ಧರ್ಮ ಪಾಲನೆಯಿಂದ ವ್ಯಕ್ತಿತ್ವ ವಿಕಸನ: ಬೇಕಲ ಇಬ್ರಾಹೀಂ ಮುಸ್ಲಿಯಾರ್
ನಾರಿಯತ್ ಸ್ವಲಾತ್ ವಾರ್ಷಿಕ ಮತ್ತು ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮ
![ಧರ್ಮ ಪಾಲನೆಯಿಂದ ವ್ಯಕ್ತಿತ್ವ ವಿಕಸನ: ಬೇಕಲ ಇಬ್ರಾಹೀಂ ಮುಸ್ಲಿಯಾರ್ ಧರ್ಮ ಪಾಲನೆಯಿಂದ ವ್ಯಕ್ತಿತ್ವ ವಿಕಸನ: ಬೇಕಲ ಇಬ್ರಾಹೀಂ ಮುಸ್ಲಿಯಾರ್](https://www.varthabharati.in/sites/default/files/images/articles/2016/12/16/sunni-centr.jpg)
ಉಳ್ಳಾಲ, ಡಿ. 16 : ದ್ಸಿಕ್ರ್ , ಸ್ವಲಾತ್ ಮುಂತಾದ ಉತ್ತಮ ಧಾರ್ಮಿಕ ಕಾರ್ಯಗಳ ಜೊತೆಗೆ ಧಾರ್ಮಿಕ ಪಾಲನೆಯಿಂದ ವ್ಯಕ್ತಿತ್ವ ವಿಕಸನಗೊಳ್ಳಲು ಸಾಧ್ಯವಿದೆ. ನಾರಿಯತ್ ಸ್ವಲಾತ್ಗೆ ಮಹತ್ವ ಇದೆ. ಇದನ್ನು ಕಡೆಗಣಿಸುವಂತಿಲ್ಲ ಎಂದು ಉಡುಪಿ ಸಂಯುಕ್ತ ಖಾಝಿ ಬೇಕಲ ಇಬ್ರಾಹೀಂ ಮುಸ್ಲಿಯಾರ್ ಹೇಳಿದರು.
ಅವರು ಎಸ್ವೈಎಸ್ ಮೋಂಟುಗೋಳಿ ಬ್ರಾಂಚ್ ಇದರ ಆಶ್ರಯದಲ್ಲಿ ಗುರುವಾರ ಮೋಂಟುಗೋಳಿಯಲ್ಲಿ ನಡೆದ ನಾರಿಯತ್ ಸ್ವಲಾತ್ ವಾರ್ಷಿಕ ಮತ್ತು ಹುಬ್ಬುರ್ರಸೂಲ್ ಕಾನ್ಫರೆನ್ಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ವೈಎಸ್ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ.ಸಿ.ರೋಡ್ ಮಾತನಾಡಿ, ಧಾರ್ಮಿಕ ವಿಚಾರಗಳನ್ನು ಅಧ್ಯಯನ ಮಾಡಲು ಮದ್ರಸಗಳು ಇವೆ. ಧರ್ಮದ ವಿಚಾರವನ್ನು ಕೂಲಂಕಷ ಅಧ್ಯಯನ ಮಾಡಿ ಅದನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಮಾತನಾಡಿ, ಸಮಾಜವನ್ನು ಮುನ್ನೆಡಸಬೇಕಾದ ಕೆಲಸ ನಮ್ಮ ಮುಂದಿದೆ. ಅಭಿವೃದ್ಧಿಗಾಗಿ ನಿಗಮದಿಂದ ಏನೆಲ್ಲ ಯೋಜನೆಗಳು ಇದೆಯೋ ಅದನ್ನು ಖಂಡಿತಾ ಒದಗಿಸಿಕೊಡುತ್ತೇನೆ. ಸಮಾಜ ಮತ್ತು ಧರ್ಮ ಯಾವುದೇ ಕಳಂಕವಿಲ್ಲದೇ, ಭಿನ್ನಮತವಿಲ್ಲದೇ ಒಗ್ಗಟ್ಟಿನಲ್ಲಿ ಬೆಳೆಯಬೇಕು ಎಂಬುದು ನನ್ನ ಗುರಿ ಎಂದರು.
ಈ ಸಂದರ್ಭದಲ್ಲಿ ಬೇಕಲ ಉಸ್ತಾದ್ ಮತ್ತು ಹುಸೈನ್ ಸಅದಿ ಕೆ.ಸಿ.ರೋಡ್ರನ್ನು ಸನ್ಮಾನಿಸಲಾಯಿತು.
ಗೌಸಿಯಾ ಮಸೀದಿಯ ಮಾಜಿ ಅಧ್ಯಕ್ಷ ಟಿ.ಮುಹಮ್ಮದ್ ಹಾಜಿ ಧ್ವಜಾರೋಹಣ ನೆರವೇರಿಸಿದರು.
ಅಸ್ಸಯ್ಯದ್ ಅಬ್ದುರ್ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ನಾರಿಯತ್ ಸ್ವಲಾತ್ನ ನೇತೃತ್ವ ವಹಿಸಿದ್ದರು.
ದ.ಕ. ಜಿಲ್ಲಾ ಎಸ್ವೈಎಸ್ ಅಧ್ಯಕ್ಷ ಉಸ್ಮಾಸ್ ಸಅದಿ ಪಟ್ಟೋರಿ, ಎಸ್ಜೆಎಂ ಮೋಂಟುಗೋಳಿ ರೇಂಜ್ ಅಧ್ಯಕ್ಷ ಅಬ್ಬಾಸ್ ಸಖಾಫಿ ಮಡಿಕೇರಿ, ಕೊಣಾಜೆ ಇನ್ಸ್ಪೆಕ್ಟರ್ ಅಶೋಕ್, ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹೀಂ ಅಹ್ಸನಿ, ಬ್ರೈಟ್ ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಜಲೀಲ್ ಮೋಂಟುಗೋಳಿ, ಕಾಂಗ್ರೆಸ್ನ ದ.ಕ. ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್.ಕರೀಂ, ತಾ.ಪಂ. ಸದಸ್ಯ ಹೈದರ್ ಕೈರಂಗಳ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫೂರ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ವೈಎಸ್ ಮೋಂಟುಗೋಳಿ ಬ್ರಾಂಚ್ ಅಧ್ಯಕ್ಷ ಟಿ. ಅಬ್ದುಲ್ ಖಾದರ್ ಸಖಾಫಿ ಅತಿಥಿಗಳನ್ನು ಸ್ವಾಗತಿಸಿದರು.