ಪುತ್ತೂರು ತಾಲೂಕಿಗೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣ- ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು, ಡಿ.11 : ಯುವ ಸಮುದಾಯದ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತಾಲೂಕಿನಲ್ಲಿ ರೂ. 30 ಕೋಟಿ ವೆಚ್ಚದಲ್ಲಿ ನೂತನ ಸುಸಜ್ಜಿತ ಕ್ರೀಡಾಂಗಣವನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಸ್ಥಳದ ಹುಡುಕಾಟ ನಡೆಸಲಾಗುತ್ತಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರು ತಾಲೂಕು ಯುವಜನ ಒಕ್ಕೂಟದ ಆಶ್ರಯದಲ್ಲಿ ಕುದ್ಮಾರು ಶಾಲೆಯಲ್ಲಿ ನಡೆಯುತ್ತಿರುವ ತಾಲೂಕು ಯುವಜನ ಮೇಳದಲ್ಲಿ ಶನಿವಾರ ರಾತ್ರಿ ನಡೆದ ಸಾಧನಾ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.
ಯುವಕ-ಯುವತಿ ಮಂಡಲಗಳು ನಮ್ಮ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿದೆ. ತಾನೂ ಯುವತಿ ಮಂಡಲದೊಂದಿಗೆ ತೊಡಗಿಸಿಕೊಂಡ ಕಾರಣ ನಾನಿಂದು ಶಾಸಕಿಯಾದೆ ಎಂದು ನೆನಪಿಸಿಕೊಂಡ ಅವರು ಯುವಕ ಯುವತಿ ಮಂಡಲಗಳು ತಮ್ಮ ಪಂಚಾಯತ್ಗಳಲ್ಲಿ ತಮ್ಮ ಸಂಘದ ಕಚೇರಿಗಾಗಿ ನಿವೇಶನ ಮಂಜೂರುಗೊಳಿಸಿ ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಕಟ್ಟಡ ನಿರ್ಮಿಸಿಕೊಳ್ಳುವಂತೆ ಸಲಹೆ ನೀಡಿದರು.
ಕುದ್ಮಾರಿನಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಸರ್ವೇ ನಂಬರ್ 170/1ರಲ್ಲಿ 4.74 ಎಕ್ರೆ ಸರಕಾರಿ ಜಾಗವಿದ್ದು ಅದನ್ನು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಿಕೊಡುವಂತೆ ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು ಇದರ ವತಿಯಿಂದ ಶಾಸಕಿ ಶಕುಂತಳಾ ಶೆಟ್ಟಿಯವರಿಗೆ ಮನವಿ ಸಲ್ಲಿಸಲಾಗಿತ್ತು. ಯುವಕ ಮಂಡಲದ ಮನವಿಗೆ ಸ್ಪಂದಿಸಿದ ಶಾಸಕರು, ಕ್ರೀಡಾಂಗಣ ನಿರ್ಮಿಸುವಲ್ಲಿ ಅದೇನೆ ಅಡಚಣೆಗಳಿದ್ದರೂ ಅದನ್ನು ನಿವಾರಿಸಿ ಕ್ರೀಡಾಂಗಣ ಅಭಿವೃಧ್ದಿ ಪಡಿಸಿಕೊಡುತ್ತೇನೆಂದು ಭರವಸೆ ನೀಡಿದರು.
ಯುವಜನ ಮೇಳ ಸ್ವಾಗತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅಧ್ಯಕ್ಷತೆ ವಹಿಸಿದ್ದರು.
ನರಿಮೊಗರು ಪ್ರಖ್ಯಾತಿ ಯುವತಿ ಮಂಡಲ ಹಾಗೂ ನರಿಮೊಗರು ಯುವಕ ಮಂಡಲಕ್ಕೆ ಅತ್ಯುತ್ತಮ ಯುವ ಸಂಸ್ಥೆ, ನನ್ಯ ತುಡರ್ ಯುವಕ ಮಂಡಲಕ್ಕೆ ಪರಿಸರ ಜಾಗೃತಿ ಪ್ರಶಸ್ತಿ, ಸುನೀಲ್ ಕಾವು, ಗುರುಪ್ರಿಯಾ ನಾಯಕ್ರವರಿಗೆ ತಾಲೂಕಿನ ಅತ್ಯುತ್ತಮ ಯುವ ಪ್ರಶಸ್ತಿ, ಪತ್ರಕರ್ತ ಪ್ರವೀಣ್ ಚೆನ್ನಾವರ ಮತ್ತು ದೀಪಕ್ ಕುಲಾಲ್ರಿಗೆ ವೈಯಕ್ತಿಕ ಪರಿಸರ ಜಾಗೃತಿ ಪ್ರಶಸ್ತಿ, ರವಿಚಂದ್ರ ರೈ ಕುಂಬ್ರ ಮತ್ತು ಪರಮೇಶ್ವರ ದೇವಾಡಿಗರಿಗೆ ಉದಯೋನ್ಮುಖ ಯುವ ಕಲಾವಿದ ಪ್ರಶಸ್ತಿ, ಸದಾನಂದ ಆಚಾರ್ಯ ಮತ್ತು ಗೋಪಾಲಕೃಷ್ಣರಿಗೆ ಸಾಂಸ್ಕೃತಿಕ ಸೌರಭ ಪ್ರಶಸ್ತಿ, ಕೆಯ್ಯೂರು ಶ್ರೀದುರ್ಗಾ ಯುವಕ ಮಂಡಲದ ಮಾರ್ಗದರ್ಶಕ ಚಂದ್ರಶೇಖರ್ ರೈ ಇಳಂತಾಜೆ. ಸವಣೂರು ಮಹಿಳಾ ಮಂಡಲದ ಅಧ್ಯಕ್ಷೆ ಕುಸುಮಾ ಪಿ. ಶೆಟ್ಟಿ, ಕುದ್ಮಾರಿನ ಕ್ರೀಡಾ ಸಾಧಕಿ ಯಶಸ್ವಿನಿ ಖಂಡಿಗ ಹಾಗೂ ಶಾಂತಿಮೊಗರು ದೋಣಿ ದುರಂತದಲ್ಲಿ ಮಕ್ಕಳ ರಕ್ಷಣೆಗೆ ಮುಂದಾದ ಬಾಲಕೃಷ್ಣ ಅನ್ಯಾಡಿ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನ್ಯಾಯವಾದಿ ಮೋಹನ ಗೌಡ ಇಡ್ಯಡ್ಕ, ಯುವಜನ ಒಕ್ಕೂಟದ ಗೌರವಾಧ್ಯಕ್ಷ ಶೈಲೇಶ್ ಅಂಬೆಕ್ಕಲ್, ತಾ.ಪಂ. ಉಪಾಧ್ಯಕ್ಷೆ ರಾಜೇಶ್ವರಿ ಕೆ., ತಾಲೂಕು ಯುವಜನ ಸಬಲೀಕರಣ ಹಾಗೂ ಕ್ರೀಡಾಧಿಕಾರಿ ಮಾಮಚ್ಚನ್ ಎಂ., ಶಾಂತಿಮೊಗರು ದೇವಸ್ಥಾನದ ಅನುವಂಶೀಯ ಮೊಕ್ತೇಸರ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು, ಶಾಲಾ ಮುಖ್ಯಶಿಕ್ಷಕಿ ಜೂಲಿಯಾನ ಡಿ’ಸೋಜ, ಅರುಣ್ ಕುಮಾರ್ ಪುತ್ತಿಲ, ಲಕ್ಷಣ ಕರಂದ್ಲಾಜೆ, ಸ್ಕಂದ ಶ್ರೀ ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ, ಮಹಿಳಾ ಮಂಡಲ ಅಧ್ಯಕ್ಷೆ ರೇವತಿ ಕುದ್ಮಾರು, ಸ್ನೇಹಿತರ ಬಳಗದ ಅಧ್ಯಕ್ಷ ಸೀತಾರಾಮ ಬರೆಪ್ಪಾಡಿ, ರೆಡ್ ಬಾಯ್ಸಾ ತಂಡದ ಅಧ್ಯಕ್ಷ ಸತೀಶ್ ಹೊಸವಕ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಸ್ವಾಗತಿಸಿ, ಪ್ರಸ್ತಾವನೆಗೈದರು.
ರಾಕೇಶ್ ರೈ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿ, ಸುಬ್ರಹ್ಮಣ್ಯ ಕರುಂಬಾರು ವಂದಿಸಿದರು.







