ಸುಳ್ಯ: ಪ್ಲಾಸ್ಟಿಕ್ ನಿಷೇಧ ಕುರಿತು ಸಮಾಲೋಚನಾ ಸಭೆ
ಸುಳ್ಯ, 13 : ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ವರ್ತಕರೊಂದಿಗೆ ಸಮಾಲೋಚನಾ ಸಭೆ ಸುಳ್ಯ ನಗರ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷೆ ಶೀಲಾವತಿ ಮಾಧವ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಹರಿಣಾಕ್ಷಿ ನಾರಾಯಣ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೋಹಿನಿ ನಾಗರಾಜ್ ವೇದಿಕೆಯಲ್ಲಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಾಧಿಕಾರಿ ಚಂದ್ರಕುಮಾರ್, ಜಿಲ್ಲಾಧಿಕಾರಿ ಸೂಚನೆಯಂತೆ ಉಪಯೋಗಿಸಿ ಬಿಸಾಡುವ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ವರ್ತಕರು ಸಹಕಾರ ನೀಡಬೇಕೆಂದರು. ಇದರಲ್ಲಿ ಯವುದೇ ವಿನಾಯಿತಿ ಇಲ್ಲ. ಕಲ್ಯಾಣ ಮಂಟಪಗಳಿಗೂ ಈ ಕುರಿತು ಸೂಚನೆ ನೀಡಲಾಗಿದ್ದು, ಯೂಸ್ ಏಂಡ್ ತ್ರೂ ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಬೇಕೆಂದರು. ಹೊಸದಾಗಿ ರೂಪಿಸಲಾದ ಕಾಯ್ದೆಯಡಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಲು ಅವಕಾಶವಿದೆ. ಅದಕ್ಕೆ ಯಾರೂ ಆಸ್ಪದ ಕೊಡಬಾರದು ಎಂದರು.
ವರ್ತಕ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಮಾತನಾಡಿ, ಉತ್ಪಾದನಾ ಹಂತದಲ್ಲೇ ಪ್ಲಾಸ್ಟಿಕ್ನ್ನು ನಿಷೇಧಿಸಿದರೆ ಬಳಕೆಯ ಅವಕಾಶವೇ ಇರುವುದಿಲ್ಲ. ಕೆಲಗಿನಿಂದ ಹೇರುವ ಬದಲು ಮೇಲಿನಿಂದ ಜಾರಿ ಮಾಡಬೇಕು. ಬೈಕಂಪಾಡಿಯಲ್ಲಿ 10 ಪ್ಲಾಸ್ಟಿಕ್ ಕಾರ್ಖಾನೆ ಇದೆ. ಅದನ್ನು ಮೊದಲು ಬಂದ್ ಮಾಡಬೇಕು. ಪ್ಲಾಸ್ಟಿಕ್ ಬದಲು ಪರ್ಯಾಯ ಬಳಕೆಯನ್ನು ಮೊದಲು ಪರಿಚಯಿಸುವ ಕೆಲಸ ಆಗಬೇಕು. ಆ ಬಳಿಕ ಕಾನೂನು ಕ್ರಮ ಕೈಗೊಳ್ಳಿ ಎಂದು ಸಲಹೆ ಮಾಡಿದರು.
ವರ್ತಕರೂ ಗರಿಷ್ಠ ಪಲಾಸ್ಟಿಕ್ ನಿಷೇಧ ನಿಟ್ಟಿನಲ್ಲಿ ಗರಿಷ್ಠ ಸಹಕಾರ ನೀಡಬೇಕು ಎಂದ ಅವರು, ನಗರ ಪಂಚಾಯತ್ ಇರುವುದು ಜನರಿಗಾಗಿ ಹೊರತು ನಗರ ಪಂಚಾಯತ್ಗಾಗಿ ಜನರಲ್ಲ. ನಾಗಪಟ್ಟಣದಲ್ಲಿ ಪ್ಲಾಸ್ಟಿಕ್ ಚೀಲ ಬಳಸಿ ನದಿಯಲ್ಲಿ ನಗರ ಪಂಚಾಯತ್ನವರೇ ನೀರು ನಿಲ್ಲಿಸುತ್ತಾರೆ. ಅಲ್ಲಿ ತಕ್ಷಣ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.
ಪಂಚಾಯತ್ ಸದಸ್ಯೆ ಪ್ರೇಮಾ ಟೀಚರ್ ಮಾತನಾಡಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸುವ ಬದಲು ನೋಟು ನಿಷೇಧದಂತೆ ನಿಷೇಧಿತ ಪ್ಲಾಸ್ಟಿಕ್ ಉತ್ಪಾದನೆ ಮಾಡುವುದನ್ನು ಮೊದಲು ನಿಷೇಧಿಸುವ ಕೆಲಸ ಆಗಬೇಕೆಂದರು. ಪ್ಲಾಸ್ಟಿಕ್ಗೆ ಪರ್ಯಾಯ ನೀಡುವುದು ನಗರ ಪಂಚಾಯತ್ ಕೆಲಸ ಅಲ್ಲ. ಅಲ್ಲದೆ ಮೇಲಿನಿಂದ ಜಾರಿ ಮಾಡುವುದೂ ನಮ್ಮ ಕೈಯಲ್ಲಿ ಇಲ್ಲ ಎಂದು ಮುಕ್ಯಾಧಿಕಾರಿ ಹೇಳಿದರು. ಅಬ್ಬಾಸ್ ಕಟ್ಟೆಕಾರ್ಸ್, ಚಂದ್ರಶೇಖರ ನಂಜೆ, ಗಣಪ ಸಾಲ್ಯಾನ್, ಸೀತಾರಾಮ ನೆಟ್ಟಾರ್ ಮೊದಲಾದವರಿದ್ದರು