ಗೋವಿಂದ್ ಪನ್ಸಾರೆಗೆ ಶೂಟ್ ಮಾಡಿದ್ದು ಸನಾತನ ಸಂಸ್ಥೆಯ ಗಾಯಕ್ವಾಡ್, ಅಕೋಲ್ಕರ್
ಸಿಟ್ ದೋಷಾರೋಪ ಪಟ್ಟಿ

ಮುಂಬೈ, ಡಿ.9: ಹಿರಿಯ ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಅವರನ್ನು ಗುಂಡಿಟ್ಟು ಕೊಲೆಗೈದ ಪ್ರಕರಣದಲ್ಲಿ ಸನಾತನ ಸಂಸ್ಥೆಯ ಸಮೀರ್ ಗಾಯಕ್ವಾಡ್ ಮತ್ತು ಸಾರಂಗ್ ಅಕೋಲ್ಕರ್ ಆರೋಪಿಗಳೆಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.
ಗೋವಿಂದ್ ಪನ್ಸಾರೆ ಮತ್ತು ಅವರ ಪತ್ನಿ ಉಮಾ ಅವರು ಫೆ.16, 2015ರಂದು ಬೆಳಗಿನ ವಾಯು ವಿಹಾರ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಅವರ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಗೋವಿಂದ್ ಪನ್ಸಾರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗೋವಿಂದ್ ಪನ್ಸಾರೆ.
ಡಾ. ಗೋವಿಂದ್ ಪನ್ಸಾರೆ ಪ್ರಕರಣದ ಪ್ರಮುಖ ಆರೋಪಿ ಡಾ.ಗೋವಿಂದ ತಾವ್ಡೆ ಸನಾತನ ಸಂಸ್ಥೆಯ ಮಾಜಿ ಸಾಧಕ ಸಾಂಡ್ವಿಲ್ಕರ್ರನ್ನು ಭೇಟಿಯಾಗಿ ಕೊಲ್ಲಾಪುರದಲ್ಲಿರುವ ಲೋಹ ತಯಾರಿಕಾ ಘಟಕದಲ್ಲಿ ಬಂದೂಕು ತಯಾರಿಸಿಕೊಡುವೆಂತೆ ಮತ್ತು ಹತ್ಯೆಗೆ ನಿಯೋಜಿಸಲ್ಪಟ್ಟ ಆರೋಪಿಗಳಿಗೆ ಆಶ್ರಯ ನೀಡುವಂತೆ ಕೇಳಿಕೊಂಡಿದ್ದರು ಎಂದು ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಸಂಜಯ್ ಸಾಂದ್ವಿಲ್ಕರ್ ಮತ್ತು ಇತರ ಮೂವರು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದರು.
ಚಾರ್ಜ್ಶೀಟ್ ನಲ್ಲಿರುವಂತೆ ಸನಾತನ ಸಂಸ್ಥೆಯ ಸದಸ್ಯ ಸಮೀರ್ ಗಾಯಕ್ವಾಡ್ ಮತ್ತು ಸಾರಂಗ್ ಅಕೋಲ್ಕರ್ ಪ್ರಕರಣದಲ್ಲಿ ಶೂಟರ್ಗಳಾಗಿದ್ದಾರೆ. ಗಾಯಕ್ವಾಡ್ ವಿರುದ್ಧ ಕಳೆದ ವರ್ಷ ಚಾರ್ಜ್ ಶಿಟ್ ಸಲ್ಲಿಸಲಾಗಿತ್ತು. ಆರೋಪಿ ವಿನಯ್ ಪವಾರ್ ಹತ್ಯೆ ನಡೆದ ಸ್ಥಳದಲ್ಲಿ ಇದ್ದನೆಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ.
ಪನ್ಸಾರೆ ಮತ್ತು ಅವರ ಪತ್ನಿ ಉಮಾ ಬೆಳಗ್ಗಿನ ವಾಯುವಿಹಾರ ಮುಗಿಸಿ ಮನೆಗೆ ವಾಪಸಾಗುತ್ತಿದ್ದಾಗ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.







