ಬಿಜೆಪಿಯವರ ರಥ ಯಾತ್ರೆ ರಾಜ್ಯ ಬಿಜೆಪಿ ನಾಯಕರ ವಿರುದ್ಧವೇ...? : ಸಚಿವ ರೈ
ಜನರ ಮುಂದೆ ಸ್ಪಷ್ಟಪಡಿಸಲಿ ಎಂದ ಉಸ್ತುವಾರಿ ಸಚಿವ
![ಬಿಜೆಪಿಯವರ ರಥ ಯಾತ್ರೆ ರಾಜ್ಯ ಬಿಜೆಪಿ ನಾಯಕರ ವಿರುದ್ಧವೇ...? : ಸಚಿವ ರೈ ಬಿಜೆಪಿಯವರ ರಥ ಯಾತ್ರೆ ರಾಜ್ಯ ಬಿಜೆಪಿ ನಾಯಕರ ವಿರುದ್ಧವೇ...? : ಸಚಿವ ರೈ](https://www.varthabharati.in/sites/default/files/images/articles/2016/12/9/downloadrai.jpg)
ಮಂಗಳೂರು,ಡಿ.9:ನೇತ್ರಾವತಿ ನದಿ ತಿರುವು ಯೋಜನೆ ಆರಂಭಿಸಿದ ,ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ,ಅದನ್ನು ಮುಂದುವರಿಸಿದ ಡಿ.ವಿ.ಸದಾನಂದ ಗೌಡ ,ಜಗದೀಶ್ ಶೆಟ್ಟರ್ ಅವರ ವಿರುದ್ಧ ಬಿಜೆಪಿಯ ಮುಖಂಡರು ರಥ ಯಾತ್ರೆನಡೆಸುತ್ತಿದ್ದಾರೆಯೇ..? ಇಲ್ಲವೋ..? ಎನ್ನುವುದನ್ನು ಜನತೆಯ ಮುಂದೆ ಸ್ಪಷ್ಟ ಪಡಿಸಲಿ.ಬಿಜೆಪಿ ಎರಡು ನಾಲಿಗೆ ಹಾವು ಇದ್ದಂತೆ .ಬಿಜೆಪಿ ಇತರರ ಮೇಲೆ ಗೂಬೆ ಕೂರಿಸುವ ಕೆಲಸ ಮೊದಲು ಕೈ ಬಿಡಲಿ.ಈ ಹಿಂದೆ ರಥ ಯಾತ್ರೆ ಮಾಡಿದಂತೆ ಸಾಮಾಜಿಕ ಸೌರ್ಹಾದತೆ ಕದಡುವ ಕೆಲಸ ಬೇಡ ಎಂದು ಬಿ.ರಮಾನಾಥ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ನೇತ್ರಾವತಿ ನದಿ ತಿರುವು ಆರಂಭಿಸಿದವರ ವಿರುದ್ಧ ರಥ ಯಾತ್ರೆ ಮಾಡದೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರನ್ನು ಗುರಿಯಾಗಿಸಿ ಟೀಕೆ ಮಾಡುವುದು ಎಷ್ಟು ಸರಿ.ಎತ್ತಿನ ಹೊಳೆ ಯೋಜನೆಯನ್ನು ವಿರೊಧಿಸುವ ಪ್ರಾಮಾಣಿಕ ಪ್ರಯತ್ನ ಬಿಜೆಪಿ ಮುಖಂಡರಿಂದ ನಡೆಯುತ್ತಿದ್ದರೆ. ಅವರೇಕೆ ವಿಧಾನ ಸಭೆಯಲ್ಲಿ ನಿಲುವಳಿ ಸೂಚನೆಯನ್ನು ಮಂಡನೆ ಮಾಡಿ ಚರ್ಚಿಸುವುದಿಲ್ಲ. ಅವರು ಪ್ರಾಮಾಣಿಕರಾಗಿದ್ದರೆ ಮೊದಲು ಕಲಾಪದಲ್ಲಿ ನಿಲುವಳಿ ಸೂಚನೆ ಮಂಡನೆ ಮಾಡಲಿ. ನಾನು ಮುಖ್ಯಮಂತ್ರಿಯನ್ನು ಒಪ್ಪಿಸುತ್ತೇನೆ ಎಂದು ರಮಾನಾಥ ರೈ ತಿಳಿಸಿದರು.
ನೇತ್ರಾವತಿ ನದಿ ತಿರುವು ಯೋಜನೆಯನ್ನು 2011ರಲ್ಲಿ ರಾಜ್ಯದ ಮುಖ್ಯ ಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಬಜೆಟ್ನಲ್ಲಿ ಹಣ ಕಾದಿರಿಸಿ ಮಂಜೂರು ಮಾಡಿದ್ದಾರೆ. ಆಗ ನಾನು ಸಚಿವನಾಗಿರಲಿಲ್ಲ, ಸದನದಲ್ಲೂ ಇರಲಿಲ್ಲ . ಹಿರಿಯ ಸಚಿವರಾಗಿದ್ದ ವಿ.ಎಸ್.ಆಚಾರ್ಯರು ಪತ್ರಿಕೆಗಳಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ನಂತರ ಬಿಜೆಪಿಯ ಸದಾನಂದ ಗೌಡರು ಮುಖ್ಯಮಂತ್ರಿಯಾದಾಗಲೂ ಈ ಯೋಜನೆ ಮುಂದುವರಿಯಿತು. ಆ ಬಳಿಕ ಜಗದೀಶ್ ಶೆಟ್ಟರ್ ಮುಖ್ಯ ಮಂತ್ರಿಯಾದಾಗಲೂ ಈ ಯೋಜನೆಯನ್ನು ಮುಂದುವರಿಸಿಕೊಂಡು ಬರಲಾಯಿತು. ಈಗ ಈ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದ್ದರೆ, ಈ ಬಗ್ಗೆ ಕ್ರಮಕೈ ಗೊಳ್ಳುವ ಹೊಣೆಗಾರಿಕೆ ಕೇಂದ್ರದ ಮೇಲೂ ಇದೆ .ತಪ್ಪು ಮಾಡುವವರು ,ತಪ್ಪು ಮಾಹಿತಿ ನೀಡುವವರಿಗೆ ದೇವರು ಶಿಕ್ಷೆ ನೀಡಲಿ ಎಂದು ರಮಾನಾಥ ರೈ ತಿಳಿಸಿದರು.
ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಮೇಯರ್ ಹರಿನಾಥ್,ಮೂಡಾ ಅಧ್ಯಕ್ಷ ಸುರೇಶ್ ಬಲ್ಲಾಳ್,ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್,ಮಾಜಿ ಮೇಯರ್ ಶಶಿಧರ ಹೆಗ್ಡೆ ,ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.