ಕೆಲವರಿಗೆ ಮಾತ್ರ ದೊಡ್ಡ ಪ್ರಮಾಣದಲ್ಲಿ ಹೊಸನೋಟುಗಳು ಹೇಗೆ ಸಿಗುತ್ತಿವೆ?
ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಹೊಸದಿಲ್ಲಿ,ಡಿ.7: ನೋಟು ರದ್ದತಿ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿರುವ ಸರ್ವೋಚ್ಚ ನ್ಯಾಯಾಲಯವು, ಕೆಲವರು ಅತಿಯಾದ ಸಂಕಷ್ಟಗಳನ್ನು ಎದುರಿಸುತ್ತಿದ್ದು ಸರಕಾರದ ಕ್ರಮದ ಪರಿಣಾಮ ತೀವ್ರವಾಗಿರು ವಂತಿದೆ, ಆದರೆ ಕೆಲವರ ಮೇಲೆ ಯಾವುದೇ ಪರಿಣಾಮ ಬೀರಿದಂತಿಲ್ಲ ಎಂದು ಗುರುವಾರ ಹೇಳಿತು. ಆದರೆ ಕಳೆದ ಕೆಲವು ದಿನಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಭಾರೀ ಪ್ರಮಾಣದಲ್ಲಿ ಹೊಸನೋಟುಗಳನ್ನು ವಶಪಡಿಸಿಕೊಂಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಅದು ಕೆಲವು ಜನರಿಗೆ ಬೃಹತ್ ಮೊತ್ತದ ಹಣ...ಅದೂ ಹೊಸನೋಟುಗಳಲ್ಲಿ ಹೇಗೆ ಸಿಗುತ್ತಿದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರನ್ನು ಪ್ರಶ್ನಿಸಿತು.
ಸರಕಾರವು ಭರವಸೆ ನೀಡಿದ್ದಂತೆ ವಾರಕ್ಕೆ 24,000 ರೂ.ಗಳೂ ಜನರಿಗೆ ಬ್ಯಾಂಕುಗಳಲ್ಲಿ ಸಿಗುತ್ತಿಲ್ಲ. ಹೀಗಿರುವಾಗ ಕೆಲವರಿಗೆ ಲಕ್ಷಗಟ್ಟಲೆ ಕರೆನ್ಸಿ ಹೇಗೆ ಸಿಗುತ್ತಿದೆ ಎಂಬ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಅವರ ಪ್ರಶ್ನೆಗೆ ಉತ್ತರಿಸಿದ ರೋಹಟ್ಗಿ, ಕೆಲವು ಬ್ಯಾಂಕ್ ಮ್ಯಾನೇಜರ್ಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಮತ್ತು ಸರಕಾರವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ ಎಂದು ತಿಳಿಸಿದರು.





