ಪುತ್ತೂರು ವಾರದ ಸಂತೆ ವಿಚಾರದಲ್ಲಿ ಆಡಳಿತ, ವಿಪಕ್ಷಗಳ ನಡುವೆ ವಾಗ್ವಾದ
ಸೋಮವಾರದ ಬದಲು ಬಾನುವಾರ ವಾರದ ಸಂತೆಗೆ ಅವಕಾಶವಿತ್ತ ಅಧ್ಯಕ್ಷರು

ಪುತ್ತೂರು,ಡಿ.10 : ಪುತ್ತೂರು ‘ವಾರದ ಸಂತೆ’ ವಿಚಾರದಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ ನಗರಸಭೆಯ ಅಧ್ಯಕ್ಷರು ಪುತ್ತೂರಿನ ವಾರದ ಸಂತೆ ಭಾನುವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಮತ್ತು ಸೋಮವಾರ ಎಪಿಎಂಸಿಯಲ್ಲಿ ನಡೆಯುವುದು ಎಂದು ರೂಲಿಂಗ್ ನೀಡಿದ ವೇಳೆ ಬಹುಮತ ಹೊಂದಿರುವ ವಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ಮತಕ್ಕೆ ಹಾಕುವಂತೆ ಪಟ್ಟು ಹಿಡಿದ, ಲಿಖಿತ ಆಕ್ಷೇಪವನ್ನು ಪಡೆದುಕೊಂಡ ಅಧ್ಯಕ್ಷರು ಸಭೆ ಮುಕ್ತಾಯವಾಯಿತೆಂದು ಘೋಷಿಸಿ ಸದಸದಿಂದ ಹೊರನಡೆದ ಹಾಗೂ ಬಿಜೆಪಿ ಸದಸ್ಯರು ಅಧ್ಯಕ್ಷರ ರಾಜೀನಾಮೆಗೆ ಆಗ್ರಹಿಸಿ ಘೋಷಣೆ ಕೂಗಿದ ಗೊಂದಲಕಾರಿ ಘಟನೆಗಳು ಶುಕ್ರವಾರ ಸಂಜೆ ನಡೆದ ನಗರಸಭೆಯ ವಿಶೇಷ ಸಭೆಯಲ್ಲಿ ನಡೆಯಿತು.
ಪುತ್ತೂರು ನಗರಸಭೆಯಲ್ಲಿ ಖಾಲಿ ಇರುವ ಕಂದಾಯ ಇಲಾಖೆಯ ಹುದ್ದೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನಿವೃತ್ತ ಕಂದಾಯ ಅಧಿಕಾರಿಗಳನ್ನು ನಿಯೋಜಿಸುವ ಬಗ್ಗೆ ಮತ್ತು ಸಂತೆ ಸ್ಥಳಾಂತರದ ಕುರಿತು ಉಪವಿಭಾಗಾಧಿಕಾರಿಗಳು ನೀಡಿರುವ ಆದೇಶದ ಕುರಿತು ಕಾನೂನು ತಜ್ಞರು ನೀಡಿರುವ ಅಭಿಪ್ರಾಯಗಳ ಬಗ್ಗೆ ಚರ್ಚಿಸಿ, ಸೂಕ್ತ ಸ್ಥಳದಲ್ಲಿ ಸಂತೆ ನಡೆಸುವ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಲುವಾಗಿ ಶುಕ್ರವಾರ ಸಂಜೆ ನಗರಸಭೆಯ ಸಭಾಂಗಣದಲ್ಲಿ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.
ಆಡಳಿತ ಪಕ್ಷದ ಸದಸ್ಯ ಎಚ್.ಮಹಮ್ಮದ್ ಆಲಿ ಅವರು ಮಾತನಾಡಿ ಇದು ಉಪವಿಭಾಗಾಧಿಕಾರಿಗಳ ಆದೇಶದ ವಿರುದ್ಧ ಸಭೆಯಲ್ಲ. ಸಂತೆ ವಿಚಾರದಲ್ಲಿ ಮೂವರು ಕಾನೂನು ತಜ್ಷರ ಅಭಿಪ್ರಾಯ ಪಡೆಯಲಾಗಿದ್ದು, ಈ ಪೈಕಿ ಎನ್,ಕೆ.ಜಗನ್ನಿವಾಸ ರಾವ್ ಮತ್ತು ಕರುಣಾಕರ ರೈ ಅವರು ಉಪವಿಭಾಗಾಧಿಕಾರಿಗಳ ಆದೇಶದ ಪರವಾಗಿಯೇ ಅಭಿಪ್ರಾಯ ನೀಡಿದ್ದಾರೆ. ನಾಗರಾಜ್ ಅವರು ಸಮತೋಲನ ರೀತಿಯಲ್ಲಿ ಅಭಿಪ್ರಾಯ ನೀಡಿದ್ದಾರೆ. ಆದ್ದರಿಂದ ನಾವು ಕಾನೂನು ವ್ಯಾಪ್ತಿಯೊಳಗೆ ಸಂತೆ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸಂತೆ ಸಮಸ್ಯೆಯ ಬಗ್ಗೆ ಸದಸ್ಯರ ಗಮನಕ್ಕೆ ತಂದರು. ಆದರೆ ಇದನ್ನು ಆಕ್ಷೇಪಿಸಿದ ವಿಪಕ್ಷ ಬಿಜೆಪಿ ಸದಸ್ಯ ಜೀವಂಧರ್ ಜೈನ್ ಅವರು ಕಾನೂನು ಸಲಹೆಗಾರರ ಅಭಿಪ್ರಾಯದ ಬಗ್ಗೆ ಚರ್ಚೆ ಬೇಡ. ಸಂತೆ ವಿಚಾರದಲ್ಲಿ ಆಡಳಿತ ಪಕ್ಷದ ಜವಾಬ್ದಾರಿ ಏನು ಮತ್ತು ನಗರಸಭೆಯ ತೀರ್ಮಾನವೇನು ಎಂದು ತಿಳಿಸಿ ಎಂದರು. ಇದಕ್ಕೆ ಧ್ವನಿಗೂಡಿಸಿದ ರಾಜೇಶ್ ಬನ್ನೂರು ಅವರು ನಮ್ಮ ಮನೆಗೆ ಬೇಕಾಗಿ ನಾವು ಮಾತನಾಡುತ್ತಿಲ್ಲ ,ಸಾರ್ವಜನಿಕರ ಪರವಾಗಿ ಮಾತನಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷಗಳ ನಡುವೆ ಮಾತಿನ ಗದ್ದಲ ನಡೆಯಿತು.
ಈ ಸಂದರ್ಭದಲ್ಲಿ ಮಹಮ್ಮದ್ ಆಲಿ ಮಾತನಾಡಿ ನಗರಸಭೆಯ ಆಡಳಿತದ ವಿರುದ್ದ ಸಂತೆ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋದವರೇ ನೀವು. ಕಾನೂನಿಗೆ ವಿರುದ್ಧವಾಗಿ ನಾವು ಹೋಗಲು ಸಾಧ್ಯವಿಲ್ಲ ಎಂದರು. ಸಾರ್ವಜನಿಕರ ಹಿತಾಸಕ್ತಿ ನಮಗೆ ಮುಖ್ಯ . ಸಂತೆ ವಿಚಾರದಲ್ಲಿ ಇನ್ನೂ ನಾವು ಕಾನೂನು ಹೋರಾಟಕ್ಕೆ ಸಿದ್ದ ಎಂದು ರಾಜೇಶ್ ಬನ್ನೂರು ಸಾರಿದರು. ಈ ಸಂದರ್ಭದಲ್ಲಿ ಪರ ವಿರುದ್ಧ ಆರೋಪ ಪ್ರತ್ಯಾರೋಪಗಳು ವ್ಯಕ್ತವಾಗಿ ಸಭೆಯಲ್ಲಿ ಮತ್ತೊಮ್ಮೆ ಗೊಂದಲ ಸೃಷ್ಠಿಯಾಯಿತು.
ಸಂತೆ ವಿಚಾರದಲ್ಲಿ ತೀರ್ಮಾನಕೈಗೊಳ್ಳಲು ಉಪವಿಭಾಗಾಧಿಕಾರಿಗಳಿಗೆ ಅಧಿಕಾರವಿಲ್ಲ. ಅವರಲ್ಲಿ ನಾವೂ ಈ ಬಗ್ಗೆ ಚರ್ಚಿಸಿದ್ದೇವೆ. ಮತ್ತೆ ಮತ್ತೆ ನಾವು ಅದನ್ನೇ ಒತ್ತಿ ಹೇಳುತ್ತಿದ್ದೇವೆ. ಪುತ್ತೂರಿನ ಸಂತೆ ಬರುವ ಸೋಮವಾರದಿಂದ ಇಲ್ಲಿನ ಕಿಲ್ಲೇ ಮೈದಾನದಲ್ಲೇ ನಡೆಯಬೇಕು ಎನ್ನವುದು ಬಹುಮತ ಹೊಂದಿರುವ ನಮ್ಮ 12 ಮಂದಿ ಸದಸ್ಯರ ಅಭಿಪ್ರಾಯವಾಗಿದ್ದು, ಈ ವಿಚಾರದಲ್ಲಿ ಚರ್ಚೆ ಬೇಡ. ಅಧ್ಯಕ್ಷರು ರೂಲಿಂಗ್ ನೀಡಬೇಕು ಎಂದು ರಾಜೇಶ್ ಬನ್ನೂರು ಆಗ್ರಹಿಸಿದರು.
ಸಂತೆ ವಿಚಾರದಲ್ಲಿ ನಗರಸಭೆಯ ಅಧ್ಯಕ್ಷರು ಅಂತಿಮವಾಗಿ ಸೋಮವಾರ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಸಂತೆ ನಡೆಸಲು ಸಾಧ್ಯವಿಲ್ಲ. ಆದಿತ್ಯವಾರ ಕಿಲ್ಲೇ ಮೈದಾನದಲ್ಲಿ , ಸೋಮವಾರ ಎಪಿಎಂಸಿಯಲ್ಲಿ ನಡೆಯುವುದು ಎಂದು ರೂಲಿಂಗ್ ನೀಡಿದರು.
ಅಧ್ಯಕ್ಷರ ರೂಲಿಂಗ್ಗೆ ಆಕ್ಷೇಪ ವ್ಯಕ್ತಪಡಿಸಿದ 12 ಮಂದಿ ಬಿಜೆಪಿ ಸದಸ್ಯರು ಈ ನಿರ್ಣಯವನ್ನು ಮತಕ್ಕೆ ಹಾಕುವಂತೆ ಆಗ್ರಹಿಸಿದರು. ವಿಪಕ್ಷ ಬಿಜೆಪಿಯ 12 ಮಂದಿ ಸದಸ್ಯರ ಲಿಖಿತ ಆಕ್ಷೇಪವನ್ನು ರಾಜೇಶ್ ಬನ್ನೂರು ಅವರು ಅಧ್ಯಕ್ಷರಿಗೆ ಸಲ್ಲಿಸಿದ ಬೆನ್ನಲ್ಲೇ ಅಧ್ಯಕ್ಷರು ಸಭೆ ಮುಕ್ತಾಯವಾಯಿತೆಂದು ಘೋಷಿಸಿದರು.
ಸಂತೆ ವಿಚಾರದಲ್ಲಿ ಅಧ್ಯಕ್ಷರು 12 ಮಂದಿ ಬಿಜೆಪಿ ಸದಸ್ಯರ ಆಕ್ಷೇಪವಿದ್ದರೂ ಬಹುಮತಕ್ಕೆ ಬೆಲೆ ನೀಡದೆ ತೀರ್ಮಾನಕೈಗೊಳ್ಳುವ ಮೂಲಕ ಸಾರ್ವಜನಿಕರಿಗೆ ದ್ರೋಹ ಬಗೆದಿದ್ದು, ನಮಗೆ ಅಧ್ಯಕ್ಷರಲ್ಲಿ ವಿಶ್ವಾಸವಿಲ್ಲ. ಅವರು ಕೂಡಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಘೋಷಣೆ ಕೂಗಿ ಸಂತೆ ತೀರ್ಮಾನದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಪೌರಾಯುಕ್ತೆ ರೂಪಾ ಶೆಟ್ಟಿ ಉಪಸ್ಥಿತರಿದ್ದರು.







