ಕೋರೆ ನೀರಿಗೆ ಬಿದ್ದು ತಾಯಿ ಮಗು ಮೃತ್ಯು

ಬ್ರಹ್ಮಾವರ, ಡಿ.18: ಕಲ್ಲುಕೊರೆಯ ನೀರಿಗೆ ಬಿದ್ದು ತಾಯಿ ಮಗು ಮೃತಪಟ್ಟ ದಾರುಣ ಘಟನೆ ಡಿ.17ರಂದು ಅಪರಾಹ್ನ ಸಾಬರಕಟ್ಟೆ ಸಮೀಪದ ಹೋರ್ವರಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಭದ್ರವಾತಿ ಮೂಲದ ಕೂಲಿ ಕಾರ್ಮಿಕ ವಿರೇಶ್ ಎಂಬವರ ಪತ್ನಿ ಚಂದ್ರಿಕಾ ಯಾನೆ ಕವಿತಾ(28) ಹಾಗೂ ಅವರ ಮಗು ಲಿಖಿತಾ(3) ಎಂದು ಗುರುತಿಸಲಾಗಿದೆ. ಚಂದ್ರಿಕಾ ಶಿಲೆಕಲ್ಲು ತೆಗೆದು ಉಂಟಾದ ಸುಮಾರು 20 ಅಡಿ ಆಳ ನೀರಿರುವ ಕೆರೆಯ ದಂಡೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಬಟ್ಟೆ ಹೊಗೆಯಲು ಹೋಗಿದ್ದರು.
ಆಗ ಅವರಲ್ಲಿ ಸಣ್ಣ ಮಗಳು ಲಿಖಿತಾ ಆಕಸ್ಮಿಕವಾಗಿ ಕೆರೆಯ ನೀರಿಗೆ ಬಿದ್ದಳು. ಇದರಿಂದ ಗಾಬರಿಗೊಂಡ ಚಂದ್ರಿಕಾ ಮಗುವನ್ನು ಕಾಪಾಡಲು ಕೂಡಲೇ ಕೆರೆಯ ನೀರಿಗೆ ಹಾರಿದರು. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟರು. ಚಂದ್ರಿಕಾ ಕಳೆದ ಮೂರು ವರ್ಷಗಳಿಂದ ತನ್ನ ಮೂವರು ಮಕ್ಕಳೊಂದಿಗೆ ಸಾಬರಕಟ್ಟೆ ಪರಿಸರದಲ್ಲಿ ವಾಸವಾಗಿದ್ದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





