ರಾಜ್ಯ ಸರಕಾರದಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ: ಜಗದೀಶ್ ಶೆಟ್ಟರ್ ಆರೋಪ
![ರಾಜ್ಯ ಸರಕಾರದಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ: ಜಗದೀಶ್ ಶೆಟ್ಟರ್ ಆರೋಪ ರಾಜ್ಯ ಸರಕಾರದಿಂದ ಭ್ರಷ್ಟ ಅಧಿಕಾರಿಗಳ ರಕ್ಷಣೆ: ಜಗದೀಶ್ ಶೆಟ್ಟರ್ ಆರೋಪ](https://www.varthabharati.in/sites/default/files/images/articles/2016/12/8/jagadish-shettar.jpg)
ಮಂಗಳೂರು, ಡಿ.8: ರಾಜ್ಯ ಸರಕಾರ ಭ್ರಷ್ಟ ಅಧಿಕಾರಿಗಳ ರಕ್ಷಣೆಗೆ ನಿಂತಿದೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಚಿಕ್ಕರಾಯಪ್ಪನನ್ನು ರಕ್ಷಿಸಲು ಕಣ್ಣೊರೆಸುವ ತಂತ್ರವಾಗಿ ಎಸಿಬಿ ತನಿಖೆ ಮಾಡಿಸಲಾಗುತ್ತಿದ್ದು, ಸಿಬಿಐ ಮೂಲಕ ಸಮಗ್ರ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಚಿಕ್ಕರಾಯಪ್ಪ ಅವರನ್ನು ನೀರಾವರಿ ನಿಗಮದ ಎಂ.ಡಿ.ಯನ್ನಾಗಿ ಮಾಡಲಾಗಿದೆ. ಅಷ್ಟೇ ಅಲ್ಲ, 109 ಅಧಿಕಾರಿಗಳ ಮೇಲೆ ಕ್ರಮ ಜರಗಿಸಲು ಲೋಕಾಯುಕ್ತ ಅನುಮತಿ ಕೇಳಿದ್ದರೂ ಒಂದು ವರ್ಷದಿಂದ ಅನುಮತಿ ಸಿಕ್ಕಿಲ್ಲ. ಇನ್ನೊಂದೆಡೆ ಗಣಪತಿ, ಅನುಪಮಾ ಶೆಣೈರಂತಹ ದಕ್ಷ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸಲಾಗಿದೆ ಎಂದು ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದರು.
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ಇದು ಪಕ್ಷದ ಆಂತರಿಕ ವಿಚಾರ. ನಾಯಕರ ಮಟ್ಟದಲ್ಲೇ ವಿವಾದ ಬಗೆಹರಿಸುತ್ತೇವೆ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ಬೇಡ ಎಂದು ಮನವಿ ಮಾಡಿದರು.
ಭೀಮಾ ನಾಯ್ಕ್ ಕಾರು ಚಾಲಕ ಆತ್ಮಹತ್ಯೆ ವಿಚಾರದ ಬಗ್ಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಬಿಜೆಪಿ ಸಂಸದ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಈ ಪ್ರಕರಣ ಸೇರಿದಂತೆ ರೆಡ್ಡಿ ಕಪ್ಪು ಹಣದ ಪ್ರಕರಣವನ್ನೂ ಸಮಗ್ರ ತನಿಖೆಗೊಳಪಡಿಸಲಿ ಎಂದು ಹೇಳಿದರು.