ಜಾಗತಿಕ ದಿನಮಾನದಲ್ಲಿ ಸ್ಪರ್ಧೆ ಅನಿವಾರ್ಯ: ಸಚಿವ ದೇಶಪಾಂಡೆ
ಶೆಟಗೇರಿ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಸುವರ್ಣ ಮಹೋತ್ಸವ

ಅಂಕೋಲಾ, ಡಿ.10: ದೇಶದ ಅಭಿವೃದ್ಧಿಗೆ ಆರೋಗ್ಯ ಮತ್ತು ಶಿಕ್ಷಣ ಅತೀ ಮುಖ್ಯವಾಗಿದ್ದು, ಇಂದಿನ ಜಾಗತಿಕ ದಿನಮಾನಗಳಲ್ಲಿ ಸ್ಪರ್ಧೆ ಎದುರಿಸಬೇಕಾಗಿದೆ. ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಅವರು ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳುವಂತೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಹೇಳ್ದಿರು.
ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತು ಅತೀ ವೇಗವಾಗಿ ಸಾಗುತ್ತಿದೆ. ಅದರೊಂದಿಗೆ ನಮ್ಮನ್ನು ಗುರುತಿಸಿಕೊಳ್ಳಬೇಕಾದರೆ ತಾಂತ್ರಿಕತೆಯತ್ತ ಹೆಜ್ಜೆ ಇಡಬೇಕಿದೆ. ಮಕ್ಕಳ ಶಿಕ್ಷಣಕ್ಕಾಗಿ 6 ಕಂಪ್ಯೂಟರ್ಗಳನ್ನು ಉಚಿತವಾಗಿ ಈ ಶಾಲೆಗೆ ನೀಡುವುದಾಗಿ ಅವರು ಭರವಸೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸತೀಶ ಸೈಲ್, 50 ವರ್ಷಗಳ ಹಿಂದೆಯೇ ಇಲ್ಲಿ ಪ್ರೌಢಶಾಲೆ ಆರಂಭಗೊಂಡಿದ್ದ ಫಲವಾಗಿ ಸುತ್ತಲಿನ ಸುಮಾರು 40 ಹಳ್ಳಿಗಳ ಮಕ್ಕಳು ಶಿಕ್ಷಣ ಪಡೆದು ದೇಶ-ವಿದೇಶಗಳಲ್ಲಿ ನೆಲೆಸುವ ಅವಕಾಶ ಒದಗಿದೆ. ಅಂದು ತಮ್ಮ ಆರ್ಥಿಕ ಹಿನ್ನಡೆಯ ನಡುವೆಯೂ ಶಿಕ್ಷಣ ಸಂಸ್ಥೆಯನ್ನು ಆರಂಭಿಸುವ ಮೂಲಕ ಈ ಭಾಗದ ಜನರನ್ನು ಸುಶಿಕ್ಷಿತರನ್ನಾಗಿ ಮಾಡಲು ಕಾರಣೀಕರ್ತರಾದವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೊಗೇರ, ತಾಲೂಕು ಪಂಚಾಯತ್ ಅಧ್ಯಕ್ಷೆ ಸುಜಾತಾ ಗಾಂವ್ಕರ
, ಶೆಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಶಶಿಧರ ನಾಯಕ ಮಾತನಾಡಿದರು. ಜಿಲ್ಲಾ ಪಂಚಾಯತ್ ಸದಸ್ಯೆ ಸರಳಾ ನಾಯಕ, ತಾಲೂಕು ಪಂಚಾಯತ್ ಸದಸ್ಯೆ ಶಾಂತಿ ಆಗೇರ, ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಕೃಷ್ಣ ನಾಯಕ, ಶಿಕ್ಷಣಾಧಿಕಾರಿ ಭಾಸ್ಕರ ಗಾಂವ್ಕರ, ತಹಶೀಲ್ದಾರ್ ವಿ.ಜಿ. ಲಾಂಜೇಕರ ಉಪಸ್ಥಿತರಿದ್ದರು.
ಸುವರ್ಣ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ವಿ.ಜೆ. ನಾಯಕ ಸ್ವಾಗತಿಸಿದರು. ಅಧ್ಯಕ್ಷ ರಮಾನಂದ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಶಾಂತಾರಾಮ ನಾಯಕ ಸ್ಮರಣ ಸಂಚಿಕೆ ಕುರಿತು ಅನಿಸಿಕೆ ವ್ಯಕ್ತಪಡಿಸಿದರು. ಶಿಕ್ಷಕ ರಾಜೇಶ ನಾಯಕ, ನಿರೂಪಿಸಿದರು. ಮುಖ್ಯಾಧ್ಯಾಪಕ ಎನ್.ವಿ. ರಾಠೋಡ ವಂದಿಸಿದರು. ಶಿವಮೊಗ್ಗ ಮೂಲದ ಗುತ್ತಿಗೆದಾರನನ್ನು ಬಂಧಿಸದಂತೆ ಸಿಬಿಐಗೆ ಹೈಕೋರ್ಟ್ ಸೂಚನೆ ಶಿವಮೊಗ್ಗ, ಡಿ. 10: ಬೆಂಗಳೂರಿನ ವಸತಿ ಸಂಕೀರ್ಣವೊಂದರಲ್ಲಿ ಡಿ.1 ರಂದು ಸುಮಾರು 4.8 ಕೋಟಿ ರೂ. ಹೊಸ ನೋಟು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲೆಯ ಸಿವಿಲ್ ಗುತ್ತಿಗೆದಾರ ಇಬ್ರಾಹೀಂ ಶರೀಫ್ರನ್ನು ಬಂಧಿಸದಂತೆ ಕೇಂದ್ರಿಯ ತನಿಖಾ ಸಂಸ್ಥೆ (ಸಿಬಿಐ)ಗೆ ಹೈಕೋರ್ಟ್ ಏಕ ಸದಸ್ಯ ಪೀಠ ಸೂಚಿಸಿದೆ. ಇದರಿಂದ ಗುತ್ತಿಗೆದಾರ ಇಬ್ರಾಹಿಂ ಶರೀಫ್ ಬಂಧನ ಭೀತಿಯಿಂದ ಮುಕ್ತರಾಗುವಂತಾಗಿದೆ. ಸಿಬಿಐ ಸಂಸ್ಥೆಯು ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ಪ್ರಶ್ನಿಸಿ ಇಬ್ರಾಹೀಂ ಶರೀಫ್, ಹೈಕೋರ್ಟ್ನ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆಯ ವೇಳೆ ನ್ಯಾಯಾಮೂರ್ತಿ ಆನಂದ್ ಬೈರಾರೆಡ್ಡಿ ಅವರಿದ್ದ ಏಕಸದಸ್ಯ ಪೀಠ ಈ ಮಧ್ಯಾಂತರ ಆದೇಶ ಹೊರಡಿಸಿ, ವಿಚಾರಣೆಯನ್ನು ಮುಂದೂಡಿದೆ. ಪ್ರಕರಣ ಸರಿಯಲ್ಲ: ಅರ್ಜಿದಾರ ಇಬ್ರಾಹೀಂ ಶರೀಫ್ ಅವರ ಪರ ವಕೀಲರು ವಾದ ಮಂಡಿಸಿ, ‘ಖಾಸಗಿ ವ್ಯಕ್ತಿ ಹಾಗೂ ಬ್ಯಾಂಕ್ಗಳ ವಿರುದ್ಧ ಪ್ರಕರಣ ದಾಖಲಿಸಲು ಸಿಬಿಐಗೆ ಅಧಿಕಾರವಿಲ್ಲ. ತಮ್ಮ ಕಕ್ಷಿಾರರ ಬಳಿ ಸಿಕ್ಕಿರುವ ಹಣಕ್ಕೆ ವಿವರಣೆ ನೀಡಲು ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 69ಎ ಪ್ರಕಾರ 2017ರ ಮಾ.31ರ ವರೆಗೆ ಕಾಲಾವಕಾಶವಿದೆ. ಅರ್ಜಿದಾರರ ಪುತ್ರಿಯ ವಿವಾಹವು 2017ರ ಜ. 12 ರಿಂದ 14ರ ವರೆಗೆ ನಿಗದಿಯಾಗಿದ್ದು, ಅದಕ್ಕಾಗಿ ಅವರು ಹಣ ಹೊಂದಿಸುತ್ತಿದ್ದರು’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು.
ಸಿಬಿಐ ಪರ ವಕೀಲರು ತಮ್ಮ ವಾದ ಮಂಡಿಸಿ, ‘ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಪ್ರತಿಯೊಬ್ಬರು ತಮ್ಮ ಖಾತೆಯಿಂದ ಇಂತಿಷ್ಟೇ ಮೊತ್ತದ ಹಣ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ, ಅರ್ಜಿದಾರರ ಮನೆಯಲ್ಲಿ 4.8 ಕೋಟಿ ರೂ. ವೌಲ್ಯದ ಹೊಸ ನೋಟುಗಳು ಸಿಕ್ಕಿವೆ. 500, 1000 ರೂ. ಮುಖ ಬೆಲೆಯ ಹಳೆಯ ನೋಟು ರದ್ದಾದ 20ರಿಂದ 25 ದಿನಗಳ ಅವಧಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಗದು ಹೊಂದಲು ಸಾಧ್ಯವಿಲ್ಲ ಎಂದು ವಾದಿಸಿದರು. ಅಲ್ಲದೆ, ಅಷ್ಟೊಂದು ದೊಡ್ಡ ಪ್ರಮಾಣದ ನಗದು ಅರ್ಜಿದಾರರ ಬಳಿ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. ಅರ್ಜಿದಾರರ ವಿರುದ್ಧ ಅಪರಾಧಿಕ ಪಿತೂರಿ ನಡೆಸಿರುವ ಆರೋಪವೂ ಇದೆ. ನ್ಯಾಯಾಲಯ ಮಧ್ಯಾಂತರ ಆದೇಶ ನೀಡಿದರೆ ತನಿಖೆಗೆ ತೊಂದರೆಯಾಗಲಿದೆ. ಪಿತೂರಿಯ ಜಾಲ ಭೇದಿಸಲು ತೊಂದರೆಯಾಗುತ್ತದೆ’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಬಂಧಿಸದಿರಲು ಸೂಚನೆ: ‘ಅರ್ಜಿದಾರರನ್ನು ಸಿಬಿಐ ಸಂಸ್ಥೆ ಬಂಧಿಸದಂತೆ ಆದೇಶ ನೀಡಬೇಕು’ ಎಂದು ಅರ್ಜಿದಾರರ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಸಿಬಿಐ ಪರ ವಕೀಲರು, ‘ಅರ್ಜಿದಾರರು ಸಿಬಿಐ ನಡೆಸುತ್ತಿರುವ ತನಿಖೆಗೆ ಎಲ್ಲ ಸಹಕಾರ ನೀಡುವುದಾಗಿ ನ್ಯಾಯಾಲಯಕ್ಕೆ ವಾಗ್ದಾನ ನೀಡಿದರೆ ಅವರನ್ನು ಬಂಧಿಸುವುದಿಲ್ಲ’ ಎಂದು ತಿಳಿಸಿದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಸಹಮತ ವ್ಯಕ್ತಪಡಿಸಿದರು. ಎರಡೂ ಹೇಳಿಕೆಗಳನ್ನು ದಾಖಲಿಸಿಕೊಂಡ ನ್ಯಾಯಪೀಠವು, ಇಬ್ರಾಹೀಂ ಶರೀಫ್ ಅವರನ್ನು ಬಂಧಿಸದಂತೆ ಮಧ್ಯಾಂತರ ಆದೇಶ ಹೊರಡಿಸಿದೆ.







