ಭುವನೇಶ್ವರಿ ಹೆಗಡೆಗೆ ‘ಅವ್ವ’ ಪ್ರಶಸ್ತಿ
ಶಿರಸಿ, ಡಿ.8: ಕನ್ನಡದ ಖ್ಯಾತ ಹಾಸ್ಯ ಲೇಖಕಿ, ಡಾ. ಶಿವರಾಮ ಕಾರಂತ ಅಧ್ಯಯನ ಪೀಠದ ಮುಖ್ಯಸ್ಥೆ ಭುವನೇಶ್ವರಿ ಹೆಗಡೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ನೀಡುವ ‘ಅವ್ವ’ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಪ್ರಸ್ತುತ ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಭುವನೇಶ್ವರಿ ಹೆಗಡೆ ಅವರು, ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆಗಳನ್ನು ಆಧರಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಭುವನೇಶ್ವರಿ ಹೆಗಡೆ ಅವರು ವಾಗ್ಮಿಗಳಾಗಿಯೂ ಹೆಸರು ಮಾಡಿದ್ದಾರೆ. ಕಳೆದ ಮೂರು ದಶಕಗಳಿಂದ ನಾಡಿನ ಹೆಸರಾಂತ ಪತ್ರಿಕೆಗಳಲ್ಲೂ ನಿರಂತರ ಅಂಕಣಗಳನ್ನು ಬರೆಯುತ್ತಿದ್ದಾರೆ. ಇವರಿಂದ 11ಕ್ಕೂ ಅಧಿಕ ಲಲಿತ ಪ್ರಬಂಧಗಳ ಸಂಕಲನ ಪ್ರಕಟವಾಗಿದೆ. ಈ ಮೊದಲು ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಪಡಕೋಣೆ ರಮಾನಂದ ಪ್ರಶಸ್ತಿ, ಉಗ್ರಾಣ ಪ್ರಶಸ್ತಿ, ಬಿ.ಎಚ್.ಶ್ರೀಧರ ಹಾಗೂ ಇನ್ಫೋಸಿಸ್ ಫೌಂಡೇಶನ್ ಸುಧಾಮೂರ್ತಿ ಪ್ರಶಸ್ತಿಗಳು ಸೇರಿದಂತೆ ಹಲವು ಪ್ರಶಸ್ತಿ, ಪುರಸ್ಕಾರಗಳೂ ಬಂದಿವೆ ಎಂಬುದು ಉಲ್ಲೇಖನೀಯವಾಗಿದೆ. ಭುವನೇಶ್ವರಿ ಹೆಗಡೆ ಅವರು ಮೂಲತಃ ಉತ್ತರ ಕನ್ನಡದ ಕತ್ರಗಾಲ ಮೂಲದವರು. ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಡಿ.11ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಆಗಲಿದೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಕೊರಟಗೆರೆ ನರಸಿಂಹ ಮೂರ್ತಿ ಫಣೀಂದ್ರ, ಸಾಹಿತಿಗಳಾದ ಡಾ. ಬರಗೂರು ರಾಮಚಂದ್ರಪ್ಪ, ವೀಣಾ ಬನ್ನಂಜೆ, ರಂಗನಾಥ ಭಾರದ್ವಾಜ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಅವ್ವ ಟ್ರಸ್ಟ್ನ ಪ್ರಕಟನೆಯಲ್ಲಿ ತಿಳಿಸಲಾಗಿದೆ.