ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಉದ್ಘಾಟನೆ

ಉಡುಪಿ, ಡಿ.18: ಉಡುಪಿಯ ಸ್ವಿಮ್ಮಿಂಗ್ ಅಸೋಸಿಯೇಶನ್ ಹಾಗೂ ಸೀಲೋಮ್ ಪೂಲ್ಸ್ ಆಂಡ್ ಸಲೂಷನ್ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯನ್ನು ಅಜ್ಜರಕಾಡಿನಲ್ಲಿರುವ ಈಜುಕೊಳದಲ್ಲಿ ರವಿವಾರ ಏರ್ಪಡಿಸಲಾಗಿತ್ತು.
ಸ್ಪರ್ಧೆಯನ್ನು ಉದ್ಘಾಟಿಸಿದ ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಈಜುಗಾರ ಯಾವುದೇ ಅನಾಹುತ ಸಂಭವಿಸಿದಾಗ ಅದನ್ನು ಸಮರ್ಥ ಹಾಗೂ ಧೈರ್ಯದಿಂದ ಎದುರಿಸುತ್ತಾನೆ. ಈಜು ಕಲಿಯುವುದ ರಿಂದ ಯಾವುದೇ ದುಷ್ಪರಿಣಾಮ ಇಲ್ಲ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.
ಜಿಲ್ಲೆಯಲ್ಲಿ ಸುಮಾರು 8-9 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ಅಭಿವೃದ್ಧಿ ಕಾಮಗಾರಿ ನಡೆಸಲಾಗಿದೆ. ಕ್ರೀಡೆಗೆ ಬೇಕಾದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಈಜು ಕೊಳಕ್ಕೆ ಬೇಕಾಗಿರುವ ಸೌಲಭ್ಯದ ಬಗ್ಗೆ ಮನವಿ ಸಲ್ಲಿಸಿದರೆ ಅದನ್ನು ಪರಿಶೀಲಿಸಿ ಒದಗಿಸುವ ಪ್ರಯತ್ನವನ್ನು ಮಾಡಲಾಗು ವುದು ಎಂದು ಅವರು ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಉಡುಪಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರೋಶನ್ ಕುಮಾರ್ ಶೆಟ್ಟಿ ವಹಿಸಿದ್ದರು. ಸೀಲೋಮ್ ಪೂಲ್ಸ್ ಆಂಡ್ ಸೆಲೂಷನ್ನ ಕ್ಲೈನ್ ಫೆರ್ನಾಂಡಿಸ್, ರಾಜ್ಯ ಸ್ವಿಮ್ಮಿಂಗ್ ಅಸೋಸಿಯೇಷನ್ ಸದಸ್ಯ ರಮಾಕಾಂತ್ ಭಟ್, ಸ್ವಿಮ್ಮಿಂಗ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಶೆಟ್ಟಿ ಕೆಮ್ತೂರು, ಕಾರ್ಯದರ್ಶಿ ಗಣೇಶ್ ಅಮಿನ್, ಕೋಶಾಧಿಕಾರಿ ಬಿ.ಶಂಕರ್ ಶೆಟ್ಟಿ, ಗಂಗಾಧರ ಭಿರ್ತಿ, ರಾಧಾಕೃಷ್ಣ ಮೆಂಡನ್, ಶಶಿಧರ್ ಕುಂದರ್, ರೈಲ್ವೆ ಇನ್ಪೆಕ್ಟರ್ ಶಿವರಾಮ್ ರಾಥೋಡ್ ಮೊದಲಾದವರು ಉಪಸ್ಥಿತರಿದ್ದರು.
7ವರ್ಷದಿಂದ 70ವರ್ಷ ವಯಸ್ಸಿನ ವಿಬಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಉಡುಪಿ, ಕುಂದಾಪುರ, ಕಾಪುವಿನ ಉಡುಪಿಯ 120ಕ್ಕೂ ಅಧಿಕ ಸ್ಪರ್ಧಾಳು ಗಳು ಭಾಗವಹಿಸಿದ್ದರು.







