ಮಾನವೀಯತೆ ಮೆರೆದ ಪತ್ರಕರ್ತ
ಉಪ್ಪಿನಂಗಡಿ, ಡಿ.4: ಬಸ್ ನಿಲ್ದಾಣದಲ್ಲಿ ಅನಾಥ ಬ್ಯಾಗೊಂದನ್ನು ಎತ್ತಿಟ್ಟ ಪತ್ರಕರ್ತರೋರ್ವರು ಅದನ್ನು ವಾರಸುದಾರರಿಗೆ ತಲುಪಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಹೀರೆಬಂಡಾಡಿ ಗ್ರಾಮದ ನಿವಾಸಿ ಮನೋರಮಾ ಎಂಬ ಮಹಿಳೆಯೋರ್ವರು ಶುಕ್ರವಾರ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ಹಲವು ಬ್ಯಾಗ್ಗಳೊಂದಿಗೆ ಬಂದಿದ್ದು ತೆರಳುವ ವೇಳೆಯಲ್ಲಿ ಒಂದು ಬ್ಯಾಗ್ ಬಿಟ್ಟು ಹೋಗಿದ್ದರು. ಅನಾಥವಾಗಿದ್ದ ಬ್ಯಾಗ್ನ್ನು ಬಸ್ನಿಲ್ದಾಣದ ಬಳಿಯೇ ಕಚೇರಿ ಹೊಂದಿದ್ದ ಪತ್ರಕರ್ತ ಸರ್ವೇಶ್ ಕುಮಾರ್ ಬ್ಯಾಗ್ನ ಸುರಕ್ಷೆತೆಗಾಗಿ ರಾತ್ರಿ ವೇಳೆ ತನ್ನ ಕಚೇರಿಯಲ್ಲಿರಿಸಿದ್ದರು. ಶನಿವಾರ ಬ್ಯಾಗ್ ಹುಡುಕಾಡಿಕೊಂಡು ಬಂದ ಮಹಿಳೆಯನ್ನು ವಿಚಾರಿಸಿದಾಗ ತನ್ನ ಬ್ಯಾಂಗ್ವೊಂದು ನಿನ್ನೆ ದಿನ ಮರೆತು ಹೋಗಿದ್ದಾಗಿ ತಿಳಿಸಿದರು. ಈ ವೇಳೆ ಬ್ಯಾಗ್ ಕಂಡವರ ಪಾಲಾಗದಿರಲಿ ಎಂದು ಅದನ್ನು ತನ್ನ ಕಚೇರಿಯಲ್ಲಿರಿಸಿದ್ದೇನೆ ಎಂದು ಸರ್ವೇಶ್ ಕುಮಾರ್ ತಿಳಿಸಿ ಬ್ಯಾಗನ್ನು ಮನೋರಮಾರವರ ಕೈಗಿತ್ತರು.
ಬ್ಯಾಗ್ ದೊರೆತ ಸಂತೋಷದಿಂದ ಮಹಿಳೆ ಕೊಡುಗೆ ನೀಡಲು ಮುಂದಾದಾಗ ಪತ್ರಕರ್ತ ಸರ್ವೇಶ್ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.