ಮೂಡುಬಿದಿರೆ : ರೋಟರಿ ಪಿ.ಯು ಕಾಲೇಜಿನ ನೂತನ ಕಟ್ಟಡ ಉದ್ಘಾಟನೆ
ಹೆತ್ತವರು ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಿ : ರಾಜಶ್ರೀ ಡಾ.ವಿರೇಂದ್ರ ಹೆಗ್ಗಡೆ

ಮೂಡುಬಿದಿರೆ,ಡಿ.14 : ವಿದ್ಯಾರ್ಥಿಗಳು ಶಿಸ್ತು ಮತ್ತು ಆದರ್ಶವನ್ನು ಮೈಗೂಡಿಸಿಕೊಂಡರೆ ಯಶಸ್ವಿ ಸಾಧ್ಯ. ಶಿಕ್ಷಕರು ಮಕ್ಕಳಿಗೆ ವ್ಯಕ್ತಿತ್ವ ನಿರ್ಮಾಣ ಮತ್ತು ಭವಿಷ್ಯವನ್ನು ರೂಪಿಸುವ ಶಿಕ್ಷಣವನ್ನು ನೀಡಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರವನ್ನು ನೀಡಿದಾಗ ಸಮಾಜದಲ್ಲಿ ಉನ್ನತ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಇಲ್ಲಿನ ರೋಟರಿ ಎಜ್ಯುಕೇಶನ್ ಸೊಸೈಟಿಯ ರೋಟರಿ ಪಿಯು ಕಾಲೇಜಿಗೆ ಜ್ಯೋತಿನಗರ ಬಳಿಯಲ್ಲಿ 2.12 ಎಕ್ರೆ ಸ್ಥಳದಲ್ಲಿ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಕಾಲೇಜು ಕಟ್ಟಡವನ್ನು ಬುಧವಾರದಂದು ಉದ್ಘಾಟಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯವನ್ನು ರೂಪಿಸಲು ವಿವಿಧ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳಿವೆ. ಈ ಅವಕಾಶಗಳನ್ನು ಪಡೆಯುವ ಗುರಿ ಇರಬೇಕು ಜತೆಗೆ ಗುರಿ ಸಾಧಿಸುವ ಛಲವೂ ಇರಬೇಕೆಂದು ಹೇಳಿದ ಅವರು ಪ್ರತಿಯೊಬ್ಬರೂ ಸಮಾನತೆ, ಸಹಭಾಗಿತ್ವ ಮತ್ತು ಸಹಬಾಳ್ವೆಯೊಂದಿಗೆ ಬೆಳೆಯಬೇಕೆಂಬ ಉದ್ದೇಶವನ್ನು ರೋಟರಿ ಸಂಸ್ಥೆಯು ಹೊಂದಿದ್ದು ಅದರಂತೆ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾಜಿ ಸಚಿವ ಕಿಮ್ಮನೆ ರತ್ನಾಕರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಜೀವಶಾಸ್ತ್ರ ಪ್ರಯೋಗಾಲಯವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿರುವ ಒಳ್ಳೆಯತನ, ವಿಶಾಲ ಮನೋಭಾವ ದೊಡ್ಡವರಲ್ಲಿ ಇರಲು ಸಾಧ್ಯವಿಲ್ಲ. ಮಕ್ಕಳಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವಲ್ಲಿ ನಾವು ವಿಫಲರಾಗಿದ್ದೇವೆ. ಇಂದು 99% ಶಿಕ್ಷಣವನ್ನು ಪಡೆದವರೇ ಭ್ರಷ್ಠಾಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪಡೆದ ಶಿಕ್ಷಣವನ್ನು ಸಮಾಜಕ್ಕೆ ಪೂರಕವಾಗಿ ನೀಡುವುದರೊಂದಿಗೆ ಸಂಕುಚಿತರಾಗಿದ್ದೇವೆ. ಶಿಕ್ಷಕರು ತಮ್ಮ ಜ್ಞಾನದ ಹಸಿವನ್ನು ಹೆಚ್ಚಿಸಿಕೊಳ್ಳಬೇಕು. ಪೋಷಕರು ಮಕ್ಕಳಿಗೆ ಅತ್ಯುತ್ತಮವಾದ ಮಾರ್ಗದರ್ಶನವನ್ನು ನೀಡಬೇಕು ಎಂದು ಹೇಳಿದ ಅವರು ಕೇವಲ 100% ಮಾರ್ಕ್ಸ್ಗಳಿಗಾಗಿ ಮಾತ್ರ ಮಕ್ಕಳನ್ನು ಸೀಮಿತಗೊಳಿಸಬೇಡಿ ಕಡಿಮೆ ಅಂಕಗಳಿಸಿದ ಮಕ್ಕಳಿಗೂ ಭವಿಷ್ಯವಿದೆ ಎಂದರು.
ರೋಟರಿ ಸಂಸ್ಥೆಯ ಅಧ್ಯಕ್ಷ ಕೆ. ಅಮರನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವ ಮಂಗಳೂರು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಎಂ. ಬಿ ಪುರಾಣಿಕ್ ವಿಜ್ಞಾನ ಪ್ರಯೋಗಾಲಯವನ್ನು, ಮೂಡುಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಮಹಮ್ಮದ್ ಷರೀಫ್ ಭೌತಶಾಸ್ತ್ರ ಪ್ರಯೋಗಾಲಯವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಪ್ರತಿಭಾ ಪುರಸ್ಕಾರ : ರಾಷ್ಟ್ರ ಮಟ್ಟದಲ್ಲಿ ವಿವಿಧ ರಂಗಗಳಲ್ಲಿ ಸಾಧನೆಗೈದಿರುವ ಶ್ರೇಯಸ್ ಪೈ, ಪ್ರತಿಕ್ಷಾ ಶೆಟ್ಟಿ, ಅಶ್ವಿನ್ ಕೆ, ರಕ್ಷಣ್ಯಾ, ಕೆ.ಎಸ್.ಶಿಬಿ, ರಾಜ್ ಬಂಗೇರಾ ಹಾಗೂ ಜಯಭೀಮ್ ಅವರನ್ನು ಪುರಸ್ಕರಿಸಲಾಯಿತು.
ನೂತನ ಕಟ್ಟಡ ನಿರ್ಮಾಣದಲ್ಲಿ ಸಹಕರಿಸಿರುವ ರವಿಪ್ರಸಾದ್ ಉಪಾಧ್ಯಾಯ, ಪಿ.ಕೆ ತೋಮಸ್, ಬಾಲಕೃಷ್ಣ, ಸತೀಶ್ ಭಟ್ ಮತ್ತು ರಾಜೇಶ್ ಅವರನ್ನು ಗೌರವಿಸಲಾಯಿತು. ಕಳೆದ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಳೆದ 33 ವರ್ಷಗಳಿಂದ ಅಧ್ಯಕ್ಷರಾಗಿ ಸಂಸ್ಥೆಯ ಜವಾಬ್ದಾರಿಯನ್ನು ನಿರ್ವಹಿಸಿರುವ ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಶುಭಕರ ಅಂಚನ್, ಪ.ಪೂ.ಕಾಲೇಜಿನ ವಿದ್ಯಾರ್ಥಿ ನಾಯಕ ಲಿಜೋ ಜೇಕಬ್ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಪಿ. ಎಂ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಖಜಾಂಜಿ ಅನಂತಕೃಷ್ಣ ಸನ್ಮಾನಿತರ ವಿವರ ನೀಡಿದರು. ಪ್ರಾಚಾರ್ಯ ವಿನ್ಸೆಂಟ್ ಡಿ"ಕೋಸ್ತಾ ರೋಟರಿ ಶಾಲೆಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕ ಡಾ/ಯತಿಕುಮಾರ ಸ್ವಾಮಿ ಗೌಡ ವಂದಿಸಿದರು.







