ತೊಕ್ಕೊಟ್ಟಿನಲ್ಲಿ ಹೈಟೆಕ್ ಬಸ್ ನಿಲ್ದಾಣ: ಖಾದರ್
![ತೊಕ್ಕೊಟ್ಟಿನಲ್ಲಿ ಹೈಟೆಕ್ ಬಸ್ ನಿಲ್ದಾಣ: ಖಾದರ್ ತೊಕ್ಕೊಟ್ಟಿನಲ್ಲಿ ಹೈಟೆಕ್ ಬಸ್ ನಿಲ್ದಾಣ: ಖಾದರ್](https://www.varthabharati.in/sites/default/files/images/articles/2016/12/5/5Ullal3.jpg)
ಉಳ್ಳಾಲ, ಡಿ.5: ಜಿಲ್ಲಾಧಿಕಾರಿ, ಕಂದಾಯ ಅಧಿಕಾರಿಗಳು, ಯೋಜನಾ ನಿರ್ದೇಶಕರನ್ನು ಒಳಗೊಂಡಿರುವ ನಿಯೋಗ ಸೋಮವಾರ ತೊಕ್ಕೊಟ್ಟು ಬಸ್ಸು ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಖಾದರ್, ತೊಕ್ಕೊಟ್ಟು ಬಸ್ಸು ನಿಲ್ದಾಣವನ್ನು ಸಾರ್ವಜನಿಕ-ಖಾಸಗಿ ಪಾಲುದಾರಿಕೆಯ (ಪಿಪಿಪಿ) ಮಾದರಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲು ಹಾಗೂ ಇದರಿಂದ ನಿಲ್ದಾಣವನ್ನು ನಪಂನ ಸಂಪತ್ತಾಗಿ ರೂಪಿಸಲು ಯೋಜನೆ ಹಾಕಲಾಗಿದೆ ಎಂದು ಹೇಳಿದರು. ಸಾರ್ವಜನಿಕ-ಖಾಸಗಿ ಪಾಲುದಾರಿಕೆಯಲ್ಲಿ ತೊಕ್ಕೊಟ್ಟು ವಿನಲ್ಲಿ ಹೈಟೆಕ್ ಬಸ್ಸು ನಿಲ್ದಾಣ ರಚನೆಗೆ ಯೋಜನೆ ರೂಪಿಸಲಾಗಿದೆ. ತೊಕ್ಕೊಟ್ಟು ಬಸ್ಸು ನಿಲ್ದಾಣ ಸಮೀಪ ನಿರ್ಮಿಸಲು ಉದ್ದೇಶಿಸಲಾಗಿರುವ ಅಬ್ಬಕ್ಕ ಭವನದ ನಿರ್ಮಾಣಕ್ಕೆ 5 ಕೋ.ರೂ. ಈಗಾಗಲೇ ಮಂಜೂರಾಗಿದೆ.ಕಾಮಗಾರಿ ಶೀಘ್ರವೇ ಆರಂಭಗೊಳ್ಳಲಿದೆ. ಭವನದ ಒಳಾಂಗಣ ವಿನ್ಯಾಸಕ್ಕೆ ಹೆಚ್ಚುವರಿಯಾಗಿ 3 ಕೋ.ರೂ. ಅನುದಾನವನ್ನು ಕೇಳಲಾಗಿದೆ ಎಂದರು. ಈ ಸಂದರ್ಭ ಯೋಜನಾ ನಿರ್ದೇಶಕ ಪ್ರಸನ್ನ, ಅಸಿಸ್ಟೆಂಟ್ ಕಮಿಷನರ್ ರೇಣುಕಾ ಪ್ರಸಾದ್, ತಹಶೀಲ್ದಾರ್ ಮಹಾದೇವಯ್ಯ, ಪಿಡಬ್ಲ್ಯುಡಿ ಕಿರಿಯ ಅಭಿಯಂತರ ತೇಜಮೂರ್ತಿ, ಉಳ್ಳಾಲ ನಗರ ನಗರಸಭಾಧ್ಯಕ್ಷ ಕುಂಞಿಮೋನು ಮೊದಲಾದವರು ಉಪಸ್ಥಿತರಿದ್ದರು.