ತಮಿಳುನಾಡಿನ 'ಅಮ್ಮ'ನಿಗೆ ಲಘು ಹೃದಯಾಘಾತ ; ಆರೋಗ್ಯದಲ್ಲಿ ಏರುಪೇರು
.jpg)
ಚೆನ್ನೈ, ಡಿ.4: ಇಲ್ಲಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಮುಖ್ಯ ಮಂತ್ರಿ ಜಯಲಲಿತಾ ಅವರಿಗೆ ಇಂದು ಸಂಜೆ ಲಘು ಹೃದಯಾಘಾತವಾಗಿದೆ.
ಅಪೋಲೋ ಆಸ್ಪತ್ರೆಯ ಎಂಐಸಿಯುನಲ್ಲಿ ತಜ್ಞ ವೈದ್ಯರಿಂದ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸೆ.22ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಂತೆ ಅವರಿಗೆ ಇದೀಗ ಲಘು ಹೃದಯಾಘಾತವಾಗಿದೆ.
ಜಯಲಲಿತಾ ಅವರಿಗೆ ಲಘು ಹೃದಯಾಘಾತವಾಗಿದೆ ಎಂಬ ಸುದ್ದಿ ಬಹಿರಂಗಗೊಳ್ಳುತ್ತಿದ್ದಂತೆ ಆಸ್ಪತ್ರೆಯ ಕಡೆಗೆ ಅವರ ಅಭಿಮಾನಿಗಳು ಹೆಜ್ಜೆ ಹಾಕಿದ್ದಾರೆ. ಅಣ್ಣಾಡಿಎಂಕೆಯ ಸಹಸ್ರಾರು ಮಂದಿ ಕಾರ್ಯಕರ್ತರು, ಮುಖಂಡರು ಆಸ್ಪತ್ರೆ ಮುಂದೆ ಜಮಾಯಿಸಿ ಕಣ್ಣೀರಿಡುತ್ತಿದ್ದಾರೆ.
ಕಳೆದ 73 ದಿನಗಳಿಂದ ಜಯಲಲಿತಾ ಚಿಕಿತ್ಸೆ ಪಡೆಯುತ್ತಿರುವ ಅಪೋಲೋ ಆಸ್ಪತ್ರೆತೀವ್ರ ನಿಗಾ ಘಟಕದಿಂದ ಇತ್ತೀಚೆಗೆ ವಿಶೇಷ ವಾರ್ಡ್ಗೆ ಸ್ಥಳಾಂತರಿಸಲಾಗಿತ್ತು. ಇದೀಗ ಮತ್ತೆ ಎಂಐಸಿಯುಗೆ ವರ್ಗಾಯಿಸಿ, ಜೀವರಕ್ಷಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಅಪೋಲೋ ಆಸ್ಪತ್ರೆಯ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುಖ್ಯ ಮಂತ್ರಿ ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ಹಿನ್ನೆಲೆಯಲ್ಲಿ ಉಸ್ತುವಾರಿ ರಾಜ್ಯಪಾಲ ಸಿ. .ವಿದ್ಯಾಸಾಗರ್ ಮುಂಬೈನಿಂದ ಚೆನ್ನೈ ಆಸ್ಪತ್ರೆಯತ್ತ ಧಾವಿಸಿದ್ದಾರೆ. ಕೇಂದ್ರ ಗೃಹ ಸಚಿವ ರಾಜ್ನಾಥ್ ಸಿಂಗ್ ಅವರು ರಾಜ್ಯಪಾಲರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಜಯಲಲಿತಾ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಹೈಲೈಟ್ಸ್
* ಅಪೋಲೋ ಆಸ್ಪತ್ರೆಗೆ ಹೊರಟ ಏಮ್ಸ್ನ ತಜ್ಞ ವೈದ್ಯರ ತಂಡ.
* ಏರ್ಪೋರ್ಟ್ನಲ್ಲಿ ರಾಜ್ಯಪಾಲರಿಂದ 15 ನಿಮಿಷಗಳ ಸಭೆಗೆ ತಯಾರಿ.
*ಅಪೋಲೋ ಆಸ್ಪತ್ರೆಯಲ್ಲಿ ತುರ್ತು ಸಚಿವ ಸಂಪುಟದ ಸಭೆ.
* ಜಯಲಲಿತಾ ಶೀಘ್ರವಾಗಿ ಗುಣಮುಖರಾಗಲಿ ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಟ್ವೀಟ್.
*ಜಯಲಲಿತಾ ವೆಲ್ ಆ್ಯಂಡ್ ಫೈನ್ ಪಕ್ಷದ ನಾಯಕರ ಸ್ಪಷ್ಟನೆ.
*ಅಪೋಲೋ ಆಸ್ಪತ್ರೆಯಲ್ಲಿ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ ರೆಡ್ಡಿ ಸುದ್ದಿಗೋಷ್ಠಿ.
*ಅಣ್ಣಾ ವಿವಿಯ ಎಲ್ಲ ಪರೀಕ್ಷೆಗಳು ಬುಧವಾರಕ್ಕೆ ಮುಂದೂಡಿಕೆ.
*ಚೆನ್ನೈನ ಎಲ್ಲ ಪೆಟ್ರೋಲ್ ಬಂಕ್ಗಳು ಬಂದ್.
*ಚೆನ್ನೈನಲ್ಲಿ ಆಘೋಷಿತ ಬಂದ್ ವಾತಾವರಣ ನಿರ್ಮಾಣವಾಗುತ್ತಿದೆ..,ಟಾಕ್ಸಿ,ಬಸ್, ಸಂಚಾರ ಬಂದ್ ಆಗಿದೆ.
* ತಮಿಳುನಾಡಿನ ಶಾಲಾ , ಕಾಲೇಜುಗಳಿಗೆ ರಜೆ ಘೋಷಣೆ.
*ಆಸ್ಪತ್ರೆಗೆ ಆಗಮಿಸಿದ ರಾಜ್ಯಪಾಲ ಸಿ.ವಿದ್ಯಾಸಾಗರ್.
* ಕರ್ನಾಟಕ-ತಮಿಳುನಾಡು ಗಡಿಯಲ್ಲಿ ಕಟ್ಟೆಚ್ಚರ. ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸಲು ಪೊಲೀಸ್ ಬಂದೋಬಸ್ತ್.
* ಕರ್ಣಾಟಕ ಸಿಎಂ ಸಿದ್ದರಾಮಯ್ಯ ಅವರು ಸೋಮವಾರ ದಿಲ್ಲಿಗೆ ನೀಡಲಿದ್ದ ಭೇಟಿಯನ್ನು ರದ್ದುಪಡಿಸಲಾಗಿದೆ..
*ಚೆನ್ನೈ ಪ್ರವೇಶಿಸುವ ಎಲ್ಲ ಮಾರ್ಗಗಳು ಬಂದ್ ಆಗಿದೆ.
* ತಮಿಳುನಾಡು ರಾಜ್ಯಾದ್ಯಂತ ಸೆಕ್ಷನ್ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.







