ಡಿ.18 ರಂದು ಅನುಗ್ರಹ ಮಹಿಳಾ ಕಾಲೇಜಿನ ವಾರ್ಷಿಕೋತ್ಸವ
ವಿಟ್ಲ , ಡಿ.16 : ಕಲ್ಲಡ್ಕ ಅನುಗ್ರಹ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜಿನ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ಡಿ. 18 ರಂದು ಭಾನುವಾರ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಕಾಲೇಜು ಟ್ರಸ್ಟಿ ಕೆ. ಹೈದರ್ ಅಲಿ ನೀರ್ಕಜೆ ತಿಳಿಸಿದರು.
ಗುರುವಾರ ವಿಟ್ಲದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕದಲ್ಲಿ ವಿದ್ಯಾರ್ಥಿನಿಯರಿಗಾಗಿ ಮಾತ್ರ ಸ್ಥಾಪನೆಗೊಂಡ ಶಿಕ್ಷಣ ಕೇಂದ್ರವಾಗಿದೆ ಅನುಗ್ರಹ ಮಹಿಳಾ ಪದವಿಪೂರ್ವ ಹಾಗೂ ಪದವಿ ಕಾಲೇಜು. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಮೊದಲಾದ ಕಡೆಗಳಿಂದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ನೈತಿಕ ಮೌಲ್ಯಗಳನ್ನು ಕಲಿಸಲಾಗುತ್ತಿದೆ ಎಂದರು.
ಕಾಲೇಜು ಸಂಚಾಲಕ ಯಾಸೀನ್ ಬೇಗ್ ಮಾತನಾಡಿ, ವಿದ್ಯಾರ್ಥಿನಿಯರಿಗೆ ಬಸ್ ವ್ಯವಸ್ಥೆ ಇದ್ದು, ಪ್ರತಿಯೊಬ್ಬಳು ವಿದ್ಯಾರ್ಥಿನಿ ಕಾಲೇಜಿನ ಬಸ್ಸಿನ ಮೂಲಕ ಕಾಲೇಜಿಗೆ ತೆರಳುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಪ್ರವಾಸ ಮೊದಲಾದ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಹಲವು ಶಿಸ್ತು ನಿಯಮಗಳು ಇಲ್ಲಿ ಜಾರಿಯಲ್ಲಿದೆ. ಇದರಿಂದಲೇ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಪ್ರತೀ ವರ್ಷ ಹೆಚ್ಚಾಗುತ್ತಿದೆ ಎಂದರು.
ಡಿ 16 ರಂದು ಶುಕ್ರವಾರ ಪ್ರತಿಭಾ ಪುರಸ್ಕಾರ ಹಾಗೂ 17 ರಂದು ಬೆಳಿಗ್ಗೆ 9 ರಿಂದ ಸಂಜೆ 5ರ ವರೆಗೆ ಕೆ.ಎಸ್. ಮಹಮ್ಮದ್ ಯಾಸೀರ್ ಕಲ್ಲಡ್ಕ ಅವರ ನೇತೃತ್ವದಲ್ಲಿ ವಸ್ತು ಪ್ರದರ್ಶನ ನಡೆಯಲಿದ್ದು, ಈ ಪ್ರದರ್ಶನದಲ್ಲಿ ರಾಷ್ಟ್ರದ ಮತ್ತು ಜಗತ್ತಿನ ಹತ್ತು ಹಲವು ಅಮೂಲ್ಯ ಸಂಗ್ರಹಗಳು ಮಾತ್ರವಲ್ಲದೇ ನಮ್ಮ ಜಿಲ್ಲೆಯ ಸುಮಾರು 200 ವರ್ಷಗಳ ಇತಿಹಾಸವನ್ನು ಮತ್ತೊಮ್ಮೆ ಮರುಕಳಿಸುವಂತೆ ಮಾಡುವ ಸಂಗ್ರಹವಿದೆ. ಈ ವಸ್ತು ಪ್ರದರ್ಶನವನ್ನು ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದೆ ಎಂದರು.
ಡಿ 18 ರಂದು ನಡೆಯಲಿರುವ ವಾರ್ಷಿಕೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಮಂಗಳೂರು ವಿಶ್ವವಿದ್ಯಾಲಯದ (ಪರೀಕ್ಷಾಂಗ) ಕುಲಸಚಿವ ಎ.ಎಮ್. ಖಾನ್, ಪುತ್ತೂರು ಶಾಸಕಿ ಟಿ. ಶಕುಂತಳಾ ಶೆಟ್ಟಿ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಮಂಗಳೂರು ಉತ್ತರ ಅಪರಾಧ ವಿಭಾಗದ ಪೊಲೀಸ್ ನಿರೀಕ್ಷಕ ಕೆ.ಎಂ. ರಫೀಕ್, ಮಂಗಳೂರು ಅಝಾದ್ ಹಾರ್ಡ್ವೇರ್ ವ್ಯವಸ್ಥಾಪಕ ನಿರ್ದೇಶಕ ಮನ್ಸೂರ್ ಆಝಾದ್, ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ನೆಹರೂ ನಗರ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್, ಬೋಳಂಗಡಿ ಹವ್ವ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್ ಮದನಿ, ಮೊಡಂಕಾಪು ಕಾರ್ಮೆಲ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಹೆರಾಲ್ಡ್ ಎಸ್. ಫೆರ್ನಾಂಡಿಸ್, ಕಲ್ಲಡ್ಕ ಕೆ.ಎಸ್. ಬೀಡಿಯ ಕೆ.ಎಸ್ ಮಹಮ್ಮದ್ ಯಾಸೀರ್, ಮಂಗಳೂರು ಜಮಾಅತೇ ಇಸ್ಲಾಮೀ ಹಿಂದ್ನ ಝೋನಲ್ ಕನ್ವೀನರ್ ಅಬ್ದುಸ್ಸಲಾಂ ಮೊದಲಾದವರು ಭಾಗವಹಿಸಲಿದ್ದಾರೆ ಎಂದವರು ವಿವರಿಸಿದರು. ಸು
ದ್ದಿಗೋಷ್ಠಿಯಲ್ಲಿ ಕಾಲೇಜು ಟ್ರಸ್ಟಿ ಎಂ.ಎ. ರಹ್ಮಾನ್ ಕಲ್ಲಂಗಳ, ಕೋಶಾಧಿಕಾರಿ ಅಬ್ದುಲ್ಲ ಕುಂಞ ಬೈರಿಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.