ಆದಾಯ ತೆರಿಗೆ ಅಧಿಕಾರಿಗಳೆಂದು ನಂಬಿಸಿ ದರೋಡೆ
ಕಾಸರಗೋಡು, ಡಿ.11: ಆದಾಯ ತೆರಿಗೆ ಅಧಿಕಾರಿ ಗಳೆಂದು ನಂಬಿಸಿ ಕೃಷಿಕರೋರ್ವರ ಮನೆಗೆ ನುಗ್ಗಿದ ಐವರ ತಂಡವೊಂದು ಮನೆಯವರನ್ನು ಬೆದರಿಸಿ 69,000 ರೂ. ದರೋಡೆಗೈದ ಘಟನೆ ಬದಿಯಡ್ಕ ಠಾಣಾ ವ್ಯಾಪ್ತಿಯ ಪಳ್ಳತ್ತಡ್ಕದಲ್ಲಿ ಶನಿವಾರ ರಾತ್ರಿ ನಡೆದಿದೆ. ಏಲ್ಕಾನದ ನಾರಾಯಣ ರೈ ಎಂಬವರಮನೆಗೆ ನುಗ್ಗಿ ಈ ಕೃತ್ಯ ನಡೆಸಲಾಗಿದೆ. ಮನೆಗೆ ಬಂದ ಐವರಲ್ಲಿ ಮೂವರು ಮನೆಯ ಒಳಗೆ ನುಗ್ಗಿದ್ದು, ನಾವು ಆದಾಯ ತೆರಿಗೆ ಅಧಿಕಾರಿಗಳಾಗಿದ್ದು ಬ್ಯಾಂಕ್ನಿಂದ ಭಾರಿ ಪ್ರಮಾಣದ ಹಣ ತೆಗೆದಿ ರುವುದಾಗಿ ಮಾಹಿತಿ ಲಭಿಸಿದೆ. ತಪಾಸಣೆಗೆ ಸಹಕಾರ ನೀಡುವಂತೆ ಹೇಳಿದರು ಎನ್ನಲಾಗಿದೆ.
ಬ್ಯಾಂಕ್ನಲ್ಲಿ ಹಲವು ಬಾರಿ ಕ್ಯೂ ನಿಂತು 69 ಸಾವಿರ ರೂ. ಬ್ಯಾಂಕ್ನಿಂದ ಪಡೆದಿರುವುದಾಗಿ ನಾರಾಯಣ ರೈ ಹೇಳಿದಾಗ, ಕಪಾಟಿನ ಕೀಲಿ ಕೈ ನೀಡುವಂತೆ ದರೋಡೆಕೋರರು ತಿಳಿಸಿದರೆನ್ನಲಾಗಿದೆ. ಕೀಲಿ ಕೈ ನೀಡುತ್ತಿದ್ದಂತೆ ಬಂದೂಕು ತೋರಿಸಿ ಬೆದರಿಸಿದ ತಂಡವು ಕಪಾಟಿನಲ್ಲಿದ್ದ 69,000 ರೂ. ದರೋಡೆಗೈದು ಪರಾರಿಯಾಗಿದೆ ಎನ್ನಲಾಗಿದೆ.
ಆದರೆ ಅಲ್ಲೇ ಇದ್ದ 20 ಪವನ್ ಚಿನ್ನಾಭರಣ ತಂಡದ ಗಮನಕ್ಕೆ ಬಂದಿಲ್ಲ. ಆದರೆ ನಾರಾಯಣ ರೈಯವರ ಮೊಬೈಲ್ ಫೋನನ್ನ್ನು ತಂಡವು ಕೊಂಡೊಯ್ದಿದೆ.
ಘಟನೆ ಬಗ್ಗೆ ರವಿವಾರ ಸ್ಥಳೀಯ ಜನಪ್ರತಿ ನಿಧಿಗಳ ಜೊತೆ ನಾರಾಯಣ ರೈ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ಆದಾಯ ತೆರಿಗೆ ಅಧಿಕಾರಿಗಳನ್ನು ಸಂಪ ರ್ಕಿಸಿದಾಗ ಅಂತಹ ತಪಾಸಣೆ ನಡೆಸಿಲ್ಲ ಎಂಬ ಮಾಹಿತಿ ಲಭಿಸಿದ್ದು, ನಾರಾಯಣ ರೈ ಬ್ಯಾಂಕ್ನಿಂದ ಹಣ ತಂದು ಮನೆಯಲ್ಲಿಟ್ಟಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ತಂಡವು ಈ ಕೃತ್ಯ ನಡೆಸಿರುವುದಾಗಿ ಸಂಶಯಿಸಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.