ಜೀವನದಿ ಬಿಟ್ಟುಕೊಡೆವು: ಭಟ್ಟಾರಕ ಸ್ವಾಮೀಜಿ
ಎತ್ತಿನಹೊಳೆ ಯೋಜನೆ ವಿರೋಧಿಸಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆ

ಮಂಗಳೂರು, ಡಿ.11:ಎತ್ತಿನಹೊಳೆ ಯೋಜನೆ ವಿರೋಧಿಸಿ ಪಂಚತೀರ್ಥ ಸಪ್ತಕ್ಷೇತ್ರ ರಥಯಾತ್ರೆಯಂಗವಾಗಿ ರವಿವಾರ ಕದ್ರಿ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು.
ರಥಯಾತ್ರೆಗೆ ಕಣ್ಣೂರಿನಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಬಳಿಕ ಮಿಲಾಗ್ರಿಸ್ ಚರ್ಚ್ನಲ್ಲಿ ಮುಂದೆ ಹಂಪನಕಟ್ಟೆ , ಜ್ಯೋತಿ, ಬಂಟ್ಸ್ ಹಾಸ್ಟೆಲ್ ವೃತ್ತವಾಗಿ ಕದ್ರಿ ಮೈದಾನ ತಲುಪಿತು.
ಈ ಸಂದರ್ಭದಲ್ಲಿ ಮಾತನಾಡಿದ ಮೂಡುಬಿದಿರೆ ಜೈನಮಠದ ಶ್ರೀ ಸ್ವಸ್ತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ನೇತ್ರಾವತಿ ನದಿ ತಿರುವು ಯೋಜನೆ ಕೆಲವೇ ಕಲವು ಮಂದಿಯ ಜೇಬು ತುಂಬಿಸುವ ಯೋಜನೆ. ಸರಕಾರ ಕೈಗೊಂಡಿರುವ ಎತಿತಿನಹೊಳೆ ಯೋಜನೆಯನ್ನು ಅನೇಕ ಪ್ರಗತಿಪರರು, ವಿದ್ಯಾವಂತರು ಸಹಿತ ಅನೇಕಮಂದಿ ಖಂಡಿಸಿದ್ದಾರೆ.ಯಾವುದೇ ಕಾರಣಕ್ಕೂ ಜೀವನದಿಯನ್ನು ಬಿಟ್ಟು ಕೊಡಲಾರೆವು ಎಂದರು.
ಚರ್ಚ್ ಧರ್ಮಗುರು ಫಾ.ಜೆ.ಬಿ. ಕ್ರಾಸ್ತಾ ಮಾತನಾಡಿ, ಯೋಜನೆ ಕೂಡಲೇ ಕೈಬಿಡಬೇಕು. ಪರಿಸರಪೂರಕವಾಗಿರುವ ಮಳೆಕೊಯ್ಲುನಂತಹ ಯೋಜನೆ ಅಳವಡಿಸಿಕೊಳ್ಳಲು ಮುಂದಾಗಬೇಕು. ಯೋಜನೆ ಜಾರಿಯಾದರೆ ತೀವ್ರ ಸಂಕಷ್ಟವಾಗಲಿದೆ ಎಂದರು.
ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಂ. ಎಸ್.ಮಸೂದ್ ಮಾತನಾಡಿ, ಯೋಜನೆ ವಿರುದ್ದ ಹೋರಾಟದಲ್ಲಿ ಜಾತಿಮತ, ರಾಜಕೀಯವಿಲ್ಲ. ಇಲ್ಲಿಯ ಜನರಿಗೆ ಕುಡಿವ ನೀರು ಬೇಕು ಎಂಬುದೇ ನಮ್ಮ ಆಗ್ರಹ. ನಾವು ಕುಡಿಯುವ ನೀರನ್ನು ಇನ್ನೊಬ್ಬರಿಗೆ ನೀಡಲು ಒಪ್ಪುವುದಿಲ್ಲ. ಇಂತಹ ಹೋರಾಟಕ್ಕೆ ಮುಸ್ಲಿಮರು ಬೆಂಬಲಿಸಲಿದ್ದಾರೆ ಎಂದರು.
ಸಂಸದ ನಳಿನ್ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನಪರಿಷತ್ ಸದಸ್ಯಕೋಟ ಶ್ರೀನಿವಾಸ ಪೂಜಾರಿ, ವಾರಣಾಸಿ ಗಂಗಾ ಸೇವಾ ಮಿಶನ್ನ ಶ್ರೀ ಆನಂದ ಸ್ವರೂಪ ಸ್ವಾಮೀಜಿ ಮಾತನಾಡಿದರು.
ವೇದಿಕೆಯಲ್ಲಿ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಹೋರಾಟ ಸಮಿತಿ ಅಧ್ಯಕ್ಷ ಸಂಜೀವ ಮಠಂದೂರು, ಸಂಚಾಲಕರಾದ ಗೋಪಾಲಕೃಷ್ಣ ಹೇರಳೆ, ಪುರುಷೋತ್ತಮ ಚಿತ್ರಾಪುರ, ಸಹಸಂಚಾಲಕರಾದ ವಕೀಲ ದಿನಕರ ಶೆಟ್ಟಿ, ಸತ್ಯಜಿತ್ ಸುರತ್ಕಲ್, ರಘುವೀರ್ ಸೂಟರ್ಪೇಟೆ, ಉಪಾಧ್ಯಕ್ಷರಾದ ಎನ್. ಯೋಗೀಶ್ ಭಟ್, ಪ್ರೊ. ಎಸ್.ಜಿ. ಮಯ್ಯ, ಸದಾನಂದ ನಾವರ, ಜಿತೇಂದ್ರ ಕೊಟ್ಟಾರಿ, ಡಾ.ಅಣ್ಣಯ್ಯ ಕುಲಾಲ್, ರಾಮಚಂದ್ರ ಬೈಕಂಪಾಡಿ, ಯೋಗೀಶ್ ಶೆಟ್ಟಿ ಜೆಪ್ಪು, ಉಪಮೇಯರ್ ಸುಮಿತ್ರ ಕರಿಯ, ಪಾಲಿಕೆ ಪ್ರತಿಪಕ್ಷ ನಾಯಕಿ ರೂಪಾ ಡಿ. ಬಂಗೇರ, ಕೆಥೋಲಿಕ್ ಸಭಾದ ಅಧ್ಯಕ್ಷ ಅನಿಲ್ ರೋಬೋ ಉಪಸ್ಥಿತರಿದ್ದರು.







