ಜಾತಿ ರೋಗಕ್ಕೆ ಮೀಸಲಾತಿ ಔಷಧ: ಜಯನ್ ಮಲ್ಪೆ
ಕುಂದಾಪುರ, ಡಿ.18: ಸಾಮಾನ್ಯ ಜನಗಳು ನಂಬಿರುವ ಹಾಗೆ ಮೀಸಲಾತಿ ಅಂಬೇಡ್ಕರ್ ಅವರ ಕೊಡುಗೆಯಲ್ಲ. ಅವರು ಸಮಾನ ಶಿಕ್ಷಣಕ್ಕೆ ಆಗ್ರಹಿಸಿದ್ದರೇ ಹೊರತು ಮೀಸಲಾತಿಗಲ್ಲ. ಭಾರತದ ಜಾತಿ ರೋಗ ಉಲ್ಬಣವಾಗದಿರಲೆಂದು ಕಂಡುಕೊಂಡ ಔಷಧಿ ಈ ಮೀಸಲಾತಿ ಎಂದು ದಲಿತ ಚಿಂತಕ ಜಯನ್ ಮಲ್ಪೆಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮೊಳಹಳ್ಳಿಯಲ್ಲಿ ರವಿವಾರ ಆಯೋಜಿಸಲಾದ ದಲಿತ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮೀಸಲಾತಿ ಜಾರಿಯಾಗದೆ ದಲಿತರಿಗೆ ವಿದ್ಯೆ ಮಾತ್ರ ಕೊಟ್ಟಿದ್ದರೆ ಅವರು ಆಲೋಚಿಸುವ ಶಕ್ತಿ ಬೆಳೆಸಿಕೊಂಡು ನಂತರ ನಮ್ಮ ದೇಶ ಅಕ್ಷರಶ: ಛಿದ್ರ ಛಿದ್ರವಾಗಿ ಬಿಡುತ್ತಿತ್ತು. ಜಾತಿರೋಗ ಉಲ್ಬಣವಾಗದಿರಲೆಂದು ಅಂಬೇಡ್ಕರ್ ಮೀಸಲಾತಿ ಔಷಧಿಯನ್ನು ಗುರುತಿಸಿ ಅದನ್ನು ಕಾನೂನು ಮಾಡಿ ಜಾರಿಗೊಳಿಸಿದರು ಎಂದರು.
ಅಧ್ಯಕ್ಷತೆಯನ್ನು ಕುಂದಾಪುರ ಸಂಚಾಲಕ ರಾಜು ಬೆಟ್ಟನಮನೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಕೆಎಸ್ಎಫ್ಸಿ ಡೆಫ್ಯುಟಿ ಜನರಲ್ ಮ್ಯಾನೇಜರ್ ಮೋಹನ ಬಿ.ಎಸ್., ಅಂಬೇಡ್ಕರ್ ಅಭಿವೃಧ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ದೇವರಾಜ್, ಬ್ರಹ್ಮಾವರ ಪೋಲೀಸ್ ವೃತ್ತ ನಿರೀಕ್ಷಕ ಶ್ರೀಕಾಂತ, ಮೊಳಹಳ್ಳಿ ಗ್ರಾಪಂ ಅಧ್ಯಕ್ಷ ಉದಯ ಕುಲಾಲ್, ಮಾಜಿ ಅಧ್ಯಕ್ಷ ಎಂ.ದಿನೇಶ್ ಹೆಗ್ಡೆ, ಉಪಾಧ್ಯಕ್ಷೆ ವಾಣಿ, ದಲಿತ ಮುಖಂಡರಾದ ವಾಸುದೇವ ಮುದೂರು, ಚಂದ್ರ ಹಳಗೇರಿ, ಸುರೇಶ್ ಬಾರಕೂರು ಮೊದಲಾದವರು ಉಪಸ್ಥಿತರಿದ್ದರು.