ಮೌಲ್ಯಗಳ ಕುಸಿತ ಎಲ್ಲಾ ಗೊಂದಲಗಳಿಗೂ ಕಾರಣ:ಸಂತೋಷ್ ಹೆಗ್ಡೆ

ಉಡುಪಿ, ಡಿ.11: ಇಂದು ಸಮಾಜದಲ್ಲಿ ಹಣ ಮತ್ತು ಅಧಿಕಾರಕ್ಕೆ ಹೆಚ್ಚಿನ ಮನ್ನಣೆ ಸಿಗುತ್ತಿದೆ. ಜೈಲಿಗೆ ಹೋಗಿ ಬಂದವನಿಗೂ ಹೂಹಾರ ಹಾಕಿ ಸ್ವಾಗತಿಸುವ ಕಾಲ ಬಂದಿದೆ. ಇದಕ್ಕೆಲ್ಲಾ ನಮ್ಮ ಹಿರಿಯರು ಹಾಕಿಕೊಟ್ಟ ವೌಲ್ಯದ ಕುಸಿತವೇ ಕಾರಣ. ವೌಲ್ಯಗಳ ಇಂಥ ಕುಸಿತದಿಂದ ಸಮಾಜಕ್ಕೆ ಬಹುದೊಡ್ಡ ಅಪಾಯವಿದೆ. ಇದು ಎಲ್ಲಾ ಗೊಂದಲಗಳಿಗೂ ಕಾರಣ ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಹಾಗೂ ಕರ್ನಾಟಕದ ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಋಷಿ ಸಂಸ್ಕೃತಿ ವಿದ್ಯಾಟ್ರಸ್ಟ್ ಹಾಗೂ ಸಿದ್ಧ ಸಮಾಜ ಯೋಗದ ಜಂಟಿ ಆಶ್ರಯದಲ್ಲಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದಿರುವ ವಿಶ್ವ ಹೃದಯ ಸಮ್ಮೇಳನ-2016ರ ಎರಡನೇ ದಿನದಂದು ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ನಮ್ಮ ದೇಶ ಒಂದೇ ಧರ್ಮ, ಒಂದೇ ಭಾಷೆ, ಒಂದೇ ಸಂಸ್ಕೃತಿಯ ನಾಡಲ್ಲ. ಬಹುಭಾಷೆ, ಬಹು ಸಂಸ್ಕೃತಿ ಹಾಗೂ ಅನೇಕ ಧರ್ಮಗಳಿರುವ ವೈವಿದ್ಯತೆಯ ದೇಶ. ಇದನ್ನೇ ಬಳಸಿಕೊಂಡು ದೇಶವನ್ನು ಒಡೆಯುವ ಪ್ರಯತ್ನವನ್ನು ಕೆಲವರು ನಡೆಸಬಹುದು ಎಂದವರು ಹೇಳಿದರು.
ನಮ್ಮ ಹಿರಿಯರು ನೀಡಿದ ಸಂವಿಧಾನದಲ್ಲಿ ಜನರ ಕಷ್ಟಗಳ, ಸಮಸ್ಯೆಗಳ ನಿವಾರಣೆಗಾಗಿಯೇ ಸೃಷ್ಟಿಯಾದ ಸಂಸ್ಥೆ ಸರಕಾರವಾಗಿದೆ. ಆದರೆ ಇಂದು ಜನ ಸರಕಾರದಿಂದಲೇ ಸಂಕಷ್ಟಗಳಿಗೆ ಸಿಲುಕುತಿದ್ದಾರೆ. ಜನರ ಕಷ್ಟಗಳಿಗೆ ಸ್ಪಂಧಿಸ ಬೇಕಾದ ಸರಕಾರದಿಂದಲೇ ಇಂದು ಜನ ಪ್ರತಿನಿತ್ಯ ನರಳುವಂತಾಗಿರುವುದು ದುರಂತ ಎಂದು ನ್ಯಾಯಮೂರ್ತಿ ಹೆಗ್ಡೆ ತಿಳಿಸಿದರು.
ಭಾರತ ದೇಶ, ಬ್ರಿಟಿಷರಿಂದ ಸ್ವತಂತ್ರವಾದಾಗ, ನಮಗೆ ಎಂಥಾ ಸರಕಾರ ಬೇಕೆಂಬ ಚರ್ಚೆ ಬಂದಾಗ ಮಹಾರಾಜರ ಆಡಳಿತ, ಸರ್ವಾಧಿಕಾರಿ, ವಿವಿಧ ಇಸಂಗಳನ್ನೆಲ್ಲಾ ತಿರಸ್ಕರಿಸಿ ನೇರವಾಗಿ ಜನರಿಂದ ಆಳುವ ಪ್ರಜಾಪ್ರಭುತ್ವವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಆದರೆ ಸ್ವಾತಂತ್ರ ಬಂದು ಏಳು ದಶಕಗಳು ಕಳೆದರೂ ನಮ್ಮ ಹಿರಿಯರು ಕಂಡ ಕನಸು ನನಸಾಗಿಲ್ಲ. ಇಂದು ಸರಕಾರ ಎಂಬುದು ಕೆಲವರಿಂದ, ಕೆಲವರಿಗಾಗಿ, ಕೆಲವರೇ ನಡೆಸುವ ಆಡಳಿತವಾಗಿದೆ ಎಂದವರು ವಿಷಾಧದಿಂದ ನುಡಿದರು.
ಇಂದು ಸಂಸತ್ನಲ್ಲಿ- ಸದನದಲ್ಲಿ ಯಾವುದೇ ಚರ್ಚೆ ನಡೆಯುತ್ತಿಲ್ಲ. 2012ರಲ್ಲಿ ಯುಪಿಎ ಸರಕಾರ ಜಿಎಸ್ಟಿ ಮಸೂದೆ ತರಲು ಹೊರಟಾಗ ಅದರ ಮಂಡನೆಗೆ ಅವಕಾಶ ನೀಡದೇ ಕಲಾಪ ಬಹಿಷ್ಕರಿಸಿದ ಎನ್ಡಿಎ, ಇಂದು ತಾನೇ ಆಡಳಿತದಲ್ಲಿ ಅದನ್ನು ಜಾರಿಗೆ ತರಲು ಪ್ರಯತ್ನಿಸಿದಾಗ ಯುಪಿಎ ಅದನ್ನು ವಿರೋಧಿಸುತ್ತದೆ. ಆಡಳಿತ ಪಕ್ಷಕ್ಕಾಗಲೀ, ವಿರೋಧ ಪಕ್ಷಕ್ಕಾಗಿ ಕಲಾಪ ಬೇಕಾಗಿಲ್ಲ. ನಮ್ಮಿಂದ ಚುನಾಯಿಸಲ್ಪಟ್ಟ ಜನಪ್ರತಿನಿಧಿ ನಂತರ ನಮ್ಮನ್ನು ಮರತೇಬಿಟ್ಟಿರುತ್ತಾನೆ ಎಂದರು.
ಇದಕ್ಕೆಲ್ಲಾ ನಮ್ಮ ಹಿರಿಯರು ಹಾಕಿಕೊಟ್ಟ ವೌಲ್ಯಗಳನ್ನು ನಾವು ಸಂಪೂರ್ಣ ವಾಗಿ ಮರೆತಿರುವುದೇ ಕಾರಣ. ನಮಗಿಂದು ಅಧಿಕಾರ ಬೇಕು. ಜವಾಬಹ್ದಾರಿ ಯಾರಿಗೂ ಬೇಡ. ಪ್ರಜಾಪ್ರಭುತ್ವದ ಮೂರು ಮುಖ್ಯ ಆಧಾರಸ್ತಂಭಗಳು ಶಿಥಿಲಗೊಳ್ಳುತ್ತಿವೆ. ಭ್ರಷ್ಟಾಚಾರ ಎಲ್ಲೆಲ್ಲೂ ತಾಂಡವವಾಡುತ್ತಿವೆ. ಕಾರ್ಯಾಂಗ, ಶಾಸಕಾಂಗದ ನಂತರ ನ್ಯಾಯಾಂಗವೂ ಇದಕ್ಕೆ ಹೊರತಾಗಿಲ್ಲ ಎಂದವರು ಅಭಿಪ್ರಾಯಪಟ್ಟರು.
ಈ ಸ್ಥಿತಿಯನ್ನು ಬದಲಾಯಿಸಲು ನನ್ನ ತಲೆಮಾರಿಗೆ ಸಾಧ್ಯವಿಲ್ಲ. ಯಾಕೆಂದರೆ ನನ್ನ ಸಮಕಾಲೀನರು ಇಂದಿನ ಸ್ಥಿತಿಗೆ ಕಾರಣರು ಎಂದ ಸಂತೋಷ್ ಹೆಗ್ಡೆ, ಇದನ್ನು ಬದಲಿಸುವ ಶಕ್ತಿ ಇರುವುದು ಯುವಜನಾಂಗಕ್ಕೆ. ಭ್ರಷ್ಟಾಚಾರಿಗಳು, ಅತ್ಯಾಚಾರಿಗಳನ್ನು ಬಹಿಷ್ಕರಿಸುವ ಹೊಸ ಸಮಾಜ ವೊಂದನ್ನು ಕಟ್ಟುವ ಸಂಕಲ್ಪವನ್ನು ಮಾಡಬೇಕು. ನಾವು ಮರೆತಿರುವ ವೌಲ್ಯಗಳನ್ನು ವಾಪಾಸು ಅಳವಡಿಸಿಕೊಂಡು ಸಮಾಜವನ್ನು ಬದಲಾಯಿಸುವ ಪ್ರಯತ್ನ ನಡೆಯಬೇಕು. ಇದಕ್ಕೆ ತೃಪ್ತಿ ಹಾಗೂ ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೆಗ್ಡೆ ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಉಪಸ್ಥಿತ ರಿದ್ದರು.
ಬೆಂಗಳೂರಿನ ಶ್ವಾಸಗುರು ವಚನಾನಂದ ಸ್ವಾಮೀಜಿ, ಲಲಿತ ಮಂದಿರದ ಶ್ರೀಕಂಠ ಗುರೂಜಿ ಮುಂತಾದವರು ಉಪಸ್ಥಿತರಿದ್ದರು.







