ರಾಜ್ಯ ಅಭಿವೃದ್ಧಿಯಾದರೆ ರಾಷ್ಟ್ರಾಭಿವೃದ್ಧಿ: ಸಚಿವ ದೇಶಪಾಂಡೆ
ಕರಾವಳಿ ಉತ್ಸವ ಉದ್ಘಾಟನೆ,

ಕಾರವಾರ, ಡಿ.11: ರಾಷ್ಟ್ರ ಅಭಿವೃದ್ಧಿಯಾಗಬೇಕಾದರೆ ರಾಜ್ಯಕ್ಕೆ ಕೇಂದ್ರ ಸರಕಾರದ ಸಹಕಾರ ಅತ್ಯಗತ್ಯವಾಗಿ ಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.
ಅವರು ಕಾರವಾರದ ಮಯೂರ ವರ್ಮ ವೇದಿಕೆಯಲ್ಲಿ ಆಯೋಜನೆ ಗೊಂಡಿರುವ ಮೂರು ದಿನದ ಕರಾವಳಿ ಉತ್ಸವವನ್ನು ಶನಿವಾರ ರಾತ್ರಿ ಉದ್ಘಾಟಿಸಿ ಮಾತನಾಡಿದರು.
ಗೋವಾದಿಂದ ಮಂಗಳೂರಿನವರೆಗೆ ಅನೇಕ ಕಡಲ ತೀರಗಳಿವೆ. ಆದರೆ, ಇಲ್ಲಿನ ಸಮುದ್ರ ಮಟ್ಟದಿಂದ 250 ಮೀಟರ್ ಒಳಗೆ ಯಾವುದೇ ಅಭಿವೃದ್ಧಿ ಮಾಡಲು ಅವಕಾಶವಿಲ್ಲ. ಆದ್ದರಿಂದ, ನಮ್ಮ ಕರಾವಳಿ ಭಾಗದಲ್ಲಿ ಅಭಿವೃದ್ಧಿ ಯೋಜನೆಗಳನ್ನು ತರಲು ಸಾಧ್ಯವಾಗುತ್ತಿಲ್ಲ ಎಂದರು.
ಇತರ ದೇಶಗಳಲ್ಲಿ ಕರಾವಳಿಯ ಕೇವಲ 50 ಮೀಟರ್ ಒಳಗೆ ಅನೇಕ ಅಭಿವೃದ್ಧಿ ಯೋಜನೆಗಳಾಗಿವೆ. ಅದೇ ರೀತಿಯಲ್ಲಿ ನಮ್ಮಲ್ಲೂ ಅವಕಾಶ ನೀಡಬೇಕು ಎಂದು ತಾವು ಪ್ರಧಾನಮಂತ್ರಿ ಅವರನ್ನು ಭೇಟಿ ಮಾಡಿ ಸಿಆರ್ಝೆಡ್ ನಿಯಮಾವಳಿಯಲ್ಲಿ ಸಡಿಲಿಕೆ ನೀಡಬೇಕು ಎನ್ನುವ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.
ಕಾಂಗ್ರೆಸ್ ಸರಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಜಿಲ್ಲೆಯಲ್ಲಿ ಅನೇಕ ರಸ್ತೆಗಳ ಅಭಿವೃದ್ಧಿಪಡಿಸಲಾಗಿದೆ. ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ಜಿಲ್ಲೆಗೆ ತರಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳೆುುತ್ತಿದೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ವೃದ್ಧಿಗೆ ಸಾಧ್ಯವಾದಷ್ಟು ಮೂಲಭೂತ ಸೌಕರ್ಯಗಳನ್ನು ಜಿಲ್ಲೆಗೆ ತರಲು ಯತ್ನಿಸಿರುವುದಾಗಿ ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಹುಟ್ಟಿದವರು ಭಾಗ್ಯವಂತರು. ಮಾನವ ಮಾನವನಾಗಿ ಬೆಳೆಯಲು ಅವನ ಹೃದಯಲ್ಲಿ ಕಲೆ, ಕ್ರೀಡೆಗೆ ಹೆಚ್ಚಿನ ಸ್ಥಾನವಿರಬೇಕು. ಅದಕ್ಕಾಗಿ ಅನೇಕ ಇಂತಹ ಉತ್ಸವ ಅನಿವಾರ್ಯವಾಗಿದೆ. ಈ ಕಾರಣದಿಂದ ತಾಲೂಕು ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಉತ್ಸವ ನಡೆಸಲಾಗುತ್ತಿದೆ ಎಂದರು.
ಹೆಚ್ಚು ಹೆಚ್ಚು ಉತ್ಸವಗಳು ನಡೆದರೆ ಮನುಷ್ಯನ ಹೃದಯದಲ್ಲಿ ಕಲೆಗೆ ಹೆಚ್ಚಿನ ಸ್ಥಾನ ನೀಡಲು ಸಾಧ್ಯ. ಇಂದು ಕಲಾವಿದರನ್ನು ಗೌರವಿಸುವಂತಹ ವಾತಾವರಣ ನಿರ್ಮಾಣವಾಗಬೇಕು.ಕರಾವಳಿ ಉತ್ಸವ ನಮ್ಮ ಹೆಮ್ಮೆಯ ಉತ್ಸವವಾಗಿದೆ. ಉತ್ಸವಗಳು ಕೇವಲ ಒಂದು ವರ್ಗಕ್ಕೆ ಸಿಮಿತವಲ್ಲ. ಇದು ಸಾಮಾನ್ಯನಿಗೂ ಲಭ್ಯವಾಗಬೇಕು ಎಂದರು.
ಕಲೆ, ಪ್ರವಾಸೋದ್ಯಮದ ಅಭಿವೃದ್ಧಿ ಮೂಲಕ ಉತ್ತರ ಕನ್ನಡ ಜಿಲ್ಲೆ ಕರ್ನಾಟಕದಲ್ಲಿ ಮಾತ್ರವಲ್ಲ. ದೇಶದಲ್ಲೇ ಪ್ರಗತಿಪರ ಜಿಲ್ಲೆಯನ್ನಾಗಿ ಮಾಡಲಾಗುವುದು. ಇದಕ್ಕೆ ಜನರ ಸಹಕಾರ ಅತಿ ಅವಶ್ಯ. ಇಲ್ಲಿನ ಕಲಾವಿದರು ಮುಂದಿನ ದಿನದಲ್ಲಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಬೇಕು ಎಂದು ಶುಭಹಾರೈಸಿದರು. ಉತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸತೀಶ ಸೈಲ್, ಕರಾವಳಿಯಲ್ಲಿ ಇಂದು ಹಬ್ಬದ ವಾತಾವಣ ನಿರ್ಮಾಣವಾಗಿದೆ. ಸ್ಥಳೀಯ ಕಲಾವಿದರಿಗೆ ತಮ್ಮ ಪ್ರತಿಭೆ ವ್ಯಕ್ತಪಡಿಸಲು ಇದು ಉತ್ತಮ ವೇದಿಕೆಯಾಗಿದೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ, ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಅನೇಕ ಬದಲಾವಣೆ ತಂದಿದ್ದಾರೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅನೇಕ ಅಭಿವೃದ್ಧಿಯಾಗಿದೆ ಎಂದರು.
ನಮ್ಮ ಗ್ರಾಮ ನಮ್ಮ ರಸ್ತೆಯ ಯೋಜನೆ ಅಡಿಯಲ್ಲಿ ಅನೇಕ ಗ್ರಾಮೀಣ, ನಗರ ಪ್ರದೇಶದಲ್ಲಿ ರಸ್ತೆಗಳು ಅಭಿವೃದ್ಧಿಗಳಾಗಿವೆ. ಬಹುನಿರೀಕ್ಷಿತ ಕ್ಯಾನ್ಸರ್ ಆಸ್ಪತ್ರೆ ಬೇಕು ಎನ್ನುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದ ಅವರು, ಜಿಲ್ಲೆಯಲ್ಲಿ ಪ್ರಗತಿಪರ ಕಾರ್ಯಗಳಾಗುತ್ತಿದ್ದು ಸಚಿವರು ಹೆಚ್ಚಿನ ಆಸಕ್ತಿ ವಹಿಸಿ ಅಭಿವೃದ್ಧಿ ಮಾಡುತ್ತಿದ್ದಾರೆ. ಅಂಕೋಲಾದಲ್ಲಿ ಐಟಿಐ ಕಾಲೇಜು ಆರಂಭಿಸಬೇಕು ಎಂದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಹಾಗೂ ಕುಮಟಾ ಶಾಸಕಿ ಶಾರದಾ ಶೆಟ್ಟಿ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಮೀನುಗಾರಿಕಾ ಅಭಿವೃದ್ಧಿ ನಿಗಮದ ರಾಜೇಂದ್ರ ನಾಯ್ಕ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ತಾಪಂ ಅಧ್ಯಕ್ಷೆ ಪ್ರಮೀಳಾ ನಾಯ್ಕ ಹಾಗೂ ಇನ್ನಿತರ ಗಣ್ಯರು ವೇದಿಕೆಯಲ್ಲಿದ್ದರು. ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜಿಪಂ ಸಿಇಒ ಎಲ್. ಚಂದ್ರಶೇಖರ್ ನಾಯಕ ವಂದಿಸಿದರು. ವಿದ್ಯೆ ನೀಡಿದ ಸಮಾಜವನ್ನು ಮರೆಯುವುದು ದುರಂತ







