ಮುಡಿಪುವಿನಲ್ಲಿ ಹುಬ್ಬುರ್ರಸೂಲ್ ಕಾನ್ಫೆರೆನ್ಸ್
ಮಜ್ಲಿಸ್ ಮಞ್ಞಂಪಾರ ಸ್ಫಟಿಕ ಸಂಭ್ರಮ ಪ್ರಚಾರದ ಉದ್ಘಾಟನೆ
![ಮುಡಿಪುವಿನಲ್ಲಿ ಹುಬ್ಬುರ್ರಸೂಲ್ ಕಾನ್ಫೆರೆನ್ಸ್ ಮುಡಿಪುವಿನಲ್ಲಿ ಹುಬ್ಬುರ್ರಸೂಲ್ ಕಾನ್ಫೆರೆನ್ಸ್](https://www.varthabharati.in/sites/default/files/images/articles/2016/12/7/SSF-Mangalore.jpg)
ಮಂಗಳೂರು, ಡಿ.7: ಮಜ್ಲಿಸ್ ಎಜು ಪಾರ್ಕ್ ಮುಡಿಪು ಇದರ ವತಿಯಿಂದ ಡಿ.9ರಂದು ಹುಬ್ಬುರ್ರಸೂಲ್ ಕಾನ್ಫರೆನ್ಸ್ ಮೀಲಾದ್ ರ್ಯಾಲಿ, ಮಾಸಿಕ ಸಖಾಫಿಯ್ಯಾ ರಾತೀಬ್ ಹಾಗೂ ಮಜ್ಲಿಸ್ ಮಞ್ಞಂಪಾರ ಸ್ಫಟಿಕ ಸಂಭ್ರಮ ಪ್ರಚಾರದ ಉದ್ಘಾಟನಾ ಸಮಾರಂಭ ಜರಗಲಿದೆ ಎಂದು ಎಸ್.ವೈ.ಎಸ್. ರಾಜ್ಯ ಕಾರ್ಯದರ್ಶಿ ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 4 ಗಂಟೆಗೆ ಸಂಬಾರತೋಟ ನೂರಾನಿಯ ಮಸ್ಜಿದ್ನಿಂದ ಮಜ್ಲಿಸ್ ಎಜು ಪಾರ್ಕ್ವರೆಗೆ ಮೀಲಾದ್ ರ್ಯಾಲಿ ನಡೆಯಲಿದೆ. ಸಂಜೆ 5 ಗಂಟೆಗೆ ಹುಬ್ಬುರ್ರಸೂಲ್ ಕಾನ್ಫೆರೆನ್ಸ್ ಮತ್ತು ಮಜ್ಲಿಸ್ ಮಞ್ಞಂಪ್ಪಾರ ಸ್ಫಟಿಕ ಸಂಭ್ರಮ ಪ್ರಚಾರ ಉದ್ಘಾಟನೆ, ರಾತ್ರಿ 7 ಗಂಟೆಗೆ ಮಾಸಿಕ ಸಖಾಫಿಯಾ ರಾತೀಬ್ ಜರಗಲಿದೆ. ಸೈಯದ್ ಮುಹಮ್ಮದ್ ಅಶ್ರಫ್ ತಂಙಳ್ ನೇತೃತ್ವ ವಹಿಸಲಿದ್ದಾರೆ ಎಂದು ಝೈನಿ ತಿಳಿಸಿದರು.
ಮಜ್ಲಿಸ್ ಎಜು ಪಾರ್ಕ್ ಮುಡಿಪು ಇದರ 15ನೆ ವಾರ್ಷಿಕೋತ್ಸವದ ಪ್ರಯುಕ್ತ ಡಿ.9ರಿಂದ ಒಂದು ತಿಂಗಳ ಅವಧಿಯಲ್ಲಿ ಐದು ನಿರ್ಗತಿಕ ಕುಟುಂಬಗಳಿಗೆ ಭವನ ನಿರ್ಮಾಣಕ್ಕೆ ಸಹಾಯ, ಐದು ಬಡ ಹೆಣ್ಣು ಮಕ್ಕಳ ವಿವಾಹ, ಐದು ಸ್ಥಳಗಳಲ್ಲಿ ಬಾವಿ ತೋಡಿ ಕೊಡುವ ಮಹತ್ವದ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಅದಲ್ಲದೆ ವೈದ್ಯಕೀಯ ಶಿಬಿರ, ಆಸ್ಪತ್ರೆಗಳ ನವೀಕರಣ, ವೈದ್ಯಕೀಯ ಉಪಕರಣಗಳ ವಿತರಣೆ, ಸ್ವಯಂ ಉದ್ಯೋಗಕ್ಕೆ ಸಹಾಯ, ಕೋಳಿ ಹಾಗೂ ಆಡು ಸಾಕಣೆಗೆ ಧನ ಸಹಾಯ ನೀಡುವಂತಹ ಯೋಜನೆಗಳನ್ನು ರೂಪಿಸಲಾಗಿದೆ ಎಂದು ಝೈನಿ ತಿಳಿಸಿದರು.
ಕರ್ನಾಟಕ ಮತ್ತು ಕೇರಳ ಗಡಿಭಾಗದ ಕುಟುಂಬಗಳ ಸಬಲೀಕರಣಕ್ಕೆ ಸಂಬಂಧಿಸಿದ ಕುಟುಂಬ ಬೋಧನೆಗಳು, ವಿದ್ಯಾರ್ಥಿಗಳಿಗೆ ಕಲಾ ಸ್ಪರ್ಧೆಗಳು, ಕೌನ್ಸೆಲಿಂಗ್ ತರಗತಿ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಹೋಮ್ ಕೇರ್, ಸಾಂತ್ವನ, ಜೀವಕಾರುಣ್ಯ, ಕಾರ್ಯ ಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಮಹಿಳೆಯರಿಗಾಗಿ ಧಾರ್ಮಿಕ ವಿದ್ಯೆಯೊಂದಿಗೆ ಎಸೆಸೆಲ್ಸಿಯಿಂದ ಡಿಗ್ರಿ ತನಕ ಕಲಿಸುವ ಉದ್ದೇಶದೊಂದಿಗೆ ಆರಂಭಿಸಿದ ಸೈಯ್ಯಿದಾ ಇಂಟರ್ನ್ಯಾಶನಲ್ ಕಾಲೇಜನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಐಎಎಸ್, ಐಪಿಎಸ್ ಮುಂತಾದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಸತಿ ಸೌಕರ್ಯಗಳೊಂದಿಗೆ ಸಿವಿಲ್ ಸಿರ್ವಿಸ್ ಅಕಾಡಮಿ ಆರಂಭಿಸಲಾಗುವುದು. ಪ್ರವಾದಿಗಳಿಂದ ತೊಡಗಿಸಿ ಇಲ್ಲಿಯವರೆಗಿನ ಸೈಯದ್, ಉಲಮಾಗಳ ಪರಂಪರೆಯ ಚರಿತ್ರೆಗಳನ್ನು ಉಲ್ಲೇಖಿಸಿದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಝೈನಿ ಹೇಳಿದರು.
ಜ.30ರಿಂದ ಫೆ.2ರವರೆಗೆ ನಡೆಯುವ ಕ್ರಿಸ್ಟಲ್ ಜ್ಯುಬಿಲಿ ಸಮ್ಮೇಳನದ ಪ್ರಯುಕ್ತ ಝಿಯಾರತ್, ಬೋಧನೆಗಳು, ವಿದ್ವಾಂಸ ದರ್ಸ್, ಸಾಂಸ್ಕೃತಿಕ ಸಮ್ಮೇಳನ, ಹುಬ್ಬುರ್ರಸೂಲ್ ಸಮ್ಮೇಳನ, ವಿದ್ಯಾರ್ಥಿ ಸಮ್ಮೇಳನ, ಸಾದಾತ್ ಮೀಟ್, ಪ್ರವಾಸಿ ಸಂಗಮ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಞ್ಞಂಪಾರ ಮಜ್ಲಿಸ್ನ ಅಧ್ಯಕ್ಷ ಸೈಯದ್ ಮುಹಮ್ಮದ್ ಅಶ್ರಫ್ ಮದನಿ ಅಸ್ಸಖಾಫ್ ತಂಙಳ್ ಮಞ್ಞಂಪಾರ, ಮಜ್ಲಿಸ್ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷ ಎಂ.ಪಿ. ಅಶ್ರಫ್ ಸಅದಿ ಮಲ್ಲೂರು, ಮಜ್ಲಿಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಅಬ್ದುರ್ರಝಾಕ್ ಖಾಸಿಮಿ ಕೂರ್ನಡ್ಕ ಉಪಸ್ಥಿತರಿದ್ದರು.