೈಲ್ ಗೇಮ್ ಕಡೆಗೋ ತಿರುಗುತ್ತಾರೆ. ಇದು ಈ ಕಾಲಘಟ್ಟದ ಬಹಳ ಸಾಮಾನ್ಯ ದೃಶ್ಯವಾಗಿರುವುದು ಒಂದು ಸಾಂಸ್ಕೃತಿಕ ಮತ್ತು ಸಾಮಾಜಿಕ ದುರಂತ.
ಅವರೊಬ್ಬ ಲೇಖಕರು. ಸಾಹಿತ್ಯವಲಯದಲ್ಲಿ ಬಹಳ ಪರಿಚಿತ ಹೆಸರು. ಅವರ ಸಂಶೋಧನೆಗಳು ಮತ್ತು ಕ್ಷೇತ್ರಕಾರ್ಯಗಳು ಬಹಳ ವ್ಯಾಪಕವಾಗಿ ಎಲ್ಲೆಡೆಯೂ ಆದರಗೊಳ್ಳುತ್ತದೆ. ಅವರೇ ತೋಡಿಕೊಂಡಂತೆ ಅವರ ಬಹು ಬೇಸರದ ಸಂಗತಿಯೆಂದರೆ, ಅವರ ಮಕ್ಕಳಿಗೆ ಮನುಷ್ಯ ಸ್ಪರ್ಶದ ಕೊರತೆಯಾಗಿದೆ ಎಂದು. ಅವರು ಅವರ ಹೈಸ್ಕೂಲ್ ಹೋಗುತ್ತಿರುವ ಮಕ್ಕಳಲ್ಲಿ ಕಂಡಿರುವ ಪ್ರಮುಖ ದೋಷವೆಂದರೆ, ಯಾರೇ ಬಂದರೂ ನೋಡುತ್ತಿರುವ ಟಿವಿಯನ್ನು ಬಿಟ್ಟುಕದಲುವುದಿಲ್ಲ. ಟಿವಿಯನ್ನು ನೋಡುವಾಗ ಇರುವಂತ ಹುರುಪು, ಉತ್ಸಾಹ, ಟಿವಿಯಲ್ಲಿ ನಡೆಯುವ ಕ್ರಿಯೆಗಳಿಗೆ ನೀಡುವ ಪ್ರತಿಕ್ರಿಯೆಗಳು ನಿಜವಾದ ಮನುಷ್ಯರು ಬಂದಾಗ ಇರುವುದಿಲ್ಲ ಎಂಬುದು. ಬಂದವರಿಗೆ ನಮಸ್ಕಾರ ಹೇಳು ಎಂದರೆ, ನಮಸ್ಕಾರ ಎನ್ನುತ್ತಾರೆ. ಕೂತ್ಕೊಂಡು ಬಂದವರ ಜೊತೆಗೆ ಮಾತಾಡು ಎಂದರೆ, ‘‘ಏನು ಮಾತಾಡುವುದು?’’ ಎನ್ನುತ್ತಾರೆ. ಆ ಮಕ್ಕಳಿಗೆ ಬಂದವರೊಡನೆ ಏನು ಮಾತಾಡಬೇಕು ಎಂದು ತಿಳಿಯುವುದಿಲ್ಲ. ಅದು ಅವರ ತಪ್ಪಲ್ಲ. ಪಾಪ ಅವರಿಗೆ ನಿಜಕ್ಕೂ‘‘ಏನು ಮಾತಾಡಬೇಕು’’ ಎಂದು ತಿಳಿಯುವುದೇ ಇಲ್ಲ. ಈಗಷ್ಟೇ ನೋಡಿರುವ ಟಿವಿಯ ಕಾರ್ಯಕ್ರಮವೋ ಅಥವಾ ಅರ್ಧಕ್ಕೆನಿಂತಿರುವ ತಮ್ಮ ಮೊಬೈಲ್ ಗೇಮಿನ ಪಾಯಿಂಟ್ಸೋ ಅವರ ತಲೆಯಲ್ಲಿ ಓಡುತ್ತಿರುತ್ತದೆ. ಟಿವಿಯ ಕಾರ್ಯಕ್ರಮ ನೋಡುವುದರ ರಸಭಂಗ ಆಗಿರುವ ಬೇಸರ, ಆಟದಲ್ಲಿ ತೊಡಗಿರುವವರನ್ನು ಅದರಿಂದ ಹೊರಗೆಳೆದಿರುವುದರ ಬೇಸರ ಅವರಿಗೆ ಕಾಡುತ್ತಿರುತ್ತದೆ. ಹಾಗಾಗಿ ಅವರಿಗೆ ಬಂದವರೊಡನೆ ಏನೇ ಮಾತಾಡಬೇಕೆಂದರೆ ಕೃತಕವಾಗಿ ವ್ಯವಹರಿಸಬೇಕಾದ ಅನಿವಾರ್ಯತೆ ಕಾಡುತ್ತದೆ. ಇವರು ಯಾಕಾದರೂ ಬಂದರೋ ಎಂಬ ಕೋಪ ಬೇರೆ ಒಳಗೆ. ಆದರೆ ಅದನ್ನು ಹೊರಗೆಡುವ ಹಾಗಿಲ್ಲ. ಕೆಲವು ಮಕ್ಕಳಂತೂ ಯಾವ ಮುಲಾಜೂ ಇಲ್ಲದೇ ತಮ್ಮ ಕೋಣೆ ಸೇರಿ ಬಾಗಿಲು ಹಾಕಿಕೊಂಡುಬಿಡುತ್ತಾರೆ. ಎಷ್ಟೇ ಕರೆದರೂ ಬಾಗಿಲೂ ತೆರೆಯುವುದಿಲ್ಲ. ಹೊರಗೂ ಬರುವುದಿಲ್ಲ. ಅಷ್ಟರಮಟ್ಟಿಗೆ ಹಟವನ್ನೂ ಬೆಳೆಸಿಕೊಳ್ಳುತ್ತಾರೆ, ಅದೂ ವಿನಾಕಾರಣ.
ಮನೆಗೆ ಯಾರೋ ಬರುತ್ತಿದ್ದಾರೆಂದರೆ ಈಗಿನ ಬಹಳಷ್ಟು ಮಕ್ಕಳಿಗೂ ಮತ್ತು ದೊಡ್ಡವರಿಗೂ ಅಷ್ಟೇನೂ ಸಂಭ್ರಮ ಮತ್ತು ಸಡಗರಗಳಿರುವುದಿಲ್ಲ. ಕಾಯುವಿಕೆ, ಸಿದ್ಧವಾಗುವಿಕೆ, ಎದುರುಗೊಳ್ಳುವಿಕೆಗಳೇನೂ ಇಲ್ಲ. ಬಹಳಷ್ಟುದೊಡ್ಡವರೂ ಕೂಡ ಇತ್ತೀಚೆಗೆ ಬಂದವರೊಡನೆ ಏನು ಎತ್ತ ಅಂತ ಮಾತಾಡಿಸುವುದು ಓಡುತ್ತಿರುವ ಟಿವಿಯ ಸಮಕ್ಷಮದಲ್ಲೇ. ಅದರ ಮುಂದೆಯೇ ಕುಳಿತುಕೊಂಡು ಅದನ್ನೂ ನೋಡಿಕೊಂಡು, ಇವರೊಡನೆಯೂ ಮಾತಾಡಿಕೊಂಡು, ಕೆಲವರಂತೂ ಬಂದವರೂ ಇವರೊಂದಿಗೆ ಸೇರಿ ಟಿವಿ ನೋಡಲಿ ಎಂಬ ಔದಾರ್ಯವನ್ನು ಪ್ರದರ್ಶಿಸಿಕೊಂಡು ಕುಳಿತುಕೊಂಡುಬಿಡುತ್ತಾರೆ. ಇನ್ನು ಅವರ ಮಕ್ಕಳಂತೂ, ಮುಗಿಯಿತು. ಮುಂದೆಂದೂ ಬಂದವರೊಡನೆ ಇರಲಿ, ತಮ್ಮ ತಂದೆ ತಾಯಿಗಳೊಡನೆಯೇ ಮನುಷ್ಯ ಸ್ಪರ್ಶವನ್ನು ಹೊಂದುವುದು ಬಹು ಕಷ್ಟವಾಗುತ್ತದೆ. ಭಾವನೆಗಳೋ, ವಿಚಾರಗಳೋ ಎಲ್ಲವೂ ಯಾಂತ್ರಿಕವೇ ಆಗಿಹೋಗುತ್ತದೆ. ಒಬ್ಬರ ಅಗತ್ಯವನ್ನು ಒಬ್ಬರು ಪೂರೈಸಿಕೊಳ್ಳಲ್ಲಷ್ಟೇ ಸಂಬಂಧಗಳು ಸೀಮಿತವಾಗುತ್ತವೆ. ಯಾವಾಗ ಒಬ್ಬರ ಅಗತ್ಯವನ್ನು ಮತ್ತೊಬ್ಬರು ಪೂರೈಸಲು ಆಗುವುದಿಲ್ಲವೋ ಆಗ ಸಂಬಂಧಗಳು ಮುಲಾಜಿಲ್ಲದೇ ಕಡಿದುಬೀಳುತ್ತವೆ. ಆಗ ಅವರು ಮಾತಾಡುವುದೆಲ್ಲವೂ ಏನು ಮಾಡಿಲ್ಲ, ಏನು ಕೊರತೆಯಾಯಿತು, ತನ್ನ ಸ್ವಾತಂತ್ರ್ಯಕ್ಕೆಹೇಗೆ ತೊಡಕಾಯಿತು, ತನ್ನ ಇಚ್ಛೆಯು ನಿರಾಶೆಯಲ್ಲಿ ಬೀಳಲು ಅವರು ಹೇಗೆ ಕಾರಣರಾದರು; ಇಷ್ಟೇ. ಪೋಷಕರ ಮತ್ತು ಮಕ್ಕಳ ಸಮಾಲೋಚನೆಯಲ್ಲಿರಲಿ, ಕೌಟುಂಬಿಕ ಮತ್ತು ದಾಂಪತ್ಯ ಸಮಾಲೋಚನೆಗಳಲ್ಲೂ ಕೂಡ ಇಂತಹದ್ದೇ ಮಾತುಗಳು!
ಟಿವಿ ಮತ್ತು ಮೊಬೈಲುಗಳು ಬರುವ ಮುನ್ನ ಮನೆಯವರಿಗೆ ಏಕತಾನತೆಯನ್ನು ಒಡೆಯುತ್ತಿದ್ದವರೇ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಸ್ನೇಹಿತರು ಮತ್ತು ಬಂಧುಗಳು. ಅವರ ಆಗಮನದಿಂದ ದಿನನಿತ್ಯದ ಅಡುಗೆಯಲ್ಲದೇ ಮತ್ತೊಂದೇನೋ ಅಡುಗೆ, ಅವರು ಹೊತ್ತು ತರುವ ಹೊಸ ವಿಷಯಗಳು; ಹೀಗೆ ಎಂತದ್ದೋ ಒಂದು ಸಡಗರ ಕಾಣುತ್ತಿತ್ತು. ಟಿವಿ ಮತ್ತು ಮೊಬೈಲ್ಗಳಿಗೆ ವ್ಯಸನಿಗಳಾಗುತ್ತಿರುವವರ ಸಂಖ್ಯೆಯು ಇಂದು ಬೃಹತ್ ಪ್ರಮಾಣದಲ್ಲಿರುವುದರಿಂದ ಅವರಿಗೆ ಅವುಗಳನ್ನು ಬಿಟ್ಟರೆ ಬೇರೆ ಯಾರಾದರೂ ತೊಡಕು ಅನ್ನಿಸುವಷ್ಟರ ಮಟ್ಟಿಗೆ ಆಗುವ ಸಾಧ್ಯತೆಗಳಿವೆ. ಇನ್ನು ಊಟ ಮಾಡಿಸಬೇಕೆಂದರೆ ಕಾರ್ಟೂನ್, ಮಲಗಬೇಕೆಂದರೆ ಕಾರ್ಟೂನ್, ಸುಮ್ಮನಿದ್ದಾಗ ಮೊಬೈಲ್ ಗೇಮ್ ಇವುಗಳನ್ನು ಅಭ್ಯಾಸ ಮಾಡಿಕೊಳ್ಳುವ ಮಕ್ಕಳ ಗತಿ ಏನು ಎಂಬುದೇ ಬಹಳ ಆತಂಕಕಾರಿ ವಿಷಯ.
ಮಾಂತ್ರಿಕರು
ಮಕ್ಕಳು ಊಟ ಮಾಡದಿದ್ದರೆ ಕಥೆ ಹೇಳುತ್ತಾ ಊಟ ಮಾಡಿಸುವಂತಹ, ನಿದ್ರೆ ಹೋಗದಿದ್ದರೆ, ಜೋಗುಳ ಹಾಡುತ್ತಾ ನಿದ್ರೆಗೆಳೆಸುವಂತಹ, ತುಂಟಾಟ ಗಳು ಹೆಚ್ಚಾದರೆ ಶಿಶು ಗೀತೆಗಳನ್ನು ಹೇಳಿಕೊಡುತ್ತಾ, ಆಟವಾಡಿಸುತ್ತಾ ಅಂಕೆಗೆ ತರುವಂತಹ ಮಾಂತ್ರಿಕರಿದ್ದರು. ಬೆಡಗಿನ ಕಥೆಗಳನ್ನು ಕೇಳುತ್ತಾ ಬೆರಗಿನಿಂದ ಮಗುವು ಬಾಯಿ ಬಿಟ್ಟಾಗ ಅದರಲ್ಲಿ ಅಮ್ಮನ ಅಥವಾ ಅಜ್ಜಿಯ ಕೈಯಿಂದ ತುತ್ತು ಇಳಿದಿರುತ್ತಿತ್ತು. ಅದೇ ರೀತಿಯಲ್ಲಿ ಈಗ ಅಷ್ಟಿಲ್ಲದಿರುವುದಕ್ಕೆಕಾರಣ ಅಮ್ಮ ಮತ್ತು ಅಜ್ಜಿಯಂದಿರಿಗೂ ಮನೆಹಾಳು ಧಾರಾವಾಹಿಗಳ ಕತೆ ಕಾರ್ಪಣ್ಯ ಬೇಕು. ಅವರಿಗೆ ಸೆಳೆತ ಅತ್ತ ಇರುವುದರಿಂದ ವೌಖಿಕ ಪರಂಪರೆಯ ಕಥೆಗಳು ಹಿಂದೆ ಸರಿಯುತ್ತಿವೆ. ನಿಜ ಹೇಳಬೇಕೆಂದರೆ ಇಲ್ಲವಾಗುತ್ತಿವೆ.
ಪ್ರಾದೇಶಿಕವಾಗಿರುವಂತಹ ಮತ್ತು ಸ್ಥಳೀಯವಾಗಿರುವಂತಹ ಶಿಶು ಗೀತೆಗಳು, ಶಿಶು ಪ್ರಹಸನಗಳು ಮತ್ತು ಆಟಗಳು ಇದ್ದೇ ಇರುತ್ತವೆ. ಇವುಗಳು ಆಯಾ ಸ್ಥಳಗಳ ಸಾಂಸ್ಕೃತಿಕ ಮತ್ತು ಸಾಮಾಜಿಕ ಪಳೆಯುಳಿಕೆಗಳೂ ಆಗಿರುತ್ತವೆ.
ಚಪ್ಪಾಳೆ ತಟ್ಟುತ್ತಾ ಎದುರಿರುವವರ ಕೈಗಳನ್ನೂ ತಟ್ಟುತ್ತಾ, ‘‘ಅಚ್ಚಚ್ಚು ಬೆಲ್ಲದಚ್ಚು, ಅಲ್ಲಿ ನೋಡು, ಇಲ್ಲಿ ನೋಡು, ಸಂಪಂಗಿ ಮರದಲ್ಲಿ ಗುಂಪು ನೋಡು, ಯಾವ ಗುಂಪು, ಕಾಗೆ ಗುಂಪು, ಯಾವ ಕಾಗೆ, ಕಪ್ಪು ಕಾಗೆ, ಯಾವ ಕಪ್ಪು, ಮಡಿಕೆ ಕಪ್ಪು, ಯಾವ ಮಡಿಕೆ, ಸಾರು ಮಡಿಕೆ, ಯಾವ ಸಾರು, ಬೇಳೆ ಸಾರು, ಯಾವ ಬೇಳೆ, ತಿನ್ನೋ ಬೇಳೆ, ಏನು ತಿನ್ನು, ಏಟು ತಿನ್ನು’’ ಎಂದು ಕೊನೆಗೆ ಪರಸ್ಪರ ಹಾಸ್ಯವಾಗಿ ಹೊಡೆದಾಡಿಕೊಳ್ಳುವುದು ಒಂದು ಆಟ. ಇದರಲ್ಲಿ ಹಾಡುವ, ಇಬ್ಬರೂ ಅಥವಾ ಮೂವರೂ ಪರಸ್ಪರ ಸಾಮರಸ್ಯದಿಂದ ಒಂದು ಗತಿಯಲ್ಲಿ ಚಪ್ಪಾಳೆ ತಟ್ಟುತ್ತಾ ಆಡುವುದರಲ್ಲಿ ಒಂದು ಹೊಂದಾಣಿಕೆ ಇದೆ. ಒಬ್ಬರಿಗೊಬ್ಬರು ಅನುಸರಿಕೊಳ್ಳಬೇಕಾಗುವಂತಹ ಅಭ್ಯಾಸವಾಗುತ್ತದೆ. ನೀನು ಮತ್ತು ನಾನೂ ಇಬ್ಬರೂ ಸೇರಿದರೇನೇ ಚಪ್ಪಾಳೆ, ಹಾಡು, ಆಟ ಇತ್ಯಾದಿಗಳು ಎಂಬ ಸಾಮೂಹಿಕ ಪ್ರಜ್ಞೆಯೂ ಜಾಗೃತವಾಗುತ್ತಾ ಹೋಗುತ್ತದೆ.
ಇನ್ನು ಶಿಶು ಪ್ರಹಸನಗಳಲ್ಲಿ ನಮ್ಮಲ್ಲಿ ಬಹಳ ಜನಪ್ರಿಯವಾಗಿದ್ದದ್ದು, ಅಂಗೈಗಳನ್ನು ಕೆಳಮುಖ ಮಾಡಿ ಬೆರಳುಗಳನ್ನು ಊರಿ, ಕೈಗಳನ್ನು ನೆಲದಿಂದ ಸ್ವಲ್ಪ ಮೇಲಕ್ಕೆಎತ್ತಿ ಹಿಡಿದಿರುವುದು. ನಂತರ ಒಬ್ಬ ಆಟದ ನಿರ್ದೇಶಕರು ಒಲೆ ಬೂದಿ ತೆಗೆದೆ, ಗುಡಿಸಿದೆ, ಸಾರಿಸಿದೆ, ರಂಗೋಲಿ ಇಟ್ಟೆ, ಸೌದೆ ಇಟ್ಟೆ, ಬೆಂಕಿ ಇಟ್ಟೆ, ಹೆಂಚು (ಕಾವಲಿ) ಇಟ್ಟೆ, ಚೊಯ್ ಅಂತ ದೋಸೆ ಹೋಯ್ದೆ, ಬೆಂದೈತೋ ಬೆಂದಿಲ್ವೋ, ಬೆಂದಿಲ್ಲ ಎಂದು ಪರೀಕ್ಷಿಸುವುದು. ಇದು ಕುಳಿತವರೆಲ್ಲರ ಎರಡೂ ಕೈಗಳ ಮೇಲೆ ಆಗುತ್ತದೆ. ನಂತರ ಅವರಿಗೆ ದೋಸೆ ಬೆಂದಿದೆ ಎನಿಸಿದಾಗ ಎಲ್ಲರ ದೋಸೆಗಳನ್ನು ಸಂಗ್ರಹಿಸಿ ಒಂದೆಡೆ ಇಡುತ್ತಾರೆ. ನಂತರ ಅಜ್ಜಿ (ಆಟದ ನಿರ್ದೇಶಕ/ಕಿ) ಸ್ನಾನಕ್ಕೆಹೋಗುತ್ತಾಳೆ. ಆಗ ವಾಪಸು ಬಂದಾಗ ಯಾರು ಮುಚ್ಚಿಟ್ಟಿದ್ದ ದೋಸೆಗಳನ್ನು ಕದ್ದು ತಿನ್ನುವಾಗ ಸಿಕ್ಕಿಬೀಳುತ್ತಾರೋ ಅವರೇ ಈಗ ಆಟ ಆಡಿಸಬೇಕು.
ಇನ್ನು ಎಲ್ಲರೂ ಕುಳಿತುಕೊಂಡು ಕೈಗಳನ್ನು ಬೋರಲಾಗಿ ನೆಲದ ಮೇಲೆ ಇಟ್ಟುಕೊಂಡು ಹೇಳುವವರೊಬ್ಬರು ‘‘ಅವಲಕ್ಕಿಪವಲಕ್ಕಿಕಾಂಚನ ಮಿಣಮಿಣ ಡಾಂ ಡೂಂ ಡಸ್ ಪುಸ್ ಕೊಯ್ ಕೊಟಾರ್’’ ಎಂದು ಹೇಳುತ್ತಾ ಎಲ್ಲರ ಕೈಗಳನ್ನು ಮುಟ್ಟುತ್ತಾ ಹೋಗುವುದು. ನಂತರ ಕೊಟಾರ್ಗೆ ಸ್ಪರ್ಶಿತವಾದ ಕೈ ಅಂಗಾತ ಬೀಳುತ್ತದೆ. ನಂತರ ಅಂಗಾತ ಬಿದ್ದ ಕೈ ಹಿಂದಕ್ಕೆಹೋಗುತ್ತದೆ. ನಂತರ ಕೊನೆಗೆ ಉಳಿದ ಕೈಗೂ ಭೂಮಿ ಬೇಕೋ ಆಕಾಶ ಬೇಕೋ ಎಂದು ಕೇಳಿ ಕೊನೆಗೆ ಎಲ್ಲಾ ಕೈಗಳನ್ನೂ ಬೆನ್ನ ಹಿಂದಕ್ಕೆಕಳುಹಿಸಿ ಪ್ರಶ್ನೆಗಳನ್ನು ಕೇಳಲಾಗುವುದು. ‘‘ಕೈಗಳೆಲ್ಲಾ ಎಲ್ಲಿಗೆ ಹೋದ್ವು? ಸಂತೆಗೋದ್ವು. ಸಂತೆಯಿಂದ ಏನು ತಂದೆ? ಬಾಳೆಹಣ್ಣು ತಂದೆ. ಬಾಳೆಹಣ್ಣು ಏನು ಮಾಡ್ದೆ? ತಿಂದೆ. ಸಿಪ್ಪೆನ ಏನು ಮಾಡ್ದೆ? ಒಲೆಗಾಕ್ದೆ. ಒಲೆ ಏನು ಕೊಡ್ತು? ಬೂದಿಕೊಡ್ತು. ಬೂದಿನೇನು ಮಾಡ್ದೇ? ತಿಪ್ಪೆಗಾಕ್ದೆ. ತಿಪ್ಪೆ ಏನು ಕೊಡ್ತು? ಗೊಬ್ಬರ ಕೊಡ್ತು. ಗೊಬ್ಬರನೇನು ಮಾಡ್ದೆ? ತೋಟಕ್ಕಾಕ್ದೆ. ತೋಟ ಏನು ಕೊಡ್ತು? ಬಾಳೆಕಂದು ಕೊಡ್ತು. ಕಂದನ್ನೇನು ಮಾಡ್ದೇ? ಬಾಳೇಗಿಡ ಮಾಡ್ದೆ. ಬಾಳೇಗಿಡನೇನು ಮಾಡ್ದೆ? ಬೆಳಿಸ್ದೆ? ಬೆಳೆಸಿದ್ದಿಕ್ಕೇನು ಸಿಕ್ತು? ಗೊನೆ ಸಿಕ್ತು.’’ ಹೀಗೆ ಸಂತೆಗೆ ಹೋಗಿರುವ ಕೈಗಳನ್ನು ಮನೆಯ ಹಿತ್ತಲಿಗೆ ಹೋಗಿ ಕೃಷಿ ಮಾಡಿಸಿ, ಸಂತೆಯಿಂದ ತಂದ ಸರಕನ್ನು ತಾನೇ ಬೆಳೆಸಿಕೊಳ್ಳುವ ಉಪಾಯವನ್ನು ಹೇಳಿಕೊಡುವ ಇಂತಹ ಆಟಗಳು, ಆಟಗಳಲ್ಲಿ ಬಳಸುವ ಪದಗಳು, ಪ್ರಸಂಗಗಳು ಪ್ರಾದೇಶಿಕ ಭಿನ್ನತೆಗಳನ್ನು ಹೊಂದಿರುತ್ತವೆ. ಆದರೆ ಇವುಗಳಿಂದ ಏನು ಬಹುದೊಡ್ಡ ಉಪಯೋಗವೆಂದರೆ ಒಬ್ಬರೊಡನೆ ಮತ್ತೊಬ್ಬರು, ಒಬ್ಬರಿಗೆ ಒಬ್ಬರು ಪರಸ್ಪರ ಮನುಷ್ಯ ಸ್ಪರ್ಶವನ್ನು ಪಡೆಯುವುದು. ಆಟದಲ್ಲಿ ಒಬ್ಬರು ಪ್ರಶ್ನೆಗಳನ್ನು ಕೇಳಿದರೆ ಉತ್ತರ ಹೇಳಲೇ ಬೇಕು. ತಪ್ಪೋ ಸರಿಯೋ ಉತ್ತರ ಹೇಳಬೇಕು. ಪ್ರಶ್ನೆಗಳೂ ಬೆಳೆಯುತ್ತಿರುತ್ತವೆ. ಯಾಂತ್ರಿಕ ಮಕ್ಕಳ ರೀತಿಯಲ್ಲಿ ಉತ್ತರಿಸದೇ ಅಥವಾ ಉತ್ತರ ಹೇಳಲು ತೋಚದೇ ಕುಳಿತುಕೊಳ್ಳುವುದಿಲ್ಲ. ಒಬ್ಬರನೊಬ್ಬರು ನೋಡಬೇಕು. ಒಬ್ಬರನ್ನೊಬ್ಬರು ಮುಟ್ಟಬೇಕು. ಒಬ್ಬರಿಗೊಬ್ಬರು ಜವಾಬುಗಳನ್ನು ಕೊಡಬೇಕು. ಪ್ರತಿಯೊಬ್ಬರ ವ್ಯಕ್ತಿಗತವಾದಂತಹ ಸ್ವಭಾವಗಳು ಅವೇನೇ ಇದ್ದರೂ ಈ ಆಟದ ರೀತಿರಿವಾಜಿಗೆ ಒಳಪಟ್ಟುಸಂಯಮ ವಹಿಸಬೇಕು. ಒಬ್ಬೊಬ್ಬರನ್ನೂ ಸಂಬಾಳಿಸಬೇಕು. ತಮ್ಮನ್ನು ತಾವು ಒಂದು ರೀತಿಯಲ್ಲಿ ಶಿಸ್ತಿಗೆ ಒಳಪಡಿಸಿಕೊಳ್ಳುವುದಕ್ಕೂಕೂಡ ಇದು ಸಹಕರಿಸುತ್ತದೆ. ಒಟ್ಟಾರೆ ಮಾನವ ಸಂಘಜೀವಿ. ಇಂತಹ ಸಾಂಘಿಕ ಕ್ರೀಡೆಗಳಿಂದ ಒಬ್ಬರಿಗೊಬ್ಬರು ಸಮೀಪವಾಗುತ್ತಾರೆ. ಒಬ್ಬರನ್ನೊಬ್ಬರು ಅರಿಯುತ್ತಾರೆ. ತನ್ನ ಕೋಪಾಟಾಪ ಅಥವಾ ಇತರ ಸ್ವಭಾವದ ಪ್ರತಿಫಲನಗಳನ್ನು ಕಾಣುತ್ತಾರೆ. ತಾನು ವರ್ತಿಸುವಂತಹ ರೀತಿಗೆ ಇತರರ ಪ್ರತಿಕ್ರಿಯೆಗಳು ಹೇಗಿರುತ್ತದೆ ಎಂದೂ ತಿಳಿಯುತ್ತದೆ. ಆತ್ಮಾವಲೋಕನಕ್ಕೆಕಾರಣವಾಗುತ್ತದೆ. ಈ ರೀತಿಯಲ್ಲಿ ಆಡುವ ಮಕ್ಕಳನ್ನು ನೋಡುವ ಪೋಷಕರಿಗೆ, ಶಿಕ್ಷಕರಿಗೆ ಮತ್ತು ಮನೆಯ ಇತರ ಹಿರಿಯರಿಗೆ ಮಕ್ಕಳ ಮನಸ್ಥಿತಿಗಳ ಬಗ್ಗೆ ತಿಳುವಳಿಕೆ ಉಂಟಾಗುತ್ತದೆ. ಅವರಿಗೆ ಎಲ್ಲಿ ಹೇಗೆ ತಿದ್ದುವ ತೀಡುವ ಅರಿವಿನ ಪ್ರಕ್ರಿಯೆಗೆ ಒಯ್ಯುವ ಸಾಧ್ಯತೆಗಳನ್ನು ಕಂಡುಕೊಳ್ಳುವಂತಹ ಯೋಚನೆಗಳನ್ನು ಮಾಡಲಾಗುತ್ತದೆ.
ಮಗುವು ಟಿವಿಯನ್ನು ನೋಡುತ್ತಾ ಕುಳಿತುಬಿಟ್ಟರೆ, ಕೈಯಲ್ಲಿರುವ ಮೊಬೈಲ್ನಲ್ಲಿ ಆಡುತ್ತಾ ಕುಳಿತುಬಿಟ್ಟರೆ ಅದರ ಸ್ವಭಾವವನ್ನಾಗಲಿ, ಇತರರೊಂದಿಗೆ ಅದು ಬೆರೆಯುವ ಗುಣ ಮತ್ತು ಅವಗುಣಗಳನ್ನಾಗಲಿ ಹೇಗೆ ಗ್ರಹಿಸುವುದು? ಆ ಮಗುವಿಗಾದರೂ ತನ್ನೊಡನೆಯೇ ಇರುವಂತಹ ಇತರ ಸಹಜೀವಿಗಳ ಗುಣಸ್ವಭಾವಗಳನ್ನು ಹೇಗೆ ತಿಳಿದುಕೊಂಡೀತು? ಶಾಲೆಯಲ್ಲಿ ಅಥವಾ ಇನ್ನಾವುದೇ ಸಾಂಸ್ಥಿಕ ಚೌಕಟ್ಟಿನಲ್ಲಿ ನಿಯಮಗಳಿಗೆ ಬದ್ಧವಾಗಿ ಒಟ್ಟಾಗಿ ಕಲಿಯುವುದು, ಇರುವುದು ಬೇರೆ. ಯಾವುದೇ ಸಾಂಸ್ಥಿಕ ಕಟ್ಟುಪಾಡುಗಳಿಲ್ಲದೇ ಒಂದು ಸಾಮಾನ್ಯ ಪರಿಸ್ಥಿತಿಯಲ್ಲಿ ಒಬ್ಬರನ್ನೊಬ್ಬರು ಅರಿವುದು ಬಹಳ ಮಹತ್ವ್ವವಾಗಿರುವುದು ಮತ್ತು ಅದೇ ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸುವುದು.
‘‘ರತ್ತೋ ರತ್ತೋ ರಾಯನ ಮಗಳೇ, ಬಿತ್ತೋ ಬಿತ್ತೋ ಭೀಮನ ಮಗಳೇ, ಹದಿನಾರೆಮ್ಮೆ ಕಾಸಲಾರೆ, ಬೈಟೂ ಕಂಬ ಬಾಳೇ ಕಂಬ, ಕುಕ್ಕರಬಸವಿ, ಕುಕ್ಕೂರ ಬಸವಿ’’ ಎಂದು ಹೆಣ್ಣು ಮಕ್ಕಳು ಹಾಡಿಕೊಂಡು ಆಡುವುದಾಗಲಿ, ಗಂಡು ಮಕ್ಕಳು ಸಾಂಘಿಕವಾಗಿ ಚೂ ಚೆಂಡು, ಗೋಲಿ, ಬುಗುರಿ, ಪೇರಿ ಇತ್ಯಾದಿಗಳನ್ನು ಆಡುವುದಾಗಲಿ ಕ್ರಮೇಣ ಕಡಿಮೆಯಾಗುತ್ತಿವೆ. ಇದರಿಂದ ಸಾಂಘಿಕವಾಗಿ ವಿನಿಮಯವಾಗುವ ಆನಂದವೂ ಕೂಡ ಇಲ್ಲವಾಗುತ್ತಾ ತಾನು ವೀಕ್ಷಿಸುವ ಟಿವಿ, ತಾನು ಆಡುವ ವೀಡಿಯೊ ಗೇಮ್ ಅಥವಾ ಮೊಬೈಲ್ ಫೋನ್ನ ಆಟಗಳು ಮನುಷ್ಯ ಸ್ಪರ್ಶವನ್ನು ಇಲ್ಲವಾಗಿಸುತ್ತಾ ಬರುತ್ತಿವೆ. ತಾನೊಬ್ಬನೇ ತನ್ನ ಯಂತ್ರದೊಡನೆ ಆಡಿಕೊಂಡಿರುವಂತಹ ಮನುಷ್ಯನು ಇತರರ ದನಿಗೆ ತನ್ನ ಶೃತಿಯನ್ನು ಹೇಗೆ ಬೆರೆಸುತ್ತಾನೆ? ಒಟ್ಟಾರೆ ತಟ್ಟುವ ಚಪ್ಪಾಳೆಯ ಗತಿಗೆ ಹೇಗೆ ತಾಳ ಹಾಕುತ್ತಾನೆ?
ನನಗಿನ್ನೂ ನೆನಪಿದೆ. ಮನೆಗೆ ನೆಂಟರು ಮತ್ತು ಕುಟುಂಬದ ಮಿತ್ರರು ಮತ್ತು ಅವರ ಮಕ್ಕಳು ಬಂದಾಗ ಎಲ್ಲಾ ಮಕ್ಕಳು ಒಬ್ಬರಿಗೊಬ್ಬರು ಹೊಸಹೊಸ ಆಟಗಳನ್ನು ಹೇಳಿಕೊಡುತ್ತಾ ಆಡಿಕೊಳ್ಳುತ್ತಿದ್ದರು. ಹೆಂಗಸರು ಅಡುಗೆ ಮನೆಗಳಿಗೆ ಸೇರಿ ಅಡುಗೆಗೆ ಸಹಕರಿಸುತ್ತಾ ತಮ್ಮ ಕಲಿಕೆ ಮತ್ತು ಅನುಭವವನ್ನು ಕಾಣ್ಕೆಗಳಾಗಿ ನೀಡುತ್ತಾ ಅಡುಗೆಯ ವೈವಿಧ್ಯವನ್ನು ಹೆಚ್ಚಿಸುತ್ತಿದ್ದರು. ಗಂಡಸರು ಲೋಕದ ಮಾತುಗಳನ್ನು ಆಡಿಕೊಂಡು ಹೊಸಹೊಸ ದಿಕ್ಕುಗಳನ್ನು ಹುಡುಕಿಕೊಳ್ಳುತ್ತಿದ್ದರು. ಆದರೆ ಇವೆಲ್ಲವೂ ಕುಳಿತಲ್ಲಿಯೇ ಟಿವಿಗಳಲ್ಲಿ ಮತ್ತು ಮೊಬೈಲುಗಳಲ್ಲಿಯೂ ಆಗುತ್ತಿತ್ತು. ಆದರೆ ಕೊರತೆಯಾಗಿರುವುದು ಮನುಷ್ಯ ಸ್ಪರ್ಶ. ಜೀವಂತಿಕೆಯ ಸ್ಪಂದನ. ವ್ಯವಹಾರ, ವಿಚಾರ ಮತ್ತು ಮನೋರಂಜನೆಗಳಷ್ಟೇ ಬದುಕಲ್ಲ ಎಂದು ತಿಳಿಯುವುದೇ ಮನುಷ್ಯ ಮನುಷ್ಯರ ನೇರ ಸಂಪರ್ಕದಿಂದ. ಇಂದಿನ ಮಕ್ಕಳು ಅವುಗಳಿಂದ ವಂಚಿತರಾಗುತ್ತಿರುವುದು ನಮ್ಮ ಮುಂದಿನ ಮನುಷ್ಯ ಪೀಳಿಗೆಗಳ ದೌರ್ಭಾಗ್ಯ.