ಸಿಬಿಐ ಮಧ್ಯಂತರ ನಿರ್ದೇಶಕರಾಗಿ ಅಸ್ಥಾನಾ ನೇಮಕ ವಿರುದ್ಧ ಪಿಐಎಲ್

ಹೊಸದಿಲ್ಲಿ,ಡಿ.5: ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನಾ ರನ್ನು ಸಿಬಿಐನ ಮಧ್ಯಂತರ ನಿರ್ದೇಶಕರನ್ನಾಗಿ ನೇಮಿಸಿರುವ ಸರಕಾರದ ಕ್ರಮವನ್ನು ಪ್ರಶ್ನಿಸಿ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಸೋಮವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸಲ್ಲಿಸಿದ್ದಾರೆ.
ಸಿಬಿಐ ನಿರ್ದೇಶಕ ಅನಿಲ ಸಿನ್ಹಾ ಅವರ ಅಧಿಕಾರಾವಧಿ ಡಿ.2ಕ್ಕೆ ಅಂತ್ಯಗೊಂಡ ಬಳಿಕ ಕೇಂದ್ರ ಸರಕಾರವು ನೂತನ ನಿರ್ದೇಶಕರ ಆಯ್ಕೆಗಾಗಿ ಪ್ರಧಾನಿ, ಪ್ರತಿಪಕ್ಷ ನಾಯಕ ಮತ್ತು ಭಾರತದ ಶ್ರೇಷ್ಠ ನ್ಯಾಯಾಧೀಶರನ್ನೊಳಗೊಂಡ ಸಭೆಯನ್ನು ನಡೆಸಬೇಕಾಗಿತ್ತು. ಆದರೆ ಸರಕಾರವು ಈ ಪ್ರಕ್ರಿಯೆಯನ್ನು ನಡೆಸದೆ ಅಸ್ಥಾನಾರಿಗೆ ಸಿಬಿಐ ಹೊಣೆಯನ್ನು ವಹಿಸಿದೆ ಎಂದು ಭೂಷಣ್ ತನ್ನ ಅರ್ಜಿಯಲ್ಲಿ ವಾದಿಸಿದ್ದಾರೆ.
ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಸ್ಥಾನಾ ಅವರು ಹಲವಾರು ಪ್ರಮುಖ ಹುದ್ದೆಗಳಲ್ಲಿದ್ದರು. ಅಲ್ಲದೆ ಗೋಧ್ರಾ ರೈಲು ದಹನ ಪ್ರಕರಣದ ತನಿಖೆಗಾಗಿ ಗುಜರಾತ ಸರಕಾರವು ರಚಿಸಿದ್ದ ವಿಶೇಷ ತನಿಖಾ ತಂಡದ ಸದಸ್ಯರೂ ಆಗಿದ್ದರು.
Next Story





