ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನಕ್ಕೆ ನೂರರ ಸಂಭ್ರಮ

ಮಂಗಳೂರು, ಡಿ. 5: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಮಂಗಳೂರು ಅಭಿಯಾನದ ಅಂಗವಾಗಿ 11 ಪ್ರದೇಶಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು.
ಎ.ಬಿ.ಶೆಟ್ಟಿ ವೃತ್ತ:
ಶ್ರೀರಾಮ್ ಟ್ರಾನ್ಸ್ಫೋರ್ಟ್ ಫೈನಾನ್ಸ್ ಸಿಬ್ಬಂದಿ ಎ.ಬಿ.ಶೆಟ್ಟಿ ವೃತ್ತದ ಬಳಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರು. ಕಂಪೆನಿಯ ಡಿಜಿಎಂ ಶರತ್ಚಂದ್ರ ಹಾಗೂ ಸತ್ಯನಾರಾಯಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೃತ್ತದ ಪಕ್ಕದಲ್ಲಿರುವ ಕಿರು ಗಾರ್ಡನ್ ಸ್ವಚ್ಛ ಮಾಡಿ ನೂತನವಾಗಿ ಸಸಿ ನೆಡಲಾಯಿತು.
ಜಿ.ಎಚ್.ಎಸ್.ರಸ್ತೆ:
ಗಣಪತಿ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಮಹಮ್ಮಾಯ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಅಭಿಯಾನ ನಡೆಯಿತು. ಜಿ.ಜಿ.ಮೋಹನ ದಾಸ ಪ್ರಭು ಹಾಗೂ ಶಾಲಿನಿ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು 150 ವಿದ್ಯಾರ್ಥಿಗಳನ್ನು ಎರಡು ತಂಡವಾಗಿ ವಿಂಗಡಿಸಿ ಸ್ವಚ್ಛತೆ ಮಾಡಿಸಲಾಯಿತು.
ಬೋಳಾರ:
ನಿವೇದಿತಾ ಬಳಗದ ಸದಸ್ಯರಿಂದ ಬೋಳಾರದ ಲೀವೆಲ್ಲ ಬಸ್ ತಂಗುದಾಣದಿಂದ ಬೋಳಾರ ಮುಖ್ಯರಸ್ತೆಯ ವರೆಗೆ ಸ್ವಚ್ಛತಾ ಕಾರ್ಯ ನಡೆಯಿತು. ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ರಸ್ತೆಯ ಬದಿಯಲ್ಲಿಯ ತೋಡುಗಳಲ್ಲಿದ್ದ ಅಪಾರ ಪ್ರಮಾಣದ ಕಸವನ್ನು ಹೊರತೆಗೆದರು. ಹಾಗೆಯೇ ರಸ್ತೆಯನ್ನು ಗುಡಿಸಿ ಸ್ವಚ್ಛ ಮಾಡಲಾಯಿತು.
ಕೊಂಚಾಡಿ:
ಕೊಂಚಾಡಿ ಫ್ರೆಂಡ್ಸ್ ಸರ್ಕಲ್ ತಂಡದಿಂದ ಮಾಲೆಮಾರ್ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು. ರತ್ನಾಕರ ಶೆಟ್ಟಿಗಾರ ಹಾಗೂ ಜಗದೀಶ್ ಶೆಟ್ಟಿ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಿಜೈ: ಮಂಗಳೂರು ಹಿರಿಯ ನಾಗರಿಕರಿಂದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಹಿರಿಯರಾದ ಕೇಶವ ರಾವ್ ಹಾಗೂ ದಾಮೋದರ್ ಹೆಗ್ಡೆ ಈ ವಾರದ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು.ಮೊದಲು ಪುಟ್ಫಾತ್ ಮೇಲಿದ್ದ ಕಲ್ಲು ಮಣ್ಣಿನ ರಾಶಿಯನ್ನು ತೆರವುಗೊಳಿಸಿನಂತರ ಬಿಜೈ ಕಾಪಿಕಾಡ್ ರಸ್ತೆ ಹಾಗೂ ಭಾಜಕಗಳಲ್ಲಿದ್ದ ತ್ಯಾಜ್ಯವನ್ನು ತೆಗೆಯಲಾಯಿತು. ರಸ್ತೆ ಬದಿ ವ್ಯಾಪಾರಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಯಿತು.
ರಥಬೀದಿ:
ಶ್ರೀಗೋಕರ್ಣ ಮಠದ ಭಕ್ತರು ಹಾಗೂ ರಥಬೀದಿ ನಾಗರಿಕರಿಂದ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಾಜಿ ಶಾಸಕ ಯೋಗಿಶ್ ಭಟ್ ಹಾಗೂ ಮನಪಾ ಸದಸ್ಯೆ ಪೂರ್ಣಿಮಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿದರು. ನರೇಶ್ ಕಿಣಿ ಮುದಾಳತ್ವದಲ್ಲಿ ಹೂವಿನ ಮಾರುಕಟ್ಟೆಯಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದ ದ್ವಾರದವರೆಗೆ ಶುಚಿತ್ವದ ಕಾರ್ಯ ನಡೆಸಿದರು. ಗೋಡೆಗಳಿಗೆ ಅಂಟಿಸಿದ್ದ ಪೋಸ್ಟರಗಳನ್ನು ತೆಗೆದು ಸ್ವಚ್ಚಗೊಳಿಸಲಾಯಿತು.
ಮುಳಿಹಿತ್ಲು:
ಶ್ರೀಅಂಬಾಮಹೇಶ್ವರೀ ಭಜನಾ ಮಂಡಳಿಯ ಸದಸ್ಯರಿಂದ ಮುಳಿಹಿತ್ಲುನಿಂದ ಅಂಬಾನಗರಕ್ಕೆ ಹೋಗುವ ರಸ್ತೆಯಲ್ಲಿ ಸ್ವಚ್ಛತಾ ಅಭಿಯಾನ ನಡೆಯಿತು. ಹೇವಲತಾ ಹಾಗೂ ಜಯಂತಿ ಮಾರ್ಗದರ್ಶನದಲ್ಲಿ ಮನೆ ಮನೆಗೆ ತೆರಳಿ ಕಸ ಬಿಸಾಡದಂತೆ ಜಾಗೃತಿ ಮೂಡಿಸಲಾಯಿತು. ರಮೇಶ್ ಕೊಟ್ಟಾರಿ ನೇತೃತ್ವದಲ್ಲಿ ಅಂಬಾನಗರದ ಮಾರ್ಗಗಳನ್ನು ಸ್ವಚ್ಛ ಮಾಡಲಾಯಿತು.
ಮಂಗಳಾದೇವಿ:
ಶ್ರೀ ಭಗಿನಿ ಸಮಾಜದ ವಿದ್ಯಾರ್ಥಿಗಳಿಂದ ಮಂಗಳಾದೇವಿ ಕ್ರಾಸ್ ನಿಂದ ಜೆಪ್ಪು ಮಾರ್ಕೆಟ್ ರಸ್ತೆಯ ವರೆಗೂ ಸ್ವಚ್ಛತೆ ನಡೆಯಿತು. ಕಾರ್ಯಕರ್ತರು ಸ್ವಚ್ಛತೆಯೊಂದಿಗೆ ಮನೆ ಮನೆಗೆ ತೆರಳಿ ಜಾಗೃತಿಯ ಕಾರ್ಯ ಮಾಡಿದರು. ಅಲ್ಲಲ್ಲಿ ರಸ್ತೆಯ ಬದಿಯಲ್ಲಿ ತ್ಯಾಜ್ಯ ಹಾಕದಂತೆ ನಂತಿಸಲಾಯಿತು. ಇದಕ್ಕೂ ಮುನ್ನ ಕಾರ್ಯಕ್ರಮಕ್ಕೆ ಡಾ. ಗುರುಕಿರಣ ಹಾಗೂ ಜ್ಯೋತಿಕಿರಣ ಹಸಿರು ನಿಶಾನೆ ತೋರಿಸಿದರು.
ಮಹಾತ್ಮಾ ಗಾಂಧಿ ರಸ್ತೆ:
ಎಲ್ ಐ ಸಿ ಸಿಬ್ಬಂದಿ ಹಾಗೂ ಏಜೆಂಟರ್ ಅಸೋಸಿಯೇಶನ್ ವತಿಯಿಂದ ಜೈಲ್ ರಸ್ತೆಯಲ್ಲಿ ಸ್ವಚ್ಛತೆಯ ಕೈಂಕರ್ಯ ನಡೆಯಿತು. ಪುರುಷೋತ್ತಮ ಭಂಡಾರಿ ಹಾಗೂ ನಂದಕುಮಾರ್ ಜಂಟಿಯಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊಡಿಯಾಲ್ಬೈಲ್ನಲ್ಲಿರುವ ಎಲ್ಐಸಿ ವಠಾರ ಹಾಗೂ ರಸ್ತೆಯ ಬದಿಗಳನ್ನು ಗುಡಿಸಿ ಶುಚಿ ಮಾಡಲಾಯಿತು.
ಬಜಾಲ್:
ಆರ್ಟ್ ಆಫ್ ಲಿವಿಂಗ್ ಸದಸ್ಯರು ಕಾವುಬೈಲ್ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿದರು. ಶ್ರೀಭಾಸ್ಕರ್ ಚಂದ್ರ ಶೆಟ್ಟಿ ಹಾಗೂ ಪಾರ್ವತಮ್ಮ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು.
ಉರ್ವ ಮಾರ್ಕೆಟ್:
ಎಂಸಿಎಫ್ ಸಿಬ್ಬಂದಿಯಿಂದ ಉರ್ವ್ ಮಾರಿಗುಡಿ ದೇವಸ್ಥಾನದ ಮುಂಭಾಗದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಡಾ. ಬಿ.ಜಿ.ಸುವರ್ಣ ಹಾಗೂ ಮನಪಾ ಸದಸ್ಯ ರಾಧಾಕೃಷ್ಣ ಹಸಿರು ನಿಶಾನೆ ತೋರಿದರು. ಪಂಚಮುಖಿ ಬಳಗದ ಸದಸ್ಯರಿಂದ ಮಾರಿಗುಡಿಯಿಂದ ಉರ್ವಮಾರ್ಕೆಟ್ವರೆಗಿನ ರಸ್ತೆಗಳನ್ನು ಶುಚಿಗೊಳಿಸಲಾಯಿತು. ಕಾರ್ಯಕರ್ತರು ಹುಲ್ಲು ಕತ್ತರಿಸುವ ಯಂತ್ರ ಬಳಸಿ ಆಟದ ಮೈದಾನದಲ್ಲಿ ಬೆಳೆದಿದ್ದ ಹುಲ್ಲು ಕತ್ತರಿಸಿ ಸ್ವಚ್ಛಗೊಳಿಸಿದರು.







