ಆಟೊ ಬಾಡಿಗೆ ಚಲೋ ಕುಡ್ಲ ಪೇಟಿಎಮ್ ವ್ಯವಸ್ಥೆ
ಆಟೊಗಳಿಗೆ ಜಿಪಿಎಸ್ ಅಳವಡಿಕೆಗೆ ಚಾಲನೆ

ಮಂಗಳೂರು, ಡಿ.6: ಆಟೊ ಬಾಡಿಗೆಗಾಗಿ ಕುಡ್ಲ ಸಹಕಾರಿ ಸಂಘದ ವತಿಯಿಂದ ‘ಚಲೋ ಕುಡ್ಲ್ಲ’ ಹೆಸರಿನ ಪೇಟಿಎಮ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಬಾಡಿಗೆಯನ್ನು ಪೇಟಿಎಮ್ ಮೂಲಕ ಪಾವತಿಸಿ ಪ್ರಯಾಣ ಮಾಡುವ ಈ ಜನಸ್ನೇಹಿ ಯೋಜನೆಗೆ ಮಂಗಳವಾರ ಚಾಲನೆ ನೀಡಲಾಯಿತು. ನಗರದ ನಾಸಿಕ್ ಭವನದಲ್ಲಿ ಈ ಯೋಜನೆಗೆ ಚಾಲನೆ ನೀಡಿದ ಬಳಿಕ ಕುಡ್ಲ ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಕಾಶ ವಿ.ಎನ್. ಮಾತನಾಡಿ, ಆಟೊಗಳಿಗೆ ಜಿಪಿಎಸ್ ಅಳವಡಿಸುವ ಮೂಲಕ ನಗದು ರಹಿತ ವಹಿವಾಟಿಗೆ ಚಾಲನೆ ನೀಡಲಾಗಿದೆ. ಸದ್ಯ ಪ್ರಾಯೋಗಿಕವಾಗಿ 10 ಆಟೊಗಳಿಗೆ ಜಿಪಿಎಸ್ ಮೂಲಕ ಪೇಟಿಎಮ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮುಂದೆ ಸುಮಾರು 200-300 ಆಟೊಗಳು ಈ ವ್ಯವಸ್ಥೆಗೆ ಒಳಪಡಲಿವೆ. ಮುಂದಿನ ದಿನಗಳಲ್ಲಿ ಕುದ್ರೋಳಿ ‘ಇ-ಸರ್ಚ್’ ಸಹಯೋಗದಲ್ಲಿ ‘ಚಲೋ ಕುಡ್ಲ’ ಹೆಸರಿನ ಪೇಟಿಎಮ್ ವ್ಯವಸ್ಥೆಯನ್ನು ಹೊರತರಲಿದ್ದು, ಆ ಮೂಲಕ ಪ್ರಯಾಣಿಕರು ಬಾಡಿಗೆಯನ್ನು ಸಂದಾಯ ಮಾಡಬಹುದಾಗಿದೆ ಎಂದು ತಿಳಿಸಿದರು.
*ಬಾರ್ಕೋಡ್ ಅಳವಡಿಕೆ: ಪೇಟಿಎಮ್ ವ್ಯವಸ್ಥೆ ಹೊಂದಿರುವ ಆಟೊಗಳ ಮುಂಭಾಗದಲ್ಲಿ ಸ್ಟಿಕ್ಕರ್ಗಳನ್ನು ಅಳವಡಿಸಲಾಗಿದ್ದು, ಹಿಂಭಾಗದಲ್ಲಿ ಜಿಪಿಎಸ್ ಅಳವಡಿಕೆಯ ಜೊತೆ ಜಾಹೀರಾತು ಫಲಕ ಇರಲಿದೆ. ಇದರ ಒಂದು ಭಾಗದಲ್ಲಿ ಬಾರ್ಕೋಡ್ನ್ನು ಅಳವಡಿಸಲಾಗುವುದು. ಹಿಂಭಾಗದಲ್ಲಿರುವ ಬಾರ್ಕೋಡ್ನ್ನು ಸ್ಕಾನ್ ಮಾಡುವ ಮುಖಾಂತರ ಅದೇ ಆಟೊ ಚಾಲಕರ ಅಕೌಂಟ್ಗೆ ಹಣ ಜಮೆ ಮಾಡುವ ವ್ಯವಸ್ಥೆ ಇದಾಗಿದ್ದು, ಈ ಕುರಿತು ಚಾಲಕರ ಮೊಬೈಲ್ ಫೋನ್ಗೆ ಎಸ್ಸೆಮ್ಮೆಸ್ ಕಳುಹಿಸಲಾಗುವುದು ಎಂದು ಪ್ರಕಾಶ್ ತಿಳಿಸಿದರು.
ಇದಕ್ಕೊಂದು ಕಾಲ್ ಸೆಂಟರನ್ನು ಸ್ಥಾಪಿಸಿ, ಆಟೊ ಪ್ರಯಾಣಿಕರಿಗೆ ತಕ್ಷಣ ಅವರಿದ್ದ ಸ್ಥಳದಲ್ಲೇ ಆಟೊ ಲಭ್ಯತೆಯ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದರು.
ಕೆನರಾ ಚೇಂಬರ್ ಆಫ್ ಕಾಮರ್ಸ್ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆಯ ಜೊತೆ ಸೇರಿ ಚಾಲಕರನ್ನು ಗೈಡ್ಗಳಾಗಿ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಆಟೊ ಚಾಲಕರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿ ಎಂದರು.
ಈ ಸಂದರ್ಭ ಕುಡ್ಲ ಸೌಹಾರ್ದ ಸಹಕಾರಿ ಕಾರ್ಯದರ್ಶಿ ಕೆ.ರಮೇಶ್ರಾವ್, ಜನಸೇವಾ ಟ್ರಸ್ಟ್ ಅಧ್ಯಕ್ಷ ಎಂ.ದೇವದಾಸ್, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಜಯರಾಮ್, ವೇದವ್ಯಾಸ ಕಾಮತ್, ಶೋಭಾ ಕೇಶವ್, ಶಶಿಕಲಾ, ದಿನೇಶ್ ಶೆಟ್ಟಿ, ಆರ್.ಡಿ. ಹಸನ್, ರಮೇಶ್, ಎಂ.ಜಿ. ಹೆಗಡೆ, ನ್ಯಾಯವಾದಿ ಆಶಾಲತಾ, ಅಶೋಕ್ ಕೊಂಚಾಡಿ, ಅಲ್ಫೋನ್ಸೊ ಡಿಸೋಜ, ನಮೃತಾ ಶೆಣೈ, ಶಬ್ಬೀರ್, ಮಾಧವ್ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.







