ಮಾನವ ಹಕ್ಕುಗಳ ಉಲ್ಲಂಘನೆ ತನಿಖೆಗೆ ಸ್ವತಂತ್ರವಾದ ಪ್ರಕರಣ ದಾಖಲಿಸುವ ವ್ಯವಸ್ಥೆಯಾಗಬೇಕು:ದಿನೇಶ್ ಹೆಗ್ಡೆ ಉಳೆಪಾಡಿ
ಪಿಯುಸಿಎಲ್ ಮಾನವ ಹಕ್ಕು ದಿನಾಚರಣೆ
![ಮಾನವ ಹಕ್ಕುಗಳ ಉಲ್ಲಂಘನೆ ತನಿಖೆಗೆ ಸ್ವತಂತ್ರವಾದ ಪ್ರಕರಣ ದಾಖಲಿಸುವ ವ್ಯವಸ್ಥೆಯಾಗಬೇಕು:ದಿನೇಶ್ ಹೆಗ್ಡೆ ಉಳೆಪಾಡಿ ಮಾನವ ಹಕ್ಕುಗಳ ಉಲ್ಲಂಘನೆ ತನಿಖೆಗೆ ಸ್ವತಂತ್ರವಾದ ಪ್ರಕರಣ ದಾಖಲಿಸುವ ವ್ಯವಸ್ಥೆಯಾಗಬೇಕು:ದಿನೇಶ್ ಹೆಗ್ಡೆ ಉಳೆಪಾಡಿ](https://www.varthabharati.in/sites/default/files/images/articles/2016/12/10/DSC_4767.jpg)
ಮಂಗಳೂರು,ಡಿ.10: ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನ್ಯಾಯ ದೊರೆಯಬೇಕಾದರೆ ಈಗ ಇರುವ ವ್ಯವಸ್ಥೆಗಿಂತ ಭಿನ್ನವಾದ ಪ್ರಕರಣ ದಾಖಲಿಸಿಸುವ ,ತನಿಖೆ ಹಾಗೂ ವಿಚಾರಣೆಯ ವ್ಯವಸ್ಥೆಯಾಗಬೇಕು ಎಂದು ನ್ಯಾಯವಾದಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರ ದಿನೇಶ್ ಹೆಗ್ಡೆ ಉಳೆಪ್ಪಾಡಿ ತಿಳಿಸಿದ್ದಾರೆ.
ದ.ಕ ಜಿಲ್ಲಾ ಪಿ ಯು ಸಿ ಎಲ್ ವತಿಯಿಂದ ನಗರದ ಸಹೋದಯ ಸಭಾಂಗಣದಲ್ಲಿ ಹಮ್ಮಿಕೊಂಡ ಮಾನವ ಹಕ್ಕು ದಿನದ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಸಕ್ತ ಇರುವ ವ್ಯವಸ್ಥೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾದರೆ ಪೊಲೀಸರ ಮೂಲಕ ದೂರು ದಾಖಲಾಗಿ ತನಿಖೆ ನಡೆದು ನ್ಯಾಯಾಲಯದಲ್ಲಿ ವಿಚಾರಣೆಯಾಗುತ್ತದೆ.ಆದರೆ ಪ್ರಕರಣದ ವಿಚಾರಣೆಯ ಮೊದಲು ಮತ್ತು ನಂತರ ಮಾನವ ಹಕ್ಕುಗಳ ಬಗ್ಗೆ ದೂರು ನೀಡಲು ಬರುವ ವ್ಯಕ್ತಿಯ ಘನತೆಗೆ ಧಕ್ಕೆ ಯಾಗುವ ರೀತಿಯ ವರ್ತನೆಗಳು ಪೊಲೀಸರಿಂದ ನಡೆಯುತ್ತದೆ.ಹಲವಾರು ಬಾರಿ ಪೊಲೀಸರು ಆರೋಪಿಯನ್ನು ಅಕ್ರಮವಾಗಿ ಬಂಧಿಸಿ ಸಾಕಷ್ಟು ದಿನಗಳ ನಂತರ ಹಾಜರು ಪಡಿಸುವ ವ್ಯವಸ್ಥೆ ಇದೆ ಇದರಿಂದ ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಿಲ್ಲ.ಮಾನವ ಹಕ್ಕುಗಳ ರಕ್ಷಣೆಯಾಗಬೇಕಾದರೆ ಮಕ್ಕಳ ಹಕ್ಕುಗಳ ರಕ್ಷಣೆಗೆ ಇರುವ ರೀತಿಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸುವ,ತನಿಖೆ ನಡೆಸುವ ವ್ಯವಸ್ಥೆ ಆಗಬೇಕಾಗಿದೆ.ನ್ಯಾಯಾಲಯದಲ್ಲೂ ಮಾನವ ಹಕ್ಕುಗಳ ರಕ್ಷಣೆಯಾಗಬೇಕಾದರೆ ಈ ಬಗ್ಗೆ ಹೆಚ್ಚಿನ ತಿಳುವಳಿಕೆ ಹೊಂದಿರುವ ನ್ಯಾಯಾಧೀಶರು ಮತ್ತು ಮಾನವ ಹಕ್ಕುಗಳ ಮಾಹಿತಿ ಹೊಂದಿರುವ ನ್ಯಾಯವಾದಿಗಳ ಅಗತ್ಯವಿದೆ ಎಂದು ದಿನೇಶ್ ಹೆಗ್ಡೆ ತಿಳಿಸಿದ್ದಾರೆ.
ಬಡ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ - ಮಾನವ ಹಕ್ಕು ಹೋರಾಟದ ಫಲ :
ದೇಶದಲ್ಲಿ ಹಸಿವಿನಿಂದ ಸಾಯುತ್ತಿರುವ ಬಗ್ಗೆ ಮಾನವ ಹಕ್ಕು ಹೋರಾಟಗಾರರು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ ಪರಿಣಾಮವಾಗಿ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೇಶದಲ್ಲಿ ಮಕ್ಕಳು ,ದೊಡ್ಡವರು ಯಾರೂ ಹಸಿವಿನಿಂದ ಸಾಯದಂತೆ ಸೂಕ್ತ ಕ್ರಮ ಕೈ ಗೊಳ್ಳಲು ಸೂಚನೆ ನೀಡಿದ ಫಲವಾಗಿ ಮಕ್ಕಳಿಗೆ ಬಿಸಿಯೂಟ ದೊರೆಯುತ್ತಿದೆ.ದೇಶದಲ್ಲಿ ಮಾನವಹಕ್ಕುಗಳ ಬಗ್ಗೆ ಜನಸಾಮಾನ್ಯರಿಗೆ ಜಾಗೃತಿ ನೀಡುವ ಕೆಲಸ ಆಗಬೇಕಾಗಿದೆ ಎಂದು ಪಿಯುಸಿಎಲ್ನ ರಾಷ್ಟ್ರೀಯ ಘಟಕದ ಉಪಾಧ್ಯಕ್ಷ ತಿಳಿಸಿದರು.