ಫಲ್ಗುಣಿ ನದಿ ತೀರದ ಅಕ್ರಮ ಮರಳು ಘಟಕಕ್ಕೆ ದಾಳಿ

ಬಂಟ್ವಾಳ, ಡಿ.9 : ತಾಲೂಕಿನ ಕರಿಯಂಗಳ ಗ್ರಾಮದ ಪಲ್ಲಿಪಾಡಿ ಎಂಬಲ್ಲಿನ ಅಕ್ರಮ ಮರಳು ಘಟಕಕ್ಕೆ ಪ್ರೊಬೇಷರಿ ಐ.ಎ.ಎಸ್. ಅಧಿಕಾರಿ ಗಾರ್ಗಿ ಜೈನ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಮತ್ತು ಪೊಲೀಸರ ಸಹಕಾರದಲ್ಲಿ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಫಲ್ಗುಣಿ ನದಿ ತೀರದಿಂದ ಮರಳು ತೆಗೆಯುವ ಕೂಲಿ ಕಾರ್ಮಿಕರಿಗೆ ತಂಗಲು ನಿರ್ಮಿಸಲಾಗಿದ್ದ 5 ಶೆಡ್ಡು ಮತ್ತು ಪರಿಕರಗಳನ್ನು ಕಂದಾಯ ಅಧಿಕಾರಿಗಳು ತೆರವು ಗೊಳಿಸಿದ್ದಾರೆ.
ಫಲ್ಗುಣಿ ನದಿ ತೀರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಕ್ರಮ ಮರಳು ದಂದೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಕೆಲವು ಸಮಯದ ಹಿಂದೆ ಇಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಮರಳು ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದ ವೇಳೆ ಮರಳು ಕಾರ್ಮಿಕರೊಬ್ಬ ಪೊಲೀಸರಿಂದ ನದಿಗೆ ಧುಮುಕಿ ಪರಾರಿಯಾಗಲು ಉತ್ನಿಸಿದಾಗ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಕಾರ್ಯಾಚರಣೆಯಲ್ಲಿ ಪಾಣೆಮಂಗಳೂರು ಕಂದಾಯ ನಿರೀಕ್ಷಕ ರಾಮ ಕೆ., ಗ್ರಾಮ ಲೆಕ್ಕಾಧಿಕಾರಿಗಳಾದ ಪ್ರದೀಪ್, ಪ್ರಶಾಂತ್ ಹಾಗೂ ಸಿಬ್ಬಂದಿ ರೂಪೇಶ್ ಹಾಗೂ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಭಾಗವಹಿಸಿದ್ದರು.





