ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಜಯನ್ ಮಲ್ಪೆ ಆಗ್ರಹ

ಉಡುಪಿ, ಡಿ.6: ಭಾರತದಲ್ಲಿ ಯಾವುದಾದರೂ ಪ್ರತಿಮೆಗೆ ಜೀವಂತಿಕೆ ಇದೆ ಎಂದಾದರೆ ಅದು ಸ್ವಾತಂತ್ರ, ಸಮಾನತೆ, ಸಹೋದರತೆಯನ್ನು ಸಾರಿದ ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಮಾತ್ರ. ಹೀಗಾಗಿ ಉಡುಪಿ ನಗರದ ಹೃದಯ ಭಾಗದಲ್ಲಿ ಅಂಬೇಡ್ಕರ್ ಪ್ರತಿಮೆ ಸ್ಥಾಪಿಸುವಂತೆ ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಉಡುಪಿಯ ಸರ್ವಿಸ್ ಬಸ್ನಿಲ್ದಾಣದ ರಿಕ್ಷಾ ಚಾಲಕರ ಮಾಲಕರ ವತಿ ಯಿಂದ ಅಂಬೇಡ್ಕರರ 60ನೇ ಪರಿನಿಬ್ಬಾಣದ ಪ್ರಯುಕ್ತ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತಿದ್ದರು.
ಬೀದಿ ಗುಡಿಸುವವರ, ಚಪ್ಪಲಿ ಹೊಲಿಯುವವರ ಕೈಯಲ್ಲಿದ್ದ ದಲಿತ ಸಂಘಟನೆ ಈಗ ಅಂಬೇಡ್ಕರ್ ಹೆಸರು ಹೇಳಿಕೊಂಡು ಹೊಟ್ಟೆ ತುಂಬಿದವರ ಕೈಯಲ್ಲಿರುವುದರಿಂದ ದಿನಕ್ಕೊಂದು ದಲಿತ ಸಂಘಟನೆಯನ್ನು ಹುಟ್ಟುಹಾಕಿ ಚಳವಳಿಯ ದಿಕ್ಕುತಪ್ಪಿಸುತ್ತಿರುವುದು ದುರಂತ ಎಂದವರು ಹೇಳಿದರು.
ಅಂಬೇಡ್ಕರ್ ಮಾನವ ಕುಲಕ್ಕೆ ದಾರಿದೀಪ. ಸಂವಿಧಾನವೇ ಭಾರತದ ಧರ್ಮವಾಗಬೇಕು ಹಾಗೂ ಜಾತಿವಿನಾಶಕ್ಕೆ ಜಾತಿವಿರೋಧಿ ಶಕ್ತಿಗಳ ಒಗ್ಗೂಡುವಿಕೆ ಅನಿವಾರ್ಯ ಎಂದು ಜಯನ್ ಮಲ್ಪೆ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧಕ್ಷತೆಯನ್ನು ರಿಕ್ಷಾ ಚಾಲಕರ ನಿಲ್ದಾಣದ ನಾಯಕ ರಮೇಶ್ ಕಾಡಬೆಟ್ಟು ವಹಿಸಿದ್ದರು. ಮುಖಂಡರುಗಳಾದ ಉದಯ, ಪ್ರಭಾಕರ ಪೂಜಾರಿ, ನಾರಾಯಣ, ಕೇಶವ ಚಿಟ್ಪಾಡಿ, ಸುನೀಲ್, ರವಿ ಪೂಜಾರಿ, ಭೋಜ ಶೆಟ್ಟಿ, ಮೋಹನ್ ಶೆಟ್ಟಿಗಾರ್, ಭಾವು ಸಾಹೇಬ್, ಕರುಣಾಕರ ನಿಟ್ಟೂರು ಮುಂತಾದವರು ಭಾಗವಹಿಸಿದ್ದರು.
ಶ್ರೀನಾಥ್ ಸ್ವಾಗತಿಸಿ, ದೇವು ವಂದಿಸಿದರು. ವೆಹನ್ ಕಾರ್ಯಕ್ರಮ ನಿರೂಪಿಸಿದರು.







