ಎರಡೂವರೆ ತಿಂಗಳ ಬಳಿಕ ಏಕದಿನ ಪಂದ್ಯ ಆಡಲು ಧೋನಿ ಸಜ್ಜು

ಹೊಸದಿಲ್ಲಿ, ಡಿ.14: ಭಾರತದ ಸೀಮಿತ ಓವರ್ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸುಮಾರು ಎರಡೂವರೆ ತಿಂಗಳ ಬಳಿಕ ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯ ಆಡಲು ಸಜ್ಜಾಗುತ್ತಿದ್ದಾರೆ.
ವಿಶಾಖಪಟ್ಟಣದಲ್ಲಿ ಅ.29 ರಂದು ನ್ಯೂಝಿಲೆಂಡ್ನ ವಿರುದ್ಧ ಕೊನೆಯ ಬಾರಿ ಪಂದ್ಯವನ್ನು ಆಡಿರುವ ಧೋನಿ ಜನವರಿ 15 ರಂದು ಪುಣೆಯಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಆಡಲಿದ್ದಾರೆ. ಧೋನಿ ಎರಡೂವರೆ ತಿಂಗಳ ಬಳಿಕ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.
ಶಿಷ್ಟಾಚಾರದ ಪ್ರಕಾರ ಗಾಯಗೊಂಡ ಆಟಗಾರನನ್ನು ರಾಷ್ಟ್ರೀಯ ಆಯ್ಕೆಗೆ ಪರಿಗಣಿಸಬೇಕಾದರೆ ಕನಿಷ್ಠ ಒಂದು ಪ್ರಥಮ ದರ್ಜೆ ಪಂದ್ಯ ಆಡಿರಬೇಕಾಗುತ್ತದೆ. ಆದರೆ, ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿರುವ ಧೋನಿಗೆ ಈ ನಿಯಮ ಅನ್ವಯಿಸುವುದಿಲ್ಲ.
ಧೋನಿ ಜಾರ್ಖಂಡ್ನ ಪರ ವಿಜಯ ಹಝಾರೆ ಟ್ರೋಫಿಯನ್ನು ಆಡುವುದರೊಂದಿಗೆ 2015ರಲ್ಲಿ ಆಸ್ಟ್ರೇಲಿಯ ವಿರುದ್ಧ ಸೀಮಿತ ಓವರ್ ಪಂದ್ಯಕ್ಕೆ ತಯಾರಿಯಾಗಿದ್ದರು.
ಈ ಬಾರಿಯ ವಿಜಯ ಹಝಾರೆ ಟ್ರೋಫಿ ಫೆ.25 ರಿಂದ ಆರಂಭವಾಗಲಿದೆ. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಕೊನೆಗೊಂಡ 4 ವಾರಗಳ ಬಳಿಕ ಈ ಟೂರ್ನಿ ಆರಂಭವಾಗಲಿದೆ.
ಏಕದಿನದ ಇತರ ಸ್ಪೆಷಲಿಸ್ಟ್ ಆಟಗಾರರು ತಮ್ಮ ರಾಜ್ಯದ ಪರ ರಣಜಿ ಪಂದ್ಯಗಳನ್ನು ಆಡುತ್ತಿದ್ದಾರೆ. ಧೋನಿಗೆ ಇಂತಹ ಆಯ್ಕೆ ಇನ್ನಷ್ಟೇ ಲಭಿಸಬೇಕಾಗಿದೆ.
ಭಾರತದ ಆಟಗಾರರು ಇತರ ಖಾಸಗಿ ಲೀಗ್ಗಳಲ್ಲಿ ಆಡದಂತೆ ಬಿಸಿಸಿಐ ನಿರ್ಬಂದ ಹೇರಿದೆ. ಈ ಹಿನ್ನೆಲೆಯಲ್ಲಿ ಧೋನಿಗೆ ಈಗ ನಡೆಯುತ್ತಿರುವ ಬಾಂಗ್ಲಾದೇಶ ಕ್ರಿಕೆಟ್ ಲೀಗ್ನಲ್ಲಿ(ಬಿಪಿಎಲ್) ಭಾಗವಹಿಸಲು ಸಾಧ್ಯವಾಗುತ್ತಿಲ್ಲ.
ಈಗ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಜಾರ್ಖಂಡ್ ತಂಡ ನಾಕೌಟ್ ಹಂತಕ್ಕೆ ಅರ್ಹತೆ ಪಡೆದಿದೆ. ಇಶಾನ್ ಕಿಶನ್ ವಿಕೆಟ್ಕೀಪಿಂಗ್ ನಡೆಸುತ್ತಿರುವ ಹಿನ್ನೆಲೆಯಲ್ಲಿ ಧೋನಿ ಈ ತನಕ ಜಾರ್ಖಂಡ್ ತಂಡದ ಪರ ಕೇವಲ ಬ್ಯಾಟ್ಸ್ಮನ್ ಆಗಿ ಆಡುವ ಸಾಧ್ಯತೆ ಗೋಚರಿಸುತ್ತಿಲ್ಲ.
‘‘ಧೋನಿ ರಣಜಿ ಟ್ರೋಫಿ ಪಂದ್ಯ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ನಮ್ಮಲ್ಲಿ ಮಾಹಿತಿಯಿಲ್ಲ. ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತಿಯಾಗಿದ್ದಾರೆ. ಅವರು ಜಾರ್ಖಂಡ್ ತಂಡದೊಂದಿಗೆ ನಿರಂತರ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಮಾಹಿತಿ ನಮಗೆ ಲಭಿಸಿದೆ’’ ಎಂದು ಹಿರಿಯ ಕ್ರಿಕೆಟಿಗರ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ರವಿವಾರ ತಿಳಿಸಿದ್ದಾರೆ.
‘‘ಧೋನಿ ಇನ್ನು ಮುಂದೆ ಟೆಸ್ಟ್ ಕ್ರಿಕೆಟ್ ಆಡುವುದಿಲ್ಲ. ಹೀಗಾಗಿ ಅವರು ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಡುವ ಪ್ರಶ್ನೆಯೇ ಉದ್ಬವಿಸದು. ಜಾರ್ಖಂಡ್ ತಂಡಕ್ಕೆ ಅವರು ಮೆಂಟರ್ ಆಗಿದ್ದಾರೆ. ಅವರು ವಿಜಯ್ ಹಝಾರೆ ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಲಿದ್ದಾರೆ’’ ಎಂದು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಶರ್ಮ ಸ್ಪಷ್ಟಪಡಿಸಿದ್ದಾರೆ.
ಜಾರ್ಖಂಡ್ ತಂಡ ದಿಲ್ಲಿಯ ಕರ್ನೈಲ್ ಸಿಂಗ್ ಸ್ಟೇಡಿಯಂನಲ್ಲಿ ಮಹಾರಾಷ್ಟ್ರದ ವಿರುದ್ಧ ಆಡುತ್ತಿದ್ದಾಗ ಧೋನಿ ತನ್ನ ರಾಜ್ಯ ತಂಡದೊಂದಿಗೆ ಇದ್ದರು. ಧೋನಿ ಡ್ರೆಸಿಂಗ್ ರೂಮ್ನಲ್ಲಿ ಕುಳಿತುಕೊಂಡು ವರುಣ್ ಆ್ಯರೊನ್ ನೇತೃತ್ವದ ಜಾರ್ಖಂಡ್ ತಂಡವನ್ನು ಹುರಿದುಂಬಿಸುತ್ತಿದ್ದರು.







