ಸುಳ್ಯದಲ್ಲಿ ಮಿಲಾದ್ ಸಂಗಮ
ಸುಳ್ಯ, ಡಿ.13 : ಮಾನವರೆಲ್ಲರೂ ಸಹೋದರತೆಯಿಂದ ಬಾಳಬೇಕೆಂದು ಸಾರಿದ ಪ್ರವಾದಿಯವರ ಸಂದೇಶ ಇಂದಿಗೂ ಪ್ರಸ್ತುತ ಎಂದು ಅಶ್ರಫ್ ಖಾಮಿಲ್ ಸಖಾಫಿ ಹೇಳಿದರು.
ಸುಳ್ಯ ಗಾಂಧಿನಗರ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್, ಮುನವ್ವಿರುಲ್ ಇಸ್ಲಾಂ ಸೆಕೆಂಡರ್ ಅರೇಬಿಕ್ ಸ್ಕೂಲ್ಗಳ ಜಂಟಿ ಆಶ್ರಯದಲ್ಲಿ ನಡೆದ ಮಿಲಾದ್ ಸಂಗಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾದಿ ಪ್ರಕೀರ್ತನೆಯ ಮೌಲೂದ್ ಪಾರಾಯಣದ ನಂತರ ಈದ್ ಮಿಲಾದ್ ಸಂದೇಶ ನೀಡಿದ ಧರ್ಮಗುರುಗಳು ಪ್ರವಾದಿ ಮಹಮ್ಮದ್ ಮುಸ್ತಫಾರವರು ಶತಮಾನಗಳ ಹಿಂದೆ ಜಗತ್ತಿಗೆ ಆರ್ಥಿಕ, ಶಿಕ್ಷಣ, ಸೇರಿದಂತೆ ಎಲ್ಲಾ ವಲಯದಲ್ಲೂ ನೀತಿ ಮತ್ತು ಶಾಂತಿಯ ಸಂದೇಶ ನೀಡಿರುತ್ತಾರೆ ಎಂದವರು ಹೇಳಿದರು.
ಗಾಂಧಿನಗರ ಕೇಂದ್ರ ಮಸೀದಿ ಅಧ್ಯಕ್ಷ ಎಸ್.ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮದರಸಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪ್ರದರ್ಶನವನ್ನು ಖತೀಬರಾದ ಅಶ್ರಫ್ ಖಾಮಿಲ್ ಸಖಾಫಿಪ್ರವಾದಿ ಪ್ರಕೀರ್ತನೆ ಮತ್ತು ಈದ್ ಸಂದೇಶದ ಮೂಲಕ ಉದ್ಘಾಟಿಸಿದರು. ಸುಳ್ಯ ತಾಲ್ಲೂಕು ಜಂಇಯತ್ತುಲ್ ಉಲಮಾ ಅಧ್ಯಕ್ಷ ಕುಂಞಿಕೋಯ ತಂಙಳ್ ದುವಾ ನೆರವೇರಿಸಿದರು.
ಜಿಲ್ಲಾ ಯೋಜನಾ ಸಮಿತಿ ಸದಸ್ಯ ಕೆ.ಎಂ.ಮುಸ್ತಫಾ, ಎಂ.ಜೆ.ಎಂ. ಉಪಾಧ್ಯಕ್ಷ ಅಬ್ಬಾಸ್ ಹಾಜಿ ಕಟ್ಟೆಕ್ಕಾರ್ಸ್, ಅನ್ಸಾರ್ ಅಧ್ಯಕ್ಷ ಅಬ್ದುಲ್ ಖಾದರ್ ಪಾರೆ, ಅನ್ಸಾರಿಯಾ ಯತೀಂ ಖಾನ ಅಧ್ಯಕ್ಷ ಮಜೀದ್ ಜನತಾ, ಗ್ರೀನ್ವ್ಯೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಜಿ ಇಸ್ಮಾಯಿಲ್, ಮದರಸಾ ಉಸ್ತುವಾರಿ ಸಮಿತಿ ಅಧ್ಯಕ್ಷ ಹಮೀದ್ ಬೀಜಕೊಚ್ಚಿ, ಎನ್.ಎಂ.ಅಬ್ದುರ್ರಹಮಾನ್ ಕಯ್ಯಿರ್, ಜಂಇಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರು, ಶೌಕತ್ ಅಲಿ ಅಮಾನಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಫಾ-ಮರ್ವಾ 2 ತಂಡಗಳೊಳಗೆ ನಡೆದ ವಿದ್ಯಾರ್ಥಿ ಫೆಸ್ಟ್ ಪ್ರತಿಭಾ ಪ್ರದರ್ಶನ ಮತ್ತು ಸ್ಪರ್ಧೆ ಕಾರ್ಯಕ್ರಮದಲ್ಲಿ ಸೀನಿಯರ್, ಜ್ಯೂನಿಯರ್, ಸಬ್ ಜ್ಯೂನಿಯರ್ ವಿಭಾಗಗಳಲ್ಲಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಪ್ರವಾದಿಯವರ ಕುರಿತು ಪ್ರಬಂಧ ಸ್ಪರ್ಧೆ, ಗಾಯನ ಸ್ಪರ್ಧೆ, ಕುರ್ಆನ್ ಪಠಣ, ಕ್ವಿರ್, ಬುರ್ದಾ ಮಜ್ಲಿಸ್ ಮೊದಲಾದ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ವಿಶೇಷ ಕಲಾ ಪ್ರತಿಭಾ ಪುರಸ್ಕಾರ ಫಾರಿಸ್ ಸಲ್ಮಾನ್ಗೆ ಪ್ರದಾನ ಮಾಡಲಾಯಿತು.
ಎಸ್.ಬಿ.ಎಸ್. ಜಿಲ್ಲಾಧ್ಯಕ್ಷ ಬಶೀರ್ ಮತ್ತು ಮುನೀರ್ ಎಂ.ಜೆ.ಎಂ.ರನ್ನು ಸನ್ಮಾನಿಸಲಾಯಿತು.
ಅನ್ಸಾರ್, ರೇಂಜ್, ಎಸ್.ಬಿ.ಎಸ್., ಸಹಭಾಗಿತ್ವದಲ್ಲಿ ನಡೆದ ಈ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಮದರಸ ಶಿಕ್ಷಕರುಗಳಾದ ಲತೀಫ್ ಸಖಾಫಿ, ಖಾದರ್ ಮುಸ್ಲಿಯಾರ್, ಇಸಾಕ್ ಉಸ್ತಾದ್, ಹಮೀದ್ ಮುಸ್ಲಿಯಾರ್, ಹಸೈನಾರ್ ಮದನಿ, ನಿಝಾರ್ ಸಖಾಫಿ, ಅಬ್ದುರ್ರಹಮಾನ್ ಸಅದಿ, ಅಬ್ದುಲ್ ಖಾದರ್ ಮದನಿ, ಹನೀಫ್ ಸಖಾಫಿ, ಅನ್ಸಾರಿಯಾದ ಸಮದ್ ಸಖಾಫಿ ಮೊದಲಾದವರು ಸಹಕರಿಸಿದರು.
ಝೈನುಲ್ ಆಬಿದೀನ್ ತಂಙಳ್ ಜಯನಗರ ಚಾಂಪಿಯನ್ ಶಿಪ್ ವಿತರಿಸಿದರು.