ಆರ್ಯುವೇದ ದೇಶದ ಸಂಪತ್ತಾಗಿರುವುದು ನಮಗೆಲ್ಲರಿಗೂ ಹೆಮ್ಮೆ: ಜಗದೀಶ್ ಶೆಟ್ಟರ್
ತಲಪಾಡಿ: ಶಾರದಾ ಆಯಿರ್ಧಾಮ ಉದ್ಘಾಟನೆ; ಆಯುರ್ವೇದ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ

ಉಳ್ಳಾಲ,ಡಿ.8: ದೇಶದ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಆರ್ಯುವೇಧ ಯುನಾನಿಯಂತಹ ಚಿಕಿತ್ಸೆಗಳು ಮಹತ್ತರವಾದ ಸ್ಥಾನವನ್ನು ಪಡೆದಿದೆ. ಆದರೆ ವಿದೇಶದಲ್ಲಿ ಜನಪ್ರಯತೆಯನ್ನು ಪಡೆದ ಮೇಲೆ ಭಾರತೀಯರಿಗೆ ಇದರ ಮಹತ್ವದ ಅರಿವಾಗಿದೆ. ವಿಶ್ವ ಸ್ಥಾನವನ್ನು ಪಡೆದ ಆರ್ಯುವೇದ ದೇಶದ ಸಂಪತ್ತು ಎಂಬುದನ್ನು ಅರಿತು ನಾವು ಹೆಮ್ಮೆ ಪಡಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅಭಿಪ್ರಾಯಪಟ್ಟರು.
ಅವರು ತಲಪಾಡಿ ದೇವಿನಗರದಲ್ಲಿ ತುಳುನಾಡು ಎಜುಕೇಶನ್ ಟ್ರಸ್ಟ್ ಶಾರದಾ ಸಮೂಹ ವಿದ್ಯಾಸಂಸ್ಥೆ ಗಳ ಕೊಡಿಯಾಲ್ಬೈಲ್ ಇದರ ಆಶ್ರಯದಲ್ಲಿ ನೂತನವಾಗಿ ಪ್ರಾರಂಭಗೊಂಡ ಶಾರಾದಾ ಆಯುರ್ಧಾಮ ಮತ್ತು ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮವನ್ನು ಗುರುವಾರ ನೇರವೆರಿಸಿ ಮಾತನಾಡಿದರು. ಯೋಗ ಹಾಗೂ ವ್ಯಾಯಾಮದ ಜೊತೆಗೆ ದಿನನಿತ್ಯದ ಆಹಾರಪದ್ದತಿಯನ್ನು ಕ್ರಮಬದ್ಧವಾಗಿ ಮಾಡುವುದರಿಂದ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಬಹುದು, ಈ ನಿಟ್ಟಿನಲ್ಲಿ ದೇಶಕ್ಕೆ ಋಷಿ ಮುನಿಗಳು ನೀಡಿದಂತಹ ಆರ್ಯುವೇಧ ಹಾಗೂ ನೈಸರ್ಗಿಕ ಜೌಷಧಿಗಳ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆಯುವ ಮೂಲಕ ಆರೋಗ್ಯಯುತವಾದ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದರು. ಉಡುಪಿ ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮಾತನಾಡಿ ಮನುಷ್ಯನ ಆರೋಗ್ಯವನ್ನು ಕಾಪಾಡುವುದರಲ್ಲಿ ಆರ್ಯುವೇದ ಔಷಧೀಯ ಪದ್ಧತಿ ಬಹುಮುಖ್ಯ ಸ್ಥಾನವನ್ನು ವಹಿಸುತ್ತದೆ ಎಂದರು. ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮಿಜಿ, ಕುಕ್ಕೆ ಸುಬ್ರಹ್ಮಣ್ಯ ಸಂಪುಟ ನರಸಿಂಹಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಈ ಸಂದರ್ಭದಲ್ಲಿ ಮಾತನಾಡಿದರು. ಕರ್ನಾಟಕ ರಾಜ್ಯ ಆಹಾರ ಹಾಗೂ ಸರಬರಾಜು ಸಚಿವ ಯು.ಟಿ.ಖಾದರ್ ಮಾತನಾಡಿ ಅಲೋಪತಿ ಜೌಷಧಿಯನ್ನು ಸೇವಿಸುವುದರಿಂದ ದೇಹ ಆರೋಗ್ಯಯುತವಾದ ಬ್ಯಾಕ್ಟಿರಿಯಗಳನ್ನು ನಾಶ ಮಾಡುತ್ತದೆ. ಆದರೆ ಆರ್ಯುವೇಧ ಔಷಧಿಗಳು ದೇಹದ ಬ್ಯಾಕ್ಟೀರಿಯಗಳನ್ನು ಉಳಿಸುವ ಮೂಲಕ ದೇಹ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಹಿರಿಯರು, ಋಷಿ ಮುನಿಗಳು ದೇಶಕ್ಕೆ ಅಭೂತವಾದ ಕೊಡುಗೆಯಾಗಿ ನೀಡಿದ ಆರ್ಯವೇಧವನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದ್ದು ಇದನ್ನು ಉಳಿಸುವಲ್ಲಿ ಶಾರಾದ ಸಮೂಹ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಕಟ್ಟಡದ ಶಂಕುಸ್ಥಾಪನೆಯ ಮಾಹಿತಿ ಪತ್ರ ಬಿಡುಗಡೆಯನ್ನು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಡಗಡೆಗೊಳಿಸಿದರು.
ಕರ್ಣಾಟಕ ಬ್ಯಾಂಕ್ನ ಮಹಾಪ್ರಬಂಧಕ ಸುಭಾಷ್ಚಂದ್ರ ಪುರಾಣಿಕ್, ಮಾಜಿ ಸಚಿವ ವಿಶ್ವೇಶ್ವರ ಹಗಡೆ ಕಾಗೇರಿ, ವಿಧಾನ ಪರಿಷತ್ನ ವಿಪಕ್ಷ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಆಯುಷ್ ಅಕಾರಿ ಡಾ ಮೊಹಮ್ಮದ್ ಇಕ್ಬಾಲ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ , ತುಳುನಾಡು ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿ ಎಂ.ಎಸ್. ಶಾಸ್ತ್ರಿ, ಉಪಾಧ್ಯಕ್ಷ ಕೆ.ಎಸ್.ಕಲ್ಲೂರಾಯ, ಸುನಂದ ಪುರಾಣಿಕ್, ಉಪಸ್ಥಿತರಿದ್ದರು.
ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ.ಪುರಾಣಿಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಮುಖ್ಯೋಪಾಧ್ಯಾಯ ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಪ್ರದೀಪ್ ಕುಮಾರ್ ಕಲ್ಕೂರ ವಂದನಾರ್ಪಣೆಗೈದರು.







